ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2021ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಮಂಡನೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ 93,224.31 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದಾರೆ. ಅದರಲ್ಲಿ ಶಾಲಾ ಶಿಕ್ಷಣಕ್ಕಾಗಿ ಒಟ್ಟು 54,873.66 ಕೋಟಿ ರೂ. ಮತ್ತು ಉನ್ನತ ಶಿಕ್ಷಣಕ್ಕೆ 38,350.65 ಕೋಟಿ ರೂಗಳನ್ನು ನೀಡಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಕಳೆದ ಬಾರಿಗಿಂತ ಈ ಬಾರಿ ಶೆ.9.5ರಷ್ಟು ಹೆಚ್ಚಿನ ಹಂಚಿಕೆಯನ್ನು ಮಾಡಿದ್ದಾರೆ. ಉನ್ನತ ಶಿಕ್ಷಣ ಹಂಚಿಕೆಗಾಗಿ ವರ್ಷದಿಂದ ವರ್ಷಕ್ಕೆ ಶೇಕಡಾ 16.5 ರಷ್ಟು ಹೆಚ್ಚಳವಾಗಿದ್ದರೆ, ಶಾಲಾ ಶಿಕ್ಷಣ ವಿಭಾಗಕ್ಕೆ ಶೇ. 5.1 ರಷ್ಟು ಹೆಚ್ಚಳವಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಅನೇಕ ನಗರಗಳಲ್ಲಿ ವಿವಿಧ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಭಾರತ ಸರ್ಕಾರದಿಂದ ಬೆಂಬಲಿತವಾಗಿದೆ. ಉದಾಹರಣೆಗೆ ಹೈದರಾಬಾದ್ ಸುಮಾರು 40 ಪ್ರಮುಖ ಸಂಸ್ಥೆಗಳನ್ನು ಹೊಂದಿದೆ ಎಂದಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಪ್ರತ್ಯೇಕ ಹಂಚಿಕೆ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದ್ದರೂ, ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಅಂತಹ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ.
ವಿವಿಧ ಯೋಜನೆಗಳಲ್ಲಿ, ರಾಷ್ಟ್ರೀಯ ಉಚ್ತಾರ್ ಶಿಕ್ಷಾ ಅಭಿಯಾನ (ರುಸಾ) ಬಿಇ 2021-22ರಲ್ಲಿ 3,000 ಕೋಟಿ ರೂ.ಗಳ ಹಂಚಿಕೆಯನ್ನು ಪಡೆದುಕೊಂಡಿದೆ. ಪರಿಷ್ಕೃತ ಅಂದಾಜು 2020-21ರಲ್ಲಿ 166 ಕೋಟಿ ರೂಗಳನ್ನು ಪಡೆದುಕೊಂಡಿತ್ತು.
ರುಸಾ ಕೇಂದ್ರ-ಪ್ರಾಯೋಜಿತ ಯೋಜನೆಯಾಗಿದ್ದು, ಇದು ಸಂಸ್ಥೆಗಳ ಗುಣಮಟ್ಟವನ್ನು ಸುಧಾರಿಸುವ, ಸ್ವಯಂ ಸ್ವಾಯತ್ತತೆಯನ್ನು ಉತ್ತೇಜಿಸುವ ಮತ್ತು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಅಧ್ಯಾಪಕರ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಎಸ್ಸಿ / ಎಸ್ಟಿ, ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಸೇರಿಸುವುದು ಸೇರಿದಂತೆ ವೈವಿಧ್ಯತೆಯನ್ನು ಉತ್ತೇಜಿಸುತ್ತದೆ.