ಸರಕಾರಿ ಅಧಿಕಾರಿಗಳ ನೇಮಕಾತಿ ನಂತರ ಕೌಶಲ್ಯ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ " ಕರ್ಮಯೋಗಿ" ರಾಷ್ಟ್ರೀಯ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಏನಿದು ಕರ್ಮಯೋಗಿ ಯೋಜನೆ:
ಮಿಷನ್ ಕರ್ಮಯೋಗಿ ನಾಗರಿಕ ಸೇವಾ ಸಾಮರ್ಥ್ಯ ವೃದ್ಧಿಗಾಗಿ ಹೊಸ ರಾಷ್ಟ್ರೀಯ ವಾಸ್ತುಶಿಲ್ಪದ ಪರಿಕಲ್ಪನೆಯಾಗಿದೆ. ಅಧಿಕಾರಿಗಳ ಕೌಶಲ್ಯ ಅಭಿವೃದ್ದಿ ಪಡಿಸುವ, ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಅಧಿಕಾರಿಗಳು ಮತ್ತು ನ್ಯಾಯ ಸಮ್ಮತದಲ್ಲಿ ಜನರಿಗೆ ಹತ್ತಿರವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ತರಲಾಗಿದೆ.
ಅಧಿಕಾರಿಗಳಿಗೆ ಅಗತ್ಯ ನಾಗರಿಕ ಸೇವೆಗಳಲ್ಲಿ ವೃತ್ತಿಜೀವನದ ತರಬೇತಿಗಳನ್ನು ನೀಡುವ ಮೂಲಕ ಅಧಿಕಾರಿಗಳ ನಿಷ್ಟೆ ಮತ್ತು ಕರ್ತವ್ಯ ಪಾಲನೆಗೆ ಸಹಕಾರ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಕೇಂದ್ರ ಅಸ್ತು ಎಂದಿದೆ.
ನಾಗರಿಕ ಸೇವೆಯಲ್ಲಿರುವ ವ್ಯಕ್ತಿಯು ಸಮಾಜದ ಸವಾಲುಗಳನ್ನು ಎದುರಿಸಲು , ಹೊಸತನದ ತುಡಿತ, ಉತ್ಸಾಹಯುತವಾಗಿ ಹಾಗೂ ಸೃಜನಶೀಲತೆಗಳನ್ನು ಹೊಂದಿರಬೇಕು ಈ ನಿಟ್ಟಿನಲ್ಲಿ ಈ ಕರ್ಮಯೋಗಿ ಕಾರ್ಯಕ್ರಮ ಸಹಾಯವಾಗಲಿದೆ ಎಂದು ಕಾರ್ಯದರ್ಶಿ ಸಿ. ಚಂದ್ರಮೌಳಿ ತಿಳಿಸಿದ್ದಾರೆ.