ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ (ಎನ್ಸಿಟಿಇ) ಅನುಮತಿ ಪಡೆಯದೇ ನೀಡುತ್ತಿರುವ ಶಿಕ್ಷಕರ ಶಿಕ್ಷಣ ಕೋರ್ಸ್ಗಳಿಗೆ ಪೂರ್ವಾನ್ವಯವಾಗುವಂತೆ ಮಾನ್ಯತೆ ನೀಡುವುದಕ್ಕಾಗಿ ಈಗಿನ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳು, ಇತರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್ಗಳಿಗೆ ನೋಂದಣಿ ಮಾಡಿದ ಹಾಗೂ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರಕ್ಕೆ ಬರಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 1993ರ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಮ್ಮತಿಸಿದೆ.
ಪ್ರಸ್ತಾವಿತ ತಿದ್ದುಪಡಿಯು ಸಂಸತ್ತಿನ ಅನುಮೋದನೆಯ ನಂತರವಷ್ಟೇ ಜಾರಿಗೆ ಬರಲಿದೆ. ಒಂದು ಬಾರಿಯ ಕ್ರಮವಾಗಿ ಪೂರ್ವಾನ್ವಯವಾಗುವಂತೆ ಮಾನ್ಯತೆ ನೀಡಲಾಗುವುದು.
ಇದಕ್ಕಾಗಿ, ಕೇಂದ್ರ ಸರ್ಕಾರ 'ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ತಿದ್ದುಪಡಿ) ಮಸೂದೆ-2017' ಅನ್ನು ಸಂಸತ್ತಿನಲ್ಲಿ ಮಂಡಿಸಲಿದೆ.
ಕೇಂದ್ರ, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಂದ ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಗಳು, ಇಲ್ಲವೇ ವಿಶ್ವವಿದ್ಯಾಲಯಗಳು ಎನ್ಸಿಟಿಇಯ ಅನುಮತಿ ಪಡೆಯದೆ 2017-2018ರ ಶೈಕ್ಷಣಿಕ ವರ್ಷದವರೆಗೆ ನೀಡಿದ ಶಿಕ್ಷಕ ಶಿಕ್ಷಣ ಕೋರ್ಸ್ಗಳಿಗೆ ಪೂರ್ವಾನ್ವಯವಾಗುವಂತೆ ಮಾನ್ಯತೆ ನೀಡಲು ಪ್ರಸ್ತಾವಿತ ತಿದ್ದುಪಡಿಯು ಅವಕಾಶ ನೀಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಬಿ.ಇಡಿ ಮತ್ತು ಡಿ.ಇಡಿ (ಡಿಪ್ಲೊಮಾ ಇನ್ ಎಲಿಮೆಂಟರ್ ಎಜುಕೇಷನ್) ಕೋರ್ಸ್ಗಳನ್ನು ನೀಡುವ ದೇಶದ ಪ್ರತಿ ಸಂಸ್ಥೆಯೂ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯಿಂದ ಅನುಮತಿ ತೆಗೆದುಕೊಳ್ಳುವುದು ಕಡ್ಡಾಯ.
ಈ ಸಂಸ್ಥೆಗಳಲ್ಲಿ ಅಥವಾ ವಿವಿಗಳಲ್ಲಿ ಕಲಿಯುತ್ತಿರುವ ಅಥವಾ ಈಗಾಗಲೇ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ನೌಕರಿ ಪಡೆಯಲು ಈ ತಿದ್ದುಪಡಿ ಅವಕಾಶ ನೀಡಲಿದೆ ಎಂದು ಹೇಳಿಕೆ ವಿವರಿಸಿದೆ.