ಸೆ.11 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಡುವ ಭಾಷಣವನ್ನು ವಿಶ್ವವಿದ್ಯಾಲಯಗಳಲ್ಲಿ ಪ್ರಸಾರ ಮಾಡುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಎಲ್ಲಾ ವಿವಿಗಳಿಗೂ ಸೂಚನೆ ನೀಡಿದೆ.
ದೀನ್ ದಯಾಳ್ ಉಪಾಧ್ಯಾಯ ಅವರ 100ನೇ ವರ್ಷಾಚರಣೆ ಹಾಗೂ ಸ್ವಾಮಿ ವಿವೇಕಾನಂದ ಅವರು ಶಿಕಾಗೊ ವಿಶ್ವಧರ್ಮ ಸಂಸತ್ತಿನಲ್ಲಿ ಉದ್ದೇಶಿಸಿ ನೀಡಿದ ಭಾಷಣದ 125ನೇ ವರ್ಷದ ಸ್ಮರಣಾರ್ಥ ಪ್ರಧಾನಿ ಮೋದಿ ಅವರು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸೆ. 11ರಂದು ಬೆಳಿಗ್ಗೆ 10.30ಕ್ಕೆ ಭಾಷಣ ಮಾಡಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ. 11ರಂದು ಮಾಡಲಿರುವ ಭಾಷಣವನ್ನು ವಿಶ್ವವಿದ್ಯಾಲಯದ ಎಲ್ಲ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯವಾಗಿ ವೀಕ್ಷಿಸುವಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಸುತ್ತೋಲೆ ಹೊರಡಿಸಿವೆ.
ವಿ.ವಿ ವ್ಯಾಪ್ತಿಯ ಎಲ್ಲ ಅಧ್ಯಯನ ವಿಭಾಗಗಳ ನಿರ್ದೇಶಕರು, ಅಧ್ಯಕ್ಷರು, ಕಾಲೇಜುಗಳ ಪ್ರಾಂಶುಪಾಲರಿಗೆ ತಮ್ಮ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಕರೆತರುವಂತೆ ನಿರ್ದೇಶನ ನೀಡಲಾಗಿದೆ.
ಮೋದಿ ಮಾಡುವ ಭಾಷಣವನ್ನು ದೇಶಾದ್ಯಂತ ಸುಮಾರು 40 ಸಾವಿರ ಕಾಲೇಜುಗಳಲ್ಲಿ ನೇರಪ್ರಸಾರ ಮಾಡುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಅಧಿಸೂಚನೆ ಹೊರಡಿಸಿದೆ.
ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಭಾಷಣ ಆಲಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲು ವಿಶ್ವವಿದ್ಯಾಲಯಗಳ ಕುಲಪತಿ ಹಾಗೂ ಕಾಲೇಜು ಮುಖ್ಯಸ್ಥರಿಗೆ ಯುಜಿಸಿ ಸೂಚಿಸಿದೆ. ಕ್ಯಾಂಪಸ್ ಆವರಣದಲ್ಲಿನ ಸಭಾಂಗಣದಲ್ಲಿ ಟಿವಿ/ಪ್ರೊಜೆಕ್ಟರ್ ಅಳವಡಿಸಬೇಕು. ಈ ಕುರಿತು ನೋಟಿಸ್ ಬೋರ್ಡ್ನಲ್ಲಿ ವಿವರವಾದ ಸೂಚನೆ ನೀಡಬೇಕು ಎಂದು ಯುಜಿಸಿ ಪ್ರಭಾರ ಮುಖ್ಯಸ್ಥ ವಿ.ಎಸ್.ಚೌಹಾಣ್ ತಿಳಿಸಿದ್ದಾರೆ.
'ಯುವ ಭಾರತ, ನವ ಭಾರತ - ಪುನರುಜ್ಜೀವಿತ ರಾಷ್ಟ್ರ: ಸಂಕಲ್ಪದಿಂದ ಸಿದ್ಧಿವರೆಗೆ' ಎಂಬ ವಿಷಯವಾಗಿ ಪ್ರಧಾನಿ ಮಾತನಾಡಲಿದ್ದಾರೆ