ಮಹದಾಯಿ ನೀರಿನ ಬಿಸಿ ಶಾಲಾ-ಕಾಲೇಜುಗಳಿಗೂ ತಟ್ಟಿದೆ. ಬಂದ್ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಅಲ್ಲದೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಸವದತ್ತಿ, ರಾಮದುರ್ಗ ಹಾಗೂ ಗದಗ ಸೇರಿದಂತೆ ಜಿಲ್ಲೆಯ ನರಗುಂದ, ರೋಣ ತಾಲ್ಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬಂದ್ ಹಿನ್ನೆಲೆ ಇಂದು ನಡೆಯಬೇಕಿದ್ದ ಹಲವು ವಿವಿಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ವಿವಿ ಪರೀಕ್ಷೆಗಳು ಮುಂದಕ್ಕೆ
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ(ವಿಟಿಯು) ಪರೀಕ್ಷೆಗಳು ಜ.8ಕ್ಕೆ
ವಿಟಿಯು 1ನೇ ಹಾಗೂ 3ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಪರೀಕ್ಷೆಗಳನ್ನು ಜನವರಿ 8ರಂದು ನಡೆಸಲಾಗುವುದು ಎಂದು ವಿಟಿಯು ಕುಲಸಚಿವ ಜಗನ್ನಾಥ್ ರೆಡ್ಡಿ ತಿಳಿಸಿದ್ದರೆ. ಈ ಸೆಮಿಸ್ಟರ್ನ ಹಳೆಯ ಸ್ಕೀಂ ಪರೀಕ್ಷೆಗಳನ್ನು ಡಿ.29ಕ್ಕೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ವಿಶ್ವ ವಿದ್ಯಾಲಯ ಸ್ನಾತಕೋತ್ತರ 3ನೇ ಸೆಮೆಸ್ಟರ್ ಪರೀಕ್ಷೆ ಮುಂದೂಡಲಾಗಿದೆ. ಡಿ.27ರಂದು ನಡೆಯಿಬೇಕಿದ್ದ ಪರೀಕ್ಷೆಯನ್ನು ಜ.7ಕ್ಕೆ ಮುಂದೂಡಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಓಇಸಿ (ಓಪನ್ ಎಲೆಕ್ಟಿವ್ ಕ್ಲಾಸ್) ಪರೀಕ್ಷೆಯನ್ನು ಜನವರಿ 7ಕ್ಕೆ ಮುಂದೂಡಲಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನೂ ಮುಂದೂಡಲಾಗಿದ್ದು, ಡಿಸೆಂಬರ್ 31ರಂದು ನಡೆಯಲಿವೆ ಎಂದು ವಿ.ವಿ. ಮೌಲ್ಯಮಾಪನ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ವಿವಿಯ ಯುಜಿ ಪರೀಕ್ಷೆಗಳು ಮುಂದಕ್ಕೆ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕ ಪದವಿ ಪರೀಕ್ಷೆಗಳನ್ನು ಗುರುವಾರ (ಡಿ 28), ಸ್ನಾತಕೋತ್ತರ ಪದವಿ (ಪಿಜಿ) ಪರೀಕ್ಷೆಗಳನ್ನು ಶುಕ್ರವಾರ (ಡಿ.29) ನಡೆಸಲಾಗುವುದು ಎಂದು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಬಿ.ಮಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Click it and Unblock the Notifications











