ಇತ್ತೀಚೆಗಷ್ಟೆ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅವರು ರಾಜಕೀಯ (ಪ್ರಜಾಕೀಯ)ದ ಪಕ್ಷದ ಮಾಹಿತಿಯನ್ನು ಬಹಿರಂಗ ಪಡಿಸಿ ರಾಜ್ಯದಲ್ಲಿ ಸಂಚಲನವನ್ನೇ ಸೃಸ್ಟಿಸಿದ್ದಾರೆ.
ಈ ನಾಡಿನ ಬಗ್ಗೆ ತಮ್ಮದೇ ಆದ ವಿಶಿಷ್ಟ ಕಲ್ಪನೆಯನ್ನು ಕಟ್ಟಿಕೊಂಡು ರಾಜಕೀಯ ಪ್ರವೇಶ ಮಾಡಿರುವ ಉಪೇಂದ್ರ ಅವರು ಶಿಕ್ಷಣ ಮತ್ತು ಉದ್ಯೋಗದ ಬಗ್ಗೆಯು ಚಿಂತನೆ ನಡೆಸಿದ್ದಾರೆ.

ತಮ್ಮ ಹೊಸ ಪಕ್ಷ " ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)" ಯ ಅಧಿಕೃತ ಘೋಷಣೆ ವೇಳೆ ಉಪ್ಪಿ ಶಿಕ್ಷಣ ಬದಲಾಗಬೇಕು ಮತ್ತು ಉದ್ಯೋಗ ವ್ಯವಸ್ಥೆಯಯಲ್ಲಿ ಬದಲಾವಣೆ ಬೇಕು ಎಂದು ಹೇಳಿದರು.
ಇಂದಿನ ಶಿಕ್ಷಣ ವ್ಯವಸ್ಥೆಯೇ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಶಿಕ್ಷಣ ವ್ಯವಸ್ಥೆ ಬದಲಾದರೆ ಸಮಾಜದ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿದರು.
ಯುವಕರು ಹಳ್ಳಿಗಳಲ್ಲಿ ಕೃಷಿಯನ್ನು ಬಿಟ್ಟು ಕಡಿಮೆ ಸಂಬಳಕ್ಕಾಗಿ ನಗರದತ್ತ ಬರುತ್ತಿರುವುದು ಹಾಗೂ ವಿದ್ಯೆಗೂ ಉದ್ಯೋಗಕ್ಕೂ ಸಂಬಂಧವಿಲ್ಲದೆ ದುಡಿಯುತ್ತಿರುವುದರ ಬಗ್ಗೆ ಮಾತನಾಡಿದರು.
ಇಂಜಿನಿಯರ್ ಗಳನ್ನು ಉದಾಹರಣೆ ನೀಡುತ್ತ ಮಾತನಾಡಿದ ಉಪ್ಪಿ "ಇಂದಿನ ಓದಿಗು ಮಾಡುತ್ತಿರುವ ಕೆಲಸಗಳಿಗು ಸಂಬಂಧವೇ ಇಲ್ಲದಂತಾಗಿದೆ. ನಾಲ್ಕೈದು ವರ್ಷ ಕಷ್ಟಪಟ್ಟು ಓದಿ, ಲಕ್ಷಾಂತರ ಹಣ ಖರ್ಚು ಮಾಡಿ ಇಂಜಿನಿಯರಿಂಗ್ ಪದವಿ ಪಡೆದು ಯಾವುದೋ ಕೆಲಸಕ್ಕೆ ಸೇರುತ್ತಿರುವವರ ಹಾಗೂ ಬೇರೆ ದೇಶದ ಕಂಪನಿಗಳಿಗಾಗಿ ದುಡಿಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಬೇಕಿದೆ" ಎಂದರು.
ಅಷ್ಟೇ ಅಲ್ಲದೆ ಉದ್ಯೋಗದ ಬಗ್ಗೆ ಮತ್ತಷ್ಟು ಮಾತನಾಡಿದ ಉಪ್ಪಿ ಹಳ್ಳಿಗಳಿಂದ ಉದ್ಯೋಗಕ್ಕಾಗಿ ನಗರಗಳತ್ತ ಮುಖ ಮಾಡುತ್ತಿರುವ ಯುವಕರು ಹಳ್ಳಿಗಳಲ್ಲೇ ಉದ್ಯೋಗ ಕಂಡುಕೊಳ್ಳುವಂತಾಗಬೇಕು ಎಂದು ಹೇಳಿದರು.
ಸ್ಮಾರ್ಟ್ ಸಿಟಿ ರೀತಿ ಸ್ಮಾರ್ಟ್ ಹಳ್ಳಿಗಳನ್ನು ನಿರ್ಮಿಸಿದರೆ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಹಳ್ಳಿಗಳು ಸ್ಮಾರ್ಟ್ ಆದರೆ ಸಿಟಿ ತಾನಾಗೇ ಸ್ಮಾರ್ಟ್ ಆಗುತ್ತದೆ ಎಂಬ ಹೊಸ ಕಲ್ಪನೆಯನ್ನು ಜನತೆಯ ಮುಂದಿಟ್ಟಿದ್ದಾರೆ.
ಒಟ್ಟಿನಲ್ಲಿ ನಿರ್ದೇಶಕ-ನಟ-ನಿರ್ಮಾಪಕ ಹೀಗೆ ಸಿನಿಮಾ ರಂಗದಲ್ಲಿ ಅಗಾಧ ಅನುಭವ ಹೊಂದಿದ ಉಪೇಂದ್ರ ಅವರ ರಾಜಕೀಯ, ರಾಜಕಾರಣ ಬಗ್ಗೆ ಇರುವ ಪರಿಕಲ್ಪನೆ ಸಾಕಾರವಾಗಿ ಬಿಟ್ಟರೆ ಖಂಡಿತಾ ಅತಿ ದೊಡ್ಡ ಬದಲಾವಣೆಯನ್ನು ಎದುರು ನೋಡಬಹುದು.


Click it and Unblock the Notifications











