ತಮಿಳುನಾಡಿನ ಎಲ್ಲ ಶಾಲೆಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಕಡ್ಡಾಯವಾಗಿ ಹಾಡಬೇಕೆಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ಬೆಂಗಾಲಿಯ ಖ್ಯಾತ ಬರಹಗಾರರಾದ ಬಂಕಿಮಚಂದ್ರ ಚಟರ್ಜಿ ಬರೆದಿರುವ ವಂದೇ ಮಾತರಂ ಗೀತೆಯನ್ನು ಶಾಲೆಗಳಲ್ಲಿ ಕನಿಷ್ಠ ವಾರಕ್ಕೊಮ್ಮೆ, ಸಂಸ್ಥೆಗಳಲ್ಲಿ ಕನಿಷ್ಠ ತಿಂಗಳಿಗೊಮ್ಮೆ ಹಾಡನ್ನು ನುಡಿಸಬೇಕೆಂದು ನ್ಯಾಯಾಧೀಶ ಎಂ.ವಿ.ಮುರಳೀಧರನ್ ತೀರ್ಪು ನೀಡಿದ್ದಾರೆ.
ಯುವಜನತೆಯಲ್ಲಿ ದೇಶಾಭಿಮಾನ ಹೆಚ್ಚಿಸಲು ಹಾಗೂ ಅವರಲ್ಲಿ ಸ್ಪೂರ್ತಿಯನ್ನು ತುಂಬಲು ಈ ಗೀತೆಯು ಅವಶ್ಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈ ಗೀತೆಯನ್ನು ಬಂಗಾಳಿ ಅಥವಾ ಸಂಸ್ಕೃತದಲ್ಲಿ ಹೇಳಲು ಜನರಿಗೆ ಕಷ್ಟ ಎನಿಸಿದರೆ, ಅದನ್ನು ತಮಿಳಿನಲ್ಲಿ ತರ್ಜುಮೆ ಮಾಡಲು ಕ್ರಮ ತೆಗೆದು ಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ. ಯಾವುದಾದರೂ ಕಾರಣಕ್ಕೆ, ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಗೆ ವಂದೇ ಮಾತರಂ ಗೀತೆಯನ್ನು ಹಾಡಲು ಅಥವಾ ನುಡಿಸಲು ಸಾಧ್ಯವಾಗದೇ ಇದ್ದರೆ, ಅವರಿಗೆ ಒತ್ತಾಯ ಮಾಡಬಾರದು. ಆದರೆ ಹೀಗೆ ಮಾಡಲು ಏನು ಕಾರಣ ಎಂಬುದನ್ನು ಅವರು ತಿಳಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಒಂದು ಅಂಕದಿಂದ ಸಿಕ್ಕ ತೀರ್ಪು
ಶಿಕ್ಷಕ ಹುದ್ದೆಗೆ ನಡೆಸಲಾದ ಪರೀಕ್ಷೆಯಲ್ಲಿ ಒಂದು ಅಂಕ ಕಡಿಮೆ ಸಿಕ್ಕ ಕಾರಣ, ಹುದ್ದೆಯಿಂದ ವಂಚಿತರಾದ ಕೆ. ವೀರಮಣಿ ಎನ್ನುವವರು ಸಲ್ಲಿಸಿದ್ದ ಅರ್ಜಿಯೇ ಇಷ್ಟಕ್ಕೆಲ್ಲ ಕಾರಣ. 'ವಂದೇ ಮಾತರಂ' ಭಾಷೆ ಯಾವ ಭಾಷೆಯಲ್ಲಿದೆ ಎಂದು ಕೇಳಿದ್ದ ಪ್ರಶ್ನೆಗೆ ಬಂಗಾಳಿ ಭಾಷೆಯಲ್ಲಿದೆ ಎಂದು ಇವರು ಉತ್ತರಿಸಿದ್ದರು. ಆದರೆ ಈ ಉತ್ತರ ತಪ್ಪು ಎಂದು ಇಲಾಖೆ ಅಂಕ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಕೋರ್ಟ್ ಮೊರೆ ಹೋಗಿದ್ದರು. ಇವರನ್ನು ನೇಮಕಾತಿಯ ಪಟ್ಟಿಯಲ್ಲಿ ಸೇರಿಸುವಂತೆ ಹೇಳಿದ ಕೋರ್ಟ್ ಮೇಲಿನಂತೆ ಆದೇಶಿಸಿದೆ.
ಮೂಲ ಹಾಡು ಬರೆಯಲ್ಪಟ್ಟಿರುವುದು ಸಂಸ್ಕೃತ ಭಾಷೆಯಲ್ಲಿ, ಆದರೆ ಬಂಗಾಲಿ ಲಿಪಿಯಲ್ಲಿ ಎಂಬುದು ಇದಕ್ಕೆ ಉತ್ತರ. ಅರ್ಜಿದಾರರಿಗೆ ಕೆಲಸ ನೀಡುವಂತೆ ಕೋರ್ಟ್ ಆದೇಶಿಸಿದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿ ಸೃಷ್ಟಿಸಿದ ಈ ಗೀತೆ ಹುಟ್ಟಿದ ರೀತಿಯೇ ಅದ್ಭುತ. ಬಂಗಾಲದಲ್ಲಿ ಜನಿಸಿದ ಬಂಕಿಮಚಂದ್ರ ಚಟರ್ಜಿಯವರು ಬಾಲ್ಯದಲ್ಲಿ ಒಮ್ಮೆ ತಮ್ಮ ಊರು ಕಂಟಾಲಪಾಡದ ಕಡೆಗೆ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹಸಿರುಕ್ಕಿ ಬೆಳಗುವ, ನಾನಾ ಹೂವುಗಳ ಕಣ್ಣು ಕೋರೈಸುವ ಬಣ್ಣದ ಚಿತ್ತಾರದಿಂದ ಮೆರೆಯುವ, ನದಿಸರೋವರಗಳ ನೀರಿನಿಂದ ಸಂಪನ್ನವಾದ ಭೂರಮೆಯ ಸೌಂದರ್ಯವನ್ನು ಕಂಡು ಆನಂದತುಂದಿಲರಾದರು. ಭಾರತಮಾತೆ ತನ್ನೆಲ್ಲ ಸೌಂದರ್ಯದೊಂದಿಗೆ ಮೆರೆಯುತ್ತಿದ್ದಾಳೆ ಎಂಬ ಕಲ್ಪನೆ ಅವರ ಮನಸ್ಸಿಗೆ ಬಂದಿತು. ಅವರ ಆ ಕ್ಷಣದ ಕಲ್ಪನೆಯೇ ಭಾರತದ ಸ್ವಾತಂತ್ರ್ಯಕ್ಕೆ ಕಾರಣವಾದ ಗೀತೆಯನ್ನು ಸೃಷ್ಟಿಸಿತು.
1875ರಲ್ಲೇ ರಚನೆಯಾದರೂ 'ಆನಂದಮಠ' ಕಾದಂಬರಿಯಲ್ಲಿ ಈ ಹಾಡು ಕಾಣಿಸಿಕೊಳ್ಳುವವರೆಗು ಈ ಗೀತೆ ಜನಪ್ರಿಯತೆ ಪಡೆದಿರಲಿಲ್ಲ. 'ಆನಂದಮಠ' ಸಂನ್ಯಾಸಿಗಳ ಬಂಡಾಯದ ಬಗ್ಗೆ ಇರುವ ಕಾದಂಬರಿ. ಬಂಧಮುಕ್ತಿಯ ವಸ್ತುವುಳ್ಳ ಈ ಕಾದಂಬರಿ ಹಾಗೂ ಬಂಡಾಯದ ನಾಯಕದ ಕಂಠದಿಂದ ಹೊರಹೊಮ್ಮುವ ಈ ಹಾಡು ಸ್ವಾತಂತ್ರ್ಯ ಹೋರಾಟಗಾರರ ನಡುವೆ ಜನಪ್ರಿಯವಾಯಿತು.
ಹಾಡಿನ ಅರ್ಥ
ಹಾಡಿನ ಮೊದಲ ಎರಡು ಚರಣಗಳ ಅರ್ಥ ಹೀಗಿದೆ: ''ತಾಯೇ, ನಿನಗೆ ನಮಿಸುವೆ. ಸಮೃದ್ಧವಾದ ನದಿಗಳಿಂದ, ಪುಷ್ಟವಾದ ಫಲಪುಷ್ಪಗಳಿಂದ, ಮಲಯಪರ್ವತದಿಂದ ಬೀಸಿಬರುವ ಶೀತಲ ಮಾರುತಗಳಿಂದ, ಸಸ್ಯ ಶ್ಯಾಮಲೆಯಾಗಿ ಶೋಭಿಸುತ್ತಿರುವ ನಿನಗೆ ವಂದಿಸುವೆ. ಶುಭ್ರವಾದ ಬೆಳದಿಂಗಳಿನಿಂದ ಸಂಪನ್ನವಾದ ಇರುಳುಗಳು, ಮರಗಳಲ್ಲಿ ಬಿಟ್ಟ ಚಿಗುರು ಹೂವುಗಳಿಂದ ಶೋಭಿಸುವ, ಮುಗುಳುನಗೆಯುಳ್ಳ, ಸುಮಧುರವಾದ ರೀತಿಯಲ್ಲಿ ಸಂಭಾಷಿಸುವವಳು, ಸುಖಪ್ರದಾಯಿನಿಯಾದವಳು, ವರವನ್ನು ನೀಡಬಲ್ಲ ಶಕ್ತಿಯುಳ್ಳವಳಾದ ನಿನ್ನ ಅಡಿಗಳಿಗೆ ನಮಿಸುತ್ತೇನೆ''