ವಿಶ್ವವಿದ್ಯಾಲಯಗಳ ನೇಮಕಾತಿ ಸಂಬಂಧ ನಡೆದ ಸಭೆಯಲ್ಲಿ ರಾಜ್ಯದ ಎಲ್ಲಾ ಕುಲಪತಿಗಳು ಕೇಂದ್ರೀಕೃತ ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೇಂದ್ರೀಕೃತ ನೇಮಕಾತಿ ಬಗ್ಗೆ ರಾಜ್ಯ ಸರ್ಕಾರ ಹೇಳಿಕೆ ನೀಡಿತ್ತು. ನಿನ್ನೆ ರಾಜ್ಯದ ಎಲ್ಲಾ ವಿವಿಗಳ ಕುಲಪತಿಗಳ ಸಭೆ ಕರೆದು ನೇಮಕಾತಿ ಮಸೂದೆಯ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ.
ಕುಟಿನ್ಹೋ ಉಸ್ತುವಾರಿಯಲ್ಲಿ ತೀರ್ಮಾನ
ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ವಿ.ಬಿ.ಕುಟಿನ್ಹೊ ಈ ನಿಯಮಾವಳಿಯ ಉಸ್ತುವಾರಿ ಹೊತ್ತಿದ್ದು ಯುಜಿಸಿ ಮಾರ್ಗಸೂಚಿ ಅನ್ವಯ ಏಕ ರೂಪದ ನಿಯಮಾವಳಿ ರೂಪಿಸಲು ಎಂಟು ದಿನಗಳೊಳಗೆ ಎಲ್ಲ ಮಾಹಿತಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ನಿಂತು ಹೋಗಿದೆ. ಇದಕ್ಕೆ ಮತ್ತೆ ಚಾಲನೆ ನೀಡಬೇಕು. ಕೇಂದ್ರೀಕೃತ ನೇಮಕಾತಿಗೆ ಪೂರಕವಾಗಿ ನಿಯಮಾವಳಿಯಲ್ಲಿ ಬದಲಾವಣೆ ತರಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ (2000)ಗೆ ತಿದ್ದುಪಡಿ ತರಲಾಗುವುದು. ರಾಜ್ಯಪಾಲರು ಕುಲಾಧಿಪತಿಯೂ ಆಗಿರುವುದರಿಂದ ಅವರ ಗಮನಕ್ಕೆ ತಂದು ಈ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಮಸೂದೆಗೆ ತಿದ್ದುಪಡಿ ಆದ ಬಳಿಕ ನೇಮಕಾತಿ ಅಧಿಕಾರ ಕೇಂದ್ರೀಕೃತ ನೇಮಕಾತಿ ಸಮಿತಿಗೆ ಮಾತ್ರ ಇರುತ್ತದೆ. ಇದರಿಂದ ನೇಮಕಾತಿಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದೂ ಅವರು ತಿಳಿಸಿದರು.
ಸಮಿತಿ ರಚನೆಗೆ ಕಾರಣ
ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳಾದ್ದರಿಂದ ಅಲ್ಲಿನ ಬೋಧಕ, ಬೋಧಕೇತರ ಹುದ್ದೆಗಳ ನೇಮಕಕ್ಕೆ ಸರ್ಕಾರದ ಅನುಮತಿ ಪಡೆಯಬೇಕಿಲ್ಲ. ಆದರೆ, ಇದನ್ನೇ ನೆಪ ಮಾಡಿಕೊಂಡು ಅನೇಕ ವಿಶ್ವವಿದ್ಯಾಲಯಗಳ ಕುಲಪತಿಗಳು, ನೇಮಕಾತಿಗಳಲ್ಲಿ ಅಕ್ರಮ ಎಸಗಿದ್ದಾರೆಂಬ ದೂರುಗಳು ಬಂದಿದ್ದವು. ಅಲ್ಲದೇ ಮೈಸೂರು ವಿವಿ, ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿವಿ ಸೇರಿದಂತೆ ಈಗಾಗಲೇ ಹಲವು ವಿವಿಗಳಲ್ಲಿ ನೇಮಕಾತಿ ಪ್ರಕ್ರಿಯೆ ಅರ್ಧಕ್ಕೆ ನಿಂತಿರುವುದು ಅನೇಕ ಉದ್ಯೋಗಾಕಾಂಕ್ಷಿಗಳಲ್ಲಿ ಬೇಸರ ಮೂಡಿಸಿದೆ. ಹೊಸ ನಿಯಮ ಜಾರಿಗೆ ಬಂದ ನಂತರ ಈ ರೀತಿಯ ತೊಂದರೆಗಳು ಸಂಭವಿಸುವುದಿಲ್ಲ ಎನ್ನವುದು ಸಮಾಧಾನದ ಸಂಗತಿ.


Click it and Unblock the Notifications











