ಇಂದು ಜುಲೈ 26. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯಪತಾಕೆ ಹಾರಿಸಿದ ದಿನ. ಭಾರತೀಯ ಸೇನೆ ಇಂದು 18ನೇ ಕಾರ್ಗಿಲ್ ವಿಜಯ ದಿವಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
1999ರ ಜುಲೈ 26ರಂದು 60 ದಿನಗಳ ಕಾಲ ನಡೆದ ಯುದ್ಧದಲ್ಲಿ ಭಾರತವು ಪಾಕಿಸ್ತಾವನ್ನು ಮಣಿಸಿತ್ತು. ಪಾಕ್ ಮೇಲೆ ಭಾರತೀಯ ಯೋಧರು ವಿಜಯ ಸಾಧಿಸಿದ ಸ್ಮರಣಾರ್ಥ ಇಂದು ದೇಶದೆಲ್ಲೆಡೆ 'ಕಾರ್ಗಿಲ್ ವಿಜಯ್ ದಿವಸ್' ಆಚರಿಸಲಾಗುತ್ತಿದೆ. ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ. ಹೀಗಾಗಿ ಪ್ರತಿ ವರ್ಷ ಜುಲೈ 26ರಂದು 'ಕಾರ್ಗಿಲ್ ವಿಜಯ್ ದಿವಸ್' ಆಚರಿಸಲಾಗುತ್ತಿದೆ.
ಭಾರತೀಯ ಸೇನೆ ಈ ದಿನವನ್ನು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಗೌರವ ಸಲ್ಲಿಸುವ ಮೂಲಕ ಆಚರಿಸುತ್ತಿದೆ.
ಅಂದಿನ ಯುದ್ಧದ ಸಂದರ್ಭದಲ್ಲಿ ಇಡೀ ದೇಶವೇ ಯೋಧರ ಸಹಾಯಕ್ಕೆ ನಿಂತಿತ್ತು. ರಾಷ್ಟ್ರನಾಯಕರಿಂದ ಜನಸಾಮಾನ್ಯರವರೆಗು ಯುದ್ಧದಲ್ಲಿ ಪರೋಕ್ಷವಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಂದ ಹಣ ಸಂಗ್ರಹ
ಭಾರತೀಯ ಸೈನಿಕರಿಗೆ ಯಾವುದೇ ರೀತಿಯ ತೊಂದರೆಗಳು ಆಗಬಾರದೆಂದು ಶಾಲಾ ವಿದ್ಯಾರ್ಥಿಗಳು ಶಾಲೆಗಳಲ್ಲಿ ಹಣ ಸಂಗ್ರಹಿಸುವ ಮೂಲಕ, ಆಹಾರ ಬಟ್ಟೆಗಳನ್ನು ಸಂಗ್ರಹಿಸಿ ಕಾರ್ಗಿಲ್ ಗೆ ಕಳುಹಿಸುವ ಮೂಲಕ, ಸೈನಿಕರಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತ ತಮ್ಮ ದೇಶ ಪ್ರೇಮ ಮೆರೆದಿದ್ದರು. ಮುಖ್ಯ ಸಂಗತಿ ಎಂದರೆ ಕಾರ್ಗಿಲ್ ಯುದ್ಧದ ಬಳಿಕ ಸೇನೆಗೆ ಸೇರುವ ಯುವಕರ ಸಂಖ್ಯೆಯು ಹೆಚ್ಚಿತು.
ಯುವಕರನ್ನು ಪ್ರೇರೇಪಿಸುವ ವಿಜಯ್ ದಿವಸ್
ಭಾರತೀಯ ಸೇನೆಯ ಶೌರ್ಯ ಪರಾಕ್ರಮ ಸಾರುವ ಈ ದಿನ ವಿದ್ಯಾರ್ಥಿಗಳಿಗೂ ಮಹತ್ವದ ದಿನವಾಗಿದೆ.
ಭಾರತೀಯ ಸೇನೆಯನ್ನು ಮತ್ತಷ್ಟು ಬಲ ಪಡಿಸಲು, ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕೆಂದು ಬಯಸುವ ಯುವಕರಿಗೆ ಅಂದಿನ ಕಾರ್ಗಿಲ್ ಯುದ್ಧದ ವಿಜಯ ಪ್ರೇರಣೆಯಾಗಿದೆ.