ಮಾಜಿ ಮುಖ್ಯಮಂತ್ರಿ ಧರಂಸಿಂಗ್ ನಿಧನದ ಹಿನ್ನೆಲೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಹಳೆಯ ಸ್ಕೀಂನ ಥಿಯರಿ ಪರೀಕ್ಷೆ ಸೇರಿದಂತೆ ಇಂದು ನಡೆಯಬೇಕಿದ್ದ ಇನ್ನಿತರ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಶುಕ್ರವಾರ (ಜುಲೈ 28) ನಡೆಸಬೇಕಿದ್ದ ಎಂ.ಬಿ.ಎ, ಎಂ.ಸಿ.ಎ ಹಾಗೂ ಎಂ.ಟೆಕ್ ಮತ್ತು ಬಿ.ಇ (ಹಳೆ ಸ್ಕೀಂ) ಕೋರ್ಸ್ನ ಥಿಯರಿ ಪರೀಕ್ಷೆಗಳನ್ನು ಆಗಸ್ಟ್ 1ಕ್ಕೆ ಮುಂದೂಡಿದೆ.
ಎಂಜಿನಿಯರಿಂಗ್ ಕೋರ್ಸ್ನ ಪ್ರಾಯೋಗಿಕ ಪರೀಕ್ಷೆಗಳನ್ನು ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಇದೇ 31ರಂದು ನಡೆಸಲಾಗುವುದು. ಇತರ ಜಿಲ್ಲೆಗಳಲ್ಲಿ ನಿಗದಿಯಂತೆ ಶುಕ್ರವಾರವೇ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ ಎಂದು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಸತೀಶ ಅಣ್ಣಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣಕ ಶಿಕ್ಷಣದ ಪರೀಕ್ಷೆ ( ಬೆಂಗಳೂರು): ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಶುಕ್ರವಾರ (ಜುಲೈ 28) ನಡೆಯಬೇಕಿದ್ದ ಗಣಕ ಶಿಕ್ಷಣದ ಆಫೀಸ್ ಆಟೋಮೇಷನ್ ವಿಷಯದ ಪರೀಕ್ಷೆ ಇದೇ 30ರಂದು ನಡೆಯಲಿದೆ.
ಧರಂಸಿಂಗ್ ಅವರ ನಿಧನದ ವಾರ್ತೆ ತಿಳಿಯುತ್ತಿದ್ದಂತೆ ನಿನ್ನೆ ಜು.27ರಂದು ರಾಜ್ಯ ಸರ್ಕಾರಿ ಕಚೇರಿಗಳಿಗೆ ಮತ್ತು ಶಾಲಾ ಕಾಲೇಜಿಗಳಿಗೂ (ಅನುದಾನ ಪಡೆಯುವ ಎಲ್ಲಾ ವಿದ್ಯಾಸಂಸ್ಥೆಗಳು ಸೇರಿದಂತೆ) ರಜೆ ಘೋಷಿಸಲಾಯಿತು. ಅಲ್ಲದೆ, ಜು.27 ರಿಂದ 29ರವರೆಗೆ ರಾಜ್ಯಾದ್ಯಂತ 3 ದಿನಗಳು ಶೋಕವನ್ನು ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ ಸಾರ್ವಜನಿಕ ಸಮಾರಂಭಗಳು, ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಹಾಗೂ ರಾಷ್ಟ್ರಧ್ವಜವನ್ನು ಹಾರಿಸಲಾಗುವ ಸರ್ಕಾರದ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುತ್ತದೆ.
ಜು.28ರಂದು ಮೃತರ ಅಂತ್ಯ ಸಂಸ್ಕಾರವು ಕಲಬುರಗಿ ಜಿಲ್ಲೆಯಲ್ಲಿ ನಡೆಯುವುದರಿಂದ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಎಲ್ಲ ಕಛೇರಿಗಳಿಗೂ ಮತ್ತು ಎಲ್ಲ ಶಾಲಾ ಕಾಲೇಜುಗಳಿಗೂ (ಅನುದಾನ ಪಡೆಯುವ ಎಲ್ಲಾ ವಿದ್ಯಾ ಸಂಸ್ಥೆಗಳು ಸೇರಿದಂತೆ) ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಉಸಿರಾಟದ ತೊಂದರೆ ಸಂಬಂಧಿಸಿದಂತೆ ಹಲವು ದಿನಗಳ ಹಿಂದೆ ಧರಂ ಸಿಂಗ್ ಅವರು ಬೆಂಗಳೂರಿನ ಎಂ. ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಗುರುವಾರ ಅವರು ಕೊನೆಯುಸಿರೆಳದರು. ಧರಂಸಿಂಗ್ಅವರ ಹುಟ್ಟೂರು ನೆಲೋಗಿ ಗ್ರಾಮಸ್ಥರ ಒತ್ತಾಯದ ಮೇರೆಗೆ ಅಲ್ಲಿಯೇ ಇಂದು (ಶುಕ್ರವಾರ)ಸಂಜೆ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ.