ಅಂತು ಇಂತು ವಿಟಿಯು ಮೌಲ್ಯಮಾಪನ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಅವೈಜ್ಞಾನಿಕ ಪದ್ಧತಿಗಳ ಬಗ್ಗೆ, ಫಲಿತಾಂಶ ಮತ್ತು ಮರುಮೌಲ್ಯಮಾಪನದ ವಿರುದ್ಧ ಇತ್ತೀಚೆಗಷ್ಟೇ ವಿಟಿಯುಗೆ ಒಳಪಡುವ ಕಾಲೇಜುಗಳನ್ನು ಬಂದ್ ಮಾಡಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ರಾಜ್ಯಾದ್ಯಂತ ಹೋರಾಟ ಮಾಡಿದ್ದವು.
ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ವಿಟಿಯು ಮರುಮೌಲ್ಯಮಾಪನ ನಿಯಮದಲ್ಲಿ ಕೊಂಚ ಬದಲಾಣೆ ಮಾಡಿಕೊಂಡಿದೆ. ಈ ಹಿಂದೆ ನಿಯಮವನ್ನು ತೆಗೆದು ಹಾಕಿ ಮೂಲ ಮೌಲ್ಯಮಾಪನಕ್ಕೆ ಆದ್ಯತೆ ನೀಡಿದೆ.
ಮರುಮೌಲ್ಯಮಾಪನ ನಂತರ ಕಡಿಮೆ ಅಂಕ ಬಂದರೆ ಮೂಲ ಮೌಲ್ಯಮಾಪನದಲ್ಲಿ ಬಂದಿದ್ದ ಅಂಕವನ್ನೆ ಅಂತಿಮವೆಂದು ಪರಿಗಣಿಸಲು ವಿಟಿಯು ನಿರ್ಧರಿಸಿದೆ. ವಿಟಿಯುನ ಈ ನಿರ್ಧಾರದಿಂದ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿದೆ.
ಈ ಹೊಸ ಪದ್ಧತಿಯು 2017 ನೇ ಜೂನ್ -ಜುಲೈನಲ್ಲಿ ನಡೆದ ಪರೀಕ್ಷೆಯಿಂದಲೇ ಜಾರಿಗೆ ಬರಲಿದ್ದು, ಈ ಬಾರಿಯ ಪರೀಕ್ಷೆಯ ಫಲಿತಾಂಶದಲ್ಲಿ ಗೊಂದಲವಿದ್ದರೆ ವಿದ್ಯಾರ್ಥಿಗಳು ಮೌಲ್ಯಮಾಪನ ಸಲ್ಲಿಸಬಹುದಾಗಿದೆ.
ಸುಮಾರು 1.2 ಲಕ್ಷ ವಿದ್ಯಾರ್ಥಿಗಳು ಸಿಬಿಸಿಎಸ್ ಮಾದರೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹೊಸ ನಿಯಮದಿಂದ ವಿದ್ಯಾರ್ಥಿಗಳಿಗೆ ಒಂದು ರೀತಿ ಲಾಭವಾದರೆ, ಹೆಚ್ಚಿನ ಸಂಖ್ಯೆಯಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದರಿಂದ ವಿವಿಯ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸಲಿದೆ.