ವಿದ್ಯೆ, ಜ್ಞಾನಕ್ಕಿಂತ ಮಿಗಿಲಾದುದು ಯಾವುದು ಇಲ್ಲ ಎನ್ನುವುದನ್ನು ಶಿಕ್ಷಣ ಸಾಭೀತು ಮಾಡುತ್ತಲೇ ಇದೆ. ಸಮಾಜವನ್ನು ಸರಿದಾರಿಗೆ ತರುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತಿರುವುದಕ್ಕೆ ದೊಡ್ಡ ಉದಾಹರಣೆ ತ್ರಿವಳಿ ತಲಾಖ್ ನಿಷೇಧ.
ವಿವಾದಿತ ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಇಂದು(ಆಗಸ್ಟ್ 22) ನೀಡಿದ ಐತಿಹಾಸಿಕ ತೀರ್ಪಿಗೆ ಭಾರತದ ಪ್ರತಿ ಮುಸ್ಲಿಂ ಹೆಣ್ಣುಮಕ್ಕಳು ಸಂಭ್ರಮಿಸಿದ್ದಾರೆ.
ಈ ತೀರ್ಪಿಗಾಗಿ ಅದೆಷ್ಟೋ ಹೋರಾಟಗಳಾಗಿವೆ, ಅನೇಕ ಸಂಘಟನೆಗಳು, ಮುಸ್ಲಿಂ ಮಹಿಳೆಯರು ಶ್ರಮಿಸಿದ್ದಾರೆ. ಈ ಶ್ರಮದ ಹಿಂದಿರುವುದು ಶಿಕ್ಷಣ ಎಂದರೆ ತಪ್ಪಾಗಲಾರದು. ಅದರಲ್ಲೂ ಮಹಿಳೆಯರ ಶಿಕ್ಷಣದಿಂದ ಇಂದು ಸಮಾಜ ಸಾಕಷ್ಟು ಸುಧಾರಣೆಗೊಂಡಿದೆ.
ಈ ಹೋರಾಟದಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದ ಶಯರಾ ಬಾನೊ, ಗುಲ್ಷನ್ ಪರ್ವೀನ್, ಆತಿಯಾ ಸಾಬ್ರಿ ಇವರೆಲ್ಲ ಉನ್ನತ ಶಿಕ್ಷಣ ಪಡೆದವರು, ಇವರಲ್ಲಿನ ಶಿಕ್ಷಣವೇ ಇಂದು ಅವರಿಗೆ ಸಿಕ್ಕ ಜಯ ಎಂದರೆ ತಪ್ಪಾಗಲಾರದು.
ಶಯರಾ ಬಾನೊ-ಎಂಬಿಎ
'ನಾನು ಎದುರಿಸಿದ ಆ ಕೆಟ್ಟ ಅನುಭವವನ್ನು ನನ್ನ ಮಗಳು ಅನುಭವಿಸುವುದಿಲ್ಲ ಎಂಬ ಭರವಸೆ ಈಗ ಮೂಡಿದೆ...' ಇದು ತ್ರಿವಳಿ ತಲಾಖ್ ನಿಷೇಧಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಶಯರಾ ಬಾನೊ ನಿರಾಳತೆಯಿಂದ ಹೇಳಿದ ಮಾತು.
ಸದ್ಯಕ್ಕೆ ಎಂಬಿಎ ಓದುತ್ತಿರುವ ಶಯರಾ ಬಾನೊ ತಾನು ಒಳ್ಳೆಯ ಉದ್ಯೋಗ ಪಡೆಯುತ್ತೇನೆ, ನಂತರ ಮುಸ್ಲಿಂ ಮಹಿಳೆಯರ ಹಕ್ಕು ಮತ್ತು ಘನತೆಯನ್ನು ಕಾಪಾಡಲು ಹೋರಾಡುತ್ತೇನೆ ಎನ್ನುತ್ತಾರೆ. ತ್ರಿವಳಿ ತಲಾಖ್ ನಿಷೇಧಕ್ಕೆ ಅರ್ಜಿ ಸಲ್ಲಿಸಿದ್ದವರಲ್ಲಿ ಈಕೆ ಮೊದಲಿಗರು
ಮೂರು ಬಾರಿ ತಲಾಖ್ ಎಂದು ಹೇಳಿ ಬಾನೊ ಅವರ ಪತಿ ವಿಚ್ಛೇದನ ನೀಡಿದ್ದರು. ನಿಖಾ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಯನ್ನು ಕೂಡ ತೆಗೆದುಹಾಕುವಂತೆ ಬಾನೊ ಈ ಹಿಂದೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಗುಲ್ಷನ್ ಪರ್ವಿನ್-ಎಂ.ಎ (ಇಂಗ್ಲಿಷ್)
ಉತ್ತರ ಪ್ರದೇಶದ ರಾಂಪುರದ 31 ವರ್ಷದ ಗುಲ್ಷನ್ ಪರ್ವಿನ್ ತನ್ನ ಪತಿಯಿಂದ 10 ರೂಪಾಯಿಯ ಸ್ಟಾಂಪ್ ಪೇಪರ್ ಮೂಲಕ ತಲಾಖ್ ಸಂದೇಶ ಪಡೆದಿದ್ದರು!
ಆದರೆ ಈ ತಲಾಖ್ ಅನ್ನು ತಾನು ಒಪ್ಪುವುದಿಲ್ಲ, ತನಗಿರುವ ಎರಡು ವರ್ಷ ವಯಸ್ಸಿನ ಮಗು ಅನಾಥವಾಗುತ್ತದೆ, ನಾವು ನಿರ್ಗತಿಕರಾಗುತ್ತೇವೆ ಎಂದು ಆಕೆ ಅಲವತ್ತುಕೊಂಡಿದ್ದರು.
ಅತ್ತೆ-ಮಾವ ಮತ್ತು ಪತಿ ತಮಗೆ ವರದಕ್ಷಿಣೆ ಕಿರುಕುಳವನ್ನೂ ನೀಡುತ್ತಿದ್ದಾರೆಂದು ಗುಲ್ಷನ್ ದೂರು ನೀಡಿದ್ದರು. ಆಕೆಯ ಪತಿಯನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪರ್ವಿನ್ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ತ್ರಿವಳಿ ತಲಾಖ್ ವಿರುದ್ಧ ಅವರೂ ಅರ್ಜಿ ಸಲ್ಲಿಸಿದ್ದರು
ಆತಿಯಾ ಸಾಬ್ರಿ-ಎಂ.ಎ (ಸಮಾಜಶಾಸ್ತ್ರ)
ಉತ್ತರ ಪ್ರದೇಶದ ಸಹರಾಪುರದ ಅತಿಯಾ ಸಾಬ್ರಿ(38) 2012 ರಲ್ಲಿ ವಾಜಿದ್ ಅಲಿ ಎಂಬುವವರನ್ನು ಮದುವೆಯಾಗಿದ್ದರು. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.