ಭಾರತದ ಸಂವಿಧಾನದ ಪಿತಾಮಹ ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಭಾರತದಾದ್ಯಂತ ಏಪ್ರಿಲ್ 14 ರಂದು ಆಚರಿಸಲಾಗುತ್ತದೆ. ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ರಾಜಕಾರಣಿ, ತತ್ವಜ್ಞಾನಿ, ಇತಿಹಾಸಕಾರ, ಮಾನವಶಾಸ್ತ್ರಜ್ಞ ಮತ್ತು ಭಾರತದ ಸಮಾಜ ಸುಧಾರಕ ಮತ್ತು ಭಾರತೀಯ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರು ಅಂಬೇಡ್ಕರ್.
ಅಂಬೇಡ್ಕರ್ ಅವರ ಜನ್ಮದಿನವನ್ನು ಮೊದಲು 1928 ರಲ್ಲಿ ಪುಣೆಯಲ್ಲಿ ಆಚರಿಸಲಾಯಿತು ನಂತರ ಇದು ವಾರ್ಷಿಕ ಕಾರ್ಯಕ್ರಮವಾಯಿತು. ಜನರೂ ಇಂದಿಗೂ ಅಂಬೇಡ್ಕರ್ ಅವರ ಗುಣಗಾನ ಮಾಡಲು ಈ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇತ್ತೀಚೆಗಷ್ಟೇ ಈ ದಿನವನ್ನು ಸಾರ್ವಜನಿಕ ರಜೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ದಲಿತ ಕುಟುಂಬದಲ್ಲಿ ಜನಿಸಿದರು, ಅವರು ತಮ್ಮ ಸಮುದಾಯದ ಜನರನ್ನು ಶೋಷಣೆ, ತಾರತಮ್ಯ ಮತ್ತು ಅಸ್ಪೃಶ್ಯರೆಂದು ಪರಿಗಣಿಸುವುದನ್ನು ನೋಡುತ್ತಾ ಬೆಳೆದರು.
ಸಂವಿಧಾನದ ಕರಡು ಸಮಿತಿಯ ಪ್ರಮುಖ ಸದಸ್ಯ ಮತ್ತು ಅಧ್ಯಕ್ಷರಾಗಿದ್ದರು ಮತ್ತು ಭಾರತದ ಸಂವಿಧಾನದ ಮುಖ್ಯ ವಾಸ್ತುಶಿಲ್ಪಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ತಮ್ಮ ಜೀವನದುದ್ದಕ್ಕೂ ಅವರು ದಲಿತರ ಉನ್ನತಿಗಾಗಿ ಶ್ರಮಿಸಿದರು ಮತ್ತು ಭಾರತದ ಸಂವಿಧಾನವನ್ನು ರಚಿಸುವಾಗ ಅವರಿಗೆ ವಿಶೇಷ ಹಕ್ಕುಗಳನ್ನು ಪ್ರಸ್ತಾಪಿಸಿದರು. ಬನ್ನಿ ಈ ಮಹಾನ್ ನಾಯಕನ ಜನ್ಮ ದಿನದಂದು ಈ ದಿನದ ಇತಿಹಾಸ, ಆಚರಣೆ ಮತ್ತು ಇಂದಿಗೂ ನಡೆಯುವ ಅಂಬೇಡ್ಕರ್ ಜಯಂತಿಯ ಮಹತ್ವವನ್ನು ತಿಳಿದುಕೊಳ್ಳೋಣ.
ಅಂಬೇಡ್ಕರ್ ಜಯಂತಿ 2022 ದಿನಾಂಕ :
ಡಾ.ಬಿ.ಆರ್. ಅಂಬೇಡ್ಕರ್ ಎಂದೂ ಕರೆಯಲ್ಪಡುವ ಅಂಬೇಡ್ಕರ್ ಅವರು ಏಪ್ರಿಲ್ 14, 1891 ರಂದು ಜನಿಸಿದರು. ಅವರು ನಮ್ಮ ದೇಶಕ್ಕೆ ನೀಡಿದ ಕೊಡುಗೆಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಏಪ್ರಿಲ್ 14 ಅನ್ನು ಭಾರತದಲ್ಲಿ ಅಂಬೇಡ್ಕರ್ ಜಯಂತಿ, ಭೀಮ ಜಯಂತಿ ಅಥವಾ ಸಮಾನತೆ ದಿನ ಎಂದು ಆಚರಿಸಲಾಗುತ್ತದೆ.
ಅಂಬೇಡ್ಕರ್ ಜಯಂತಿ 2022 ಇತಿಹಾಸ :
ಏಪ್ರಿಲ್ 14, 1928 ರಂದು ಪುಣೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನವನ್ನು ಮೊದಲ ಬಾರಿಗೆ ಅಂಬೇಡ್ಕರ್ ವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಜನಾರ್ದನ್ ಸದಾಶಿವ ರಣಪಿಸೆ ಅವರು ಪುಣೆಯಲ್ಲಿ ಸಾರ್ವಜನಿಕವಾಗಿ ಆಚರಿಸಿದರು. ಅಂದಿನಿಂದ ಈ ದಿನವನ್ನು ಆಚರಿಸುವ ಸಂಪ್ರದಾಯವು ಪ್ರಾರಂಭವಾಯಿತು ಮತ್ತು ಪ್ರತಿ ವರ್ಷ ನಾವು ಅವರ ಜನ್ಮದಿನವನ್ನು ಏಪ್ರಿಲ್ 14 ರಂದು ಆಚರಿಸುತ್ತೇವೆ. 2015 ರಿಂದ ಈ ದಿನವನ್ನು ಭಾರತದಾದ್ಯಂತ ಅಧಿಕೃತ ಸಾರ್ವಜನಿಕ ರಜಾದಿನವಾಗಿ ಆಚರಿಸಲಾಗುತ್ತದೆ.
ಅಂಬೇಡ್ಕರ್ ಅವರು ವಿವಿಧ ಜಾತಿಗಳು ಮತ್ತು ಪಂಗಡಗಳ ನಡುವೆ ಸಾಮರಸ್ಯಕ್ಕಾಗಿ ತಮ್ಮ ಜೀವನದುದ್ದಕ್ಕೂ ಹೋರಾಡಿದ್ದರಿಂದ ಅವರ ಜನ್ಮದಿನವನ್ನು ಭಾರತದಲ್ಲಿ "ಸಮಾನತೆ ದಿನ" ಎಂದು ಆಚರಿಸಲಾಗುತ್ತದೆ. ಆದರೆ ವಿಶ್ವಸಂಸ್ಥೆ ಈ ದಿನವನ್ನು "ಅಂತರರಾಷ್ಟ್ರೀಯ ಸಮಾನತೆ ದಿನ" ಎಂದು ಹೆಸರಿಸಲು ಒತ್ತಾಯಿಸಲಾಗಿದೆ.
ಅಂಬೇಡ್ಕರ್ ಜಯಂತಿ 2022 ಮಹತ್ವ :
ಸ್ವಾತಂತ್ರ್ಯ ಬಂದು 75 ವರ್ಷಾಗಳಾದರೂ ನಮ್ಮ ಸಮಾಜದಲ್ಲಿ ಈಗಲೂ ಇರುವ ಜಾತಿ ಆಧಾರಿತ ತಾರತಮ್ಯದ ಕಡೆಗೆ ನಮ್ಮ ಗಮನ ಸೆಳೆಯುವ ಮೂಲಕ ಅಂಬೇಡ್ಕರ್ ಜಯಂತಿಗೆ ಸಾಕಷ್ಟು ಮಹತ್ವವಿದೆ.
ಈ ದಿನವನ್ನು ಆಚರಿಸುವ ಮೂಲಕ ದಲಿತರ ಮತ್ತು ಅಸ್ಪೃಶ್ಯರ ಉನ್ನತಿಗಾಗಿ ಬಾಬಾಸಾಹೇಬರ ಕೊಡುಗೆಯನ್ನು ಸ್ಮರಿಸುತ್ತೇವೆ. ಜಾತಿ, ಮತ, ಧರ್ಮ, ಜನಾಂಗ ಮತ್ತು ಸಂಸ್ಕೃತಿಯನ್ನು ಲೆಕ್ಕಿಸದೆ ಈ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಹಕ್ಕುಗಳನ್ನು ಒದಗಿಸುವ ಸಂವಿಧಾನವನ್ನು ಅವರು ರಚಿಸಿದರು.
ಅಸ್ಪೃಶ್ಯರಿಗೆ ಮೂಲಭೂತ ಹಕ್ಕುಗಳು ಮತ್ತು ಶಿಕ್ಷಣವನ್ನು ಉತ್ತೇಜಿಸಲು ಅವರು ಕೇಂದ್ರೀಯ ಸಂಸ್ಥೆ ಬಹಿಷ್ಕೃತ ಹಿತಕಾರಿಣಿ ಸಭಾವನ್ನು ಸ್ಥಾಪಿಸಿದರು ಮತ್ತು ದಲಿತರಿಗೆ ಸಾರ್ವಜನಿಕ ಕುಡಿಯುವ ನೀರಿನ ಸಂಪನ್ಮೂಲಗಳ ಪ್ರವೇಶ ಮತ್ತು ಹಿಂದೂ ದೇವಾಲಯಗಳಿಗೆ ಪ್ರವೇಶಿಸುವ ಹಕ್ಕನ್ನು ಒದಗಿಸುವ ಚಳುವಳಿಗಳನ್ನು ಪ್ರಾರಂಭಿಸಿದರು.
ಅಂಬೇಡ್ಕರ್ ಜಯಂತಿ 2022 ಆಚರಣೆ :
ಅಮೇಡ್ಕರ್ ಜಯಂತಿಯನ್ನು ಅವರ ಅನುಯಾಯಿಗಳಲ್ಲಿ ವಿಶೇಷವಾಗಿ ದಲಿತರು, ಆದಿವಾಸಿಗಳು, ಕಾರ್ಮಿಕರು ಮುಂತಾದವರು ಪ್ರಪಂಚದಾದ್ಯಂತ ಪೂರ್ಣ ಉತ್ಸಾಹದಿಂದ ಆಚರಿಸುತ್ತಾರೆ. ಅಂಬೇಡ್ಕರ್ ಅವರ ಸ್ಥಳೀಯ ಪ್ರತಿಮೆಗಳಿಗೆ ಜನರು ಭೇಟಿ ನೀಡಿ ನಮನ ಸಲ್ಲಿಸುತ್ತಾರೆ.
ಚೈತ್ಯ ಭೂಮಿ, ಮುಂಬೈ ಮತ್ತು ದೀಕ್ಷಾ ಭೂಮಿ ನಾಗ್ಪುರದಲ್ಲಿ ಅವರ ಅನುಯಾಯಿಗಳು ಮೆರವಣಿಗೆಗಳನ್ನು ಮಾಡುತ್ತಾರೆ. ಶಾಲಾ-ಕಾಲೇಜುಗಳು ಮತ್ತು ಇತರ ಸಂಸ್ಥೆಗಳಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಜೀವನಾಧಾರಿತ ನಾಟಕಗಳು ಮತ್ತು ನಾಟಕೀಯ ರೂಪಾಂತರಗಳನ್ನು ಆಯೋಜಿಸಲಾಗುತ್ತಿದೆ. ಇದರ ಹೊರತಾಗಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ನವದೆಹಲಿಯ ಭಾರತದ ಸಂಸತ್ತಿನಲ್ಲಿರುವ ಡಾ.ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂಪ್ರದಾಯವಿದೆ.