ಭಾರತ ಸಂವಿಧಾನವು ರಾಷ್ಟ್ರಕ್ಕೆ ಮಾರ್ಗದರ್ಶಿ ಪುಸ್ತಕವಾಗಿದೆ. ನಮ್ಮ ಸಂವಿಧಾನವು ಮೂಲಭೂತ ಹಕ್ಕುಗಳು, ಕರ್ತವ್ಯಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಚನೆಯ ಆಧಾರವಾಗಿದೆ. ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 26 ರಂದು ಭಾರತದಲ್ಲಿ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನ ದಿನವನ್ನು 'ಸಂವಿಧಾನ ದಿವಸ್' ಎಂದೂ ಕರೆಯಲಾಗುತ್ತದೆ. ಭಾರತದ ಸಂವಿಧಾನವು ವಿಶ್ವದ ಎಲ್ಲಾ ಸಂವಿಧಾನಗಳಿಗಿಂತ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಕರ್ತವ್ಯಗಳ ಅರಿವು ಮೂಡಿಸುವ ಗುರಿಯನ್ನು ಈ ದಿನವು ಹೊಂದಿದೆ.
ಭಾರತ ಸಂವಿಧಾನವು ಜಗತ್ತಿನಲ್ಲಿನ ಅತಿ ದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇದು ಸದ್ಯ 448 ವಿಧಿಗಳು 12 ಪರಿಚ್ಛೇದಗಳು 105 ತಿದ್ದುಪಡಿಗಳನ್ನು ಹೊಂದಿದೆ. ಇಂತಹ ಬೃಹತ್ ಸಂವಿಧಾನವು ಜನೆವರಿ 26 1950 ರಂದು ಇದನ್ನು ಜಾರಿಗೆ ತರಲಾಯಿತು. ಆ ದಿನವನ್ನು ಗಣರಾಜ್ಯ ದಿನ ಎಂದು ಘೋಷಿಸಲಾಯಿತು. ಭಾರತೀಯ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಮೊದಲ ಕಾನೂನು ಸಚಿವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಈ ದಿನ ಗೌರವ ಸಲ್ಲಿಸಲಾಗುತ್ತದೆ.
ಆದರೆ ಇದಕ್ಕೂ ಮುಂಚೆ ನವಂಬರ್ 26 ರಂದು ಸಂಸತ್ತಿನ ಶಾಸನ ಸಭೆಯಲ್ಲಿ ಅಂಬೇಡ್ಕರರು ಸಂವಿಧಾನವನ್ನು ಮಂಡಿಸಿ ಮಾತನಾಡಿದ ದಿನವನ್ನೇ ಈಗ ಸಂವಿಧಾನದ ದಿನ ಎಂದು ಆಚರಿಸಲಾಗುತ್ತಿದೆ. ಅಂಬೇಡ್ಕರರವರು ಅಂದು ನವಂಬರ್ 26ರಂದು ಶಾಸನ ಸಭೆಯಲ್ಲಿ ಮಾತನಾಡುತ್ತಾ "ಜನವರಿ 26, 1950ರಂದು ನಾವು ವೈರುಧ್ಯಗಳ ಬದುಕಿಗೆ ಕಾಲಿಡಲಿದ್ದೇವೆ. ರಾಜಕೀಯದಲ್ಲಿ, ನಮಗೆ ಸಮಾನತೆಯಿರುತ್ತದೆ ಆದರೆ ಸಾಮಾಜಿಕ ಹಾಗೂ ಆರ್ಥಿಕ ಸಂರಚನೆಗಳಲ್ಲಿ ಅಸಮಾನತೆಯಿರುತ್ತದೆ; ಒಬ್ಬ ಮನುಷ್ಯ ಒಂದು ಮೌಲ್ಯ ಎಂಬ ತತ್ವವನ್ನು ನಿರಾಕರಿಸುತ್ತಲೇ ಹೋಗುತ್ತಿರುತ್ತೇವೆ. ಈ ವೈರುಧ್ಯಗಳ ಬದುಕನ್ನು ಎಷ್ಟು ದಿನ ಹೀಗೇ ಮುಂದುವರೆಸಿಕೊಂಡು ಹೋಗುತ್ತೇವೆ? ನಮ್ಮ ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಸಮಾನತೆಯ ನಿರಾಕರಣೆಯನ್ನು ಎಷ್ಟು ದಿನ ಹೀಗೇ ಮುಂದುವರೆಸುತ್ತೇವೆ? ಬಹಳ ಕಾಲ ಹೀಗೇ ಇದು ಮುಂದುವರೆಯಿತೆಂದರೆ ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನೇ ತೊಂದರೆಗೆ ಸಿಲುಕಿಸುತ್ತಿದ್ದೇವೆ ಎಂದೇ ಅರ್ಥ. ನಾವು ಆದಷ್ಟು ಬೇಗನೇ ಈ ವೈರುಧ್ಯವನ್ನು ನಿವಾರಿಸಿಕೊಳ್ಳಬೇಕು. ಇಲ್ಲವಾದರೆ ಅಸಮಾನತೆಯಿಂದ ನರಳುತ್ತಿರುವವರು ಈ ಸಂವಿಧಾನ ರಚನಾ ಸಭೆಯು ಇಷ್ಟು ಶ್ರಮವಹಿಸಿ ಕಟ್ಟಿರುವ ಪ್ರಜಾಪ್ರಭುತ್ವದ ಸೌಧವನ್ನೇ ಪುಡಿಗಟ್ಟಿಬಿಡುತ್ತಾರಷ್ಟೆ" ಎನ್ನುವ ಎಚ್ಚರಿಕೆಯನ್ನು ಅಂಬೇಡ್ಕರ್ ರವರು ಶಾಸನ ಸಭೆಯ ಮುಂದೆ ಇಡುತ್ತಾರೆ.
ಆದ್ದರಿಂದ ಸರ್ಕಾರವು ಈ ದಿನವನ್ನು ಸ್ಮರಣಿಯ ಗೊಳಿಸುವ ಸಲುವಾಗಿ ಭಾರತ ಸರ್ಕಾರವು 2015 ರಲ್ಲಿ ಅಂಬೇಡ್ಕರರ 125ನೇ ಜನ್ಮೊತ್ಸವದ ಆಚರಣೆಯ ಸಂಧರ್ಭದಲ್ಲಿ ನವಂಬರ್ 19 ರಂದು ತನ್ನ ಗೆಜೆಟ್ನಲ್ಲಿ ನವಂಬರ್ 26 ನ್ನು ಸಂವಿಧಾನ ದಿವಸ್ ಎಂದು ಪ್ರಕಟಣೆಯನ್ನು ಹೊರಡಿಸಿತು. ಅಂದಿನಿಂದ ಭಾರತದ ಸಂವಿಧಾನ ದಿನವು ಭಾರತೀಯ ಸಂವಿಧಾನ ಮತ್ತು ಅದರ ವಾಸ್ತುಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಲ್ಲಿ ಬಿತ್ತುವ ನಿಟ್ಟಿನಲ್ಲಿ ಈ ದಿನವನ್ನು ಸರ್ಕಾರ ಅಧಿಕೃತವಾಗಿ ಆಚರಿಸುತ್ತಾ ಬರುತ್ತಿದೆ.ಇದಕ್ಕೂ ಮೊದಲು ಈ ದಿನವನ್ನು ಕಾನೂನು ದಿನ ಎಂದು ಸಹ ಆಚರಿಸಲಾಗುತ್ತಿತ್ತು.
ಅಕ್ಟೋಬರ್ 11, 2015 ರಂದು ಮುಂಬೈನಲ್ಲಿ ಸಮಾನತೆಯ ಪ್ರತಿಮೆಯ ಶಂಕುಸ್ಥಾಪನೆ ಮಾಡುವಾಗ ಪ್ರಧಾನಿ ನರೇಂದ್ರ ಮೋದಿಯವರು ಅಂಬೇಡ್ಕರ್ ರವರ ವರ್ಷಪೂರ್ತಿ ಆಚರಣೆಗೆ ಚಾಲನೆಯನ್ನು ಮುಂಬೈನ ಇಂದು ಮಿಲ್ಸ್ ಕಂಪೌಂಡ್ ನಲ್ಲಿ ಅವರ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿಸುವದರ ಮೂಲಕ ಚಾಲನೆ ನೀಡಿದರು . ಈ ದಿನದಂದು ಸರ್ಕಾರವು ಪ್ರತಿ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ವಿಧ್ಯಾರ್ಥಿಗಳಿಗೆ ಓದಿಸಲಾಗುತ್ತದೆ.
ಡಾ. ಬಿ ಆರ್ ಅಂಬೇಡ್ಕರ್ ಅವರು ಹೆಸರಾಂತ ಸಮಾಜ ಸುಧಾರಕ, ರಾಜಕಾರಣಿ ಮತ್ತು ನ್ಯಾಯಶಾಸ್ತ್ರಜ್ಞರಾಗಿದ್ದರು ಮತ್ತು ಭಾರತೀಯ ಸಂವಿಧಾನದ ಪಿತಾಮಹ ಎಂದೂ ಕರೆಯಲಾಗುತ್ತದೆ. ಅವರು ಆಗಸ್ಟ್ 29, 1947 ರಂದು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು.
ನಮ್ಮ ದೇಶದಲ್ಲಿ ಅಭಿವೃದ್ಧಿ ಹೊಂದಲು ನಮ್ಮ ಸಂವಿಧಾನ ಭಾತೃತ್ವ, ಸಹೋದರತೆ, ಸಮಾನತೆಯ ನೆಲೆಯಿಂದ ಕೂಡಿದೆ. ಮಹಿಳೆಯರು, ದಲಿತರು, ಬುಡಕಟ್ಟು ಸಮುದಾಯ ಸೇರಿ ಎಲ್ಲ ವರ್ಗೀಯ ಜನರು ತಲೆ ಎತ್ತಿ ಬದುಕಲು ಸಂವಿಧಾನ ಅವಕಾಶ ಕಲ್ಪಸಿಕೊಟ್ಟಿದೆ.
ಸಂವಿಧಾನವು ಧ್ವನಿ ಇರದವರಿಗೆ ಧ್ವನಿಯಾಗುವ ಮೂಲಕ ಅವರ ಹಕ್ಕುಗಳನ್ನು ತಂದುಕೊಟ್ಟಿದೆ. ಇಂಥ ಸಂವಿಧಾನ ಕೊಡುಗೆಯಾಗಿ ನೀಡಿದ ಡಾ ಅಂಬೇಡ್ಕರ್ ಅವರಿಗೆ ಭಾರತೀಯರಾದ ನಾವೆಲ್ಲರೂ ಸದಾ ಋಣಿಯಾಗಿರಬೇಕು.
ಸಂವಿಧಾನ ದಿನ 2021 : ಮಹತ್ವ
ಭಾರತದ ಸಂವಿಧಾನವು ವಿಶ್ವದಲ್ಲೇ ಅತ್ಯಂತ ದೊಡ್ಡ ಮತ್ತು ಸಂವಿಧಾನದ ಕರಡು ಸಮಿತಿಯು ಭಾರತದ ಜನರ ಆದರ್ಶಗಳನ್ನು ಉತ್ತಮವಾಗಿ ಪ್ರತಿಬಿಂಬಿಸುವ ದಾಖಲೆಯನ್ನು ತಯಾರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಇದಕ್ಕಾಗಿ ಅವರು ಯುಎಸ್,ಯುಕೆ ಜಪಾನ್, ಜರ್ಮನಿ ಮತ್ತು ಫ್ರಾನ್ಸ್ನ ಸಂವಿಧಾನಗಳನ್ನು ಉಲ್ಲೇಖಿಸಿದರು ಮತ್ತು ಪ್ರಭಾವಶಾಲಿ ತತ್ವಗಳನ್ನು ಅಳವಡಿಸಿಕೊಂಡರು.
ಈ ದಿನವು ಸಂವಿಧಾನದಲ್ಲಿ ಹೇಳಲಾದ ಮೌಲ್ಯಗಳನ್ನು ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ ಮತ್ತು ಡಾಕ್ಯುಮೆಂಟ್ನಲ್ಲಿ ಉಲ್ಲೇಖಿಸಲಾದ ಕರ್ತವ್ಯಗಳು ಮತ್ತು ಹಕ್ಕುಗಳನ್ನು ಜನರಿಗೆ ಮುಟ್ಟಿಸುವ ಮತ್ತು ಕಾರ್ಯಗತಗೊಳಿಸುವ ಉದ್ದೇಶಗಳನ್ನು ಹೊಂದಿದೆ.