ಎರಡು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಅಪ್ಪು ಮತ್ತು ಪವರ್ ಸ್ಟಾರ್ ಎಂದು ಕರೆಯಲ್ಪಡುವ ಪುನೀತ್ ರಾಜ್ ಕುಮಾರ್ ಅವರು ಹಲವಾರು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಪುನೀತ್ ಇಂದು ದುರದೃಷ್ಟವಶಾತ್ ವಿಧಿವಶರಾಗಿದ್ದಾರೆ.
ನಟ ಪುನೀತ್ ಇಂದು ಬೆಳಿಗ್ಗೆ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ನಂತರ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಅವರು ತಮ್ಮ 46ನೇ ವಯಸ್ಸಿಗೆ ವಿದಾಯ ಹೇಳಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಅವರ ಬಗ್ಗೆ ಪ್ರಬಂಧ ಬರೆಯಲು ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ ತಪ್ಪದೇ ಓದಿ ತಿಳಿಯಿರಿ.
ಪುನೀತ್ ರಾಜ್ಕುಮಾರ್ ಅವರ ನಿಜವಾದ ಹೆಸರು ಲೋಹಿತ್. ಅವರು ಕನ್ನಡದ ಪ್ರಸಿದ್ಧ ತಾರೆ ಡಾ.ರಾಜ್ಕುಮಾರ್ ಮತ್ತು ತಾಯಿ ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಕಿರಿಯ ಮಗನಾಗಿ 1975ರ ಮಾರ್ಚ್ 17 ರಂದು ಜನಿಸಿದರು. ತಮ್ಮ ಬಾಲ್ಯದಿಂದಲೇ ಕಲಾ ಕ್ಷೇತ್ರಕ್ಕೆ ಕೊಡುಗೆ ನೀಡಿ ದೊಡ್ಮನೆ ಹುಡುಗ ಎಂದು ಮನೆಮಾತಾದವರು. ಪುನೀತ್ ಅವರು ಚೆನ್ನೈನಲ್ಲಿ ತಮ್ಮ ಬಾಲ್ಯ ಜೀವನವನ್ನು ಕಳೆದರು. ಅವರು ತಮ್ಮ 6ನೇ ವಯಸ್ಸಿನಲ್ಲಿ ಕುಟುಂಬದೊಂದಿಗೆ ಮೈಸೂರಿಗೆ ಸ್ಥಳಾಂತರಗೊಂಡರು. ಅವರ ಹಿರಿಯ ಸಹೋದರ ಶಿವ ರಾಜ್ಕುಮಾರ್ ಕೂಡ ಕನ್ನಡದ ಖ್ಯಾತ ಮತ್ತು ಪ್ರಸಿದ್ಧ ತಾರೆ.
ಪುನೀತ್ ರಾಜ್ಕುಮಾರ್ ಬಾಲನಟನಾಗಿ 12 ಚಿತ್ರಗಳಲ್ಲಿ ನಟಿಸಿದ್ದಾರೆ. "ಬೆಟ್ಟದ ಹೂವು" ಚಿತ್ರಕ್ಕಾಗಿ ಅವರು ಅತ್ಯುತ್ತಮ ಬಾಲ ನಟ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದರು. ತದನಂತರ ಮೊದಲ ಬಾರಿಗೆ ನಟನಾಗಿ 'ಅಪ್ಪು' ಎಂಬ ಶೀರ್ಷಿಕೆಯ ಚಿತ್ರದಲ್ಲಿ ನಟಿಸಿದರು ಮತ್ತು ಅಲ್ಲಿಂದ ಅವರು ಸಿನೆಮಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಾ ಹೋದರು. ಪುನೀತ್ ಒಬ್ಬ ನಟ ಮಾತ್ರವಲ್ಲ, ಹಿನ್ನೆಲೆ ಗಾಯಕ, ದೂರದರ್ಶನ ನಿರೂಪಕ ಮತ್ತು ನಿರ್ಮಾಪಕರೂ ಹೌದು. ಅವರು ಮುಖ್ಯವಾಗಿ ಕನ್ನಡ ಕನ್ನಡ ಕ್ಷೇತ್ರಕ್ಕಾಗಿ ಮಾತ್ರ ಕೆಲಸ ಮಾಡಿದರು.
ಪುನೀತ್ ಅವರ 2 ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಅನೇಕ ಬ್ಲಾಕ್ಬಸ್ಟರ್ ಚಲನಚಿತ್ರಗಳನ್ನು ನೀಡಿದ್ದಾರೆ. ಇದರಿಂದ ಅವರಿಗೆ ಸಿನೆಮಾ ಕ್ಷೇತ್ರದಲ್ಲಿ ಅತಿದೊಡ್ಡ ಅಭಿಮಾನಿ ಬಳಗವನ್ನು ಗಳಿಸುವಂತೆ ಮಾಡಿತು. ವಸಂತ ಗೀತೆ, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ, ಮತ್ತು ಯಾರಿವನು ಇವು ಅವರ ಕೆಲವು ಯಶಸ್ವಿ ಚಲನಚಿತ್ರಗಳು.
ಪುನೀತ್ ರಾಜ್ಕುಮಾರ್ ಅವರ ವೈಯಕ್ತಿಕ ಜೀವನ ತುಂಬಾನೆ ಸುಂದರವಾಗಿತ್ತು. ಡಿಸೆಂಬರ್ 1,1999 ರಂದು ಅಶ್ವಿನಿ ರೇವಂತ್ ಅವರನ್ನು ವಿವಾಹವಾದರು. ಪುನೀತ್ ದಂಪತಿಗೆ ದೃಷ್ಟಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಅಪ್ಪು ಅವರು ನಟರಾಗಿರುವುದರ ಜೊತೆಗೆ ಅನೇಕ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಕೊಂಡಿದ್ದರು. 26 ಅನಾಥಾಸ್ರಮ, 45 ಉಚಿತ ಶಾಲೆ, 16 ವೃದ್ಧಾಶ್ರಮ, 19 ಗೋಶಾಲೆ ಮತ್ತು 1800 ಮಕ್ಕಳ ಸಂಪೂರ್ಣ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿ ಧಾಮ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಏಕೈಕ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
ದೊಡ್ಮನೆ ಹುಡುಗನ ನಿಧನದಿಂದ ಅದೆಷ್ಟೋ ಹೃದಯಗಳಿಗೆ ಇಂದು ಆಘಾತವಾಗಿದೆ. ಸಿನೆಮಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುವುದರ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅನೇಕರ ಬದುಕಿಗೆ ಬೆಳಕಾಗಿದ್ದ ನಟನ ಮರಣ ನಿಜಕ್ಕೂ ದುರ್ವಿಧಿ.