ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪರೀಕ್ಷೆ ದಿನಗಳು ಹತ್ತಿರು ಬಂದೇ ಬಿಟ್ಟವು. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಓದಿನ ಬಗ್ಗೆ ಹೆಚ್ಚು ಗಮನ ನೀಡಿರುತ್ತಾರೆ. ಹೆಚ್ಚು ಸಮಯವನ್ನು ಓದಿಗಾಗಿಯೇ ಮೀಸಲಿಡಿಸಿರುತ್ತಾರೆ.
ಪರೀಕ್ಷೆಗಾಗಿ ವಿದ್ಯಾರ್ಥಿಗಳು ಹಗಲಿರುಳು ಕಂಠಪಾಠ ಮಾಡುವುದು ಸಾನಾನ್ಯವಾಗಿ ಕಾಣಬಹುದಾದ ಸಂಗತಿ. ಹೀಗೆ ಹಗಲಿರುಳು ಓದಿದರು ಕೆಲ ವಿದ್ಯಾರ್ಥಿಗಳು ಅಂಕಗಳಿಸುವಲ್ಲಿ ಎಡವುತ್ತಾರೆ. ಅದಕ್ಕೆ ಕಾರಣ ಹಲವು ಅವುಗಳಲ್ಲಿ ಏಕಾಗ್ರತೆಯ ಕೊರತೆ, ಪರೀಕ್ಷೆಯ ಬಗ್ಗೆ ಇರುವ ಭಯ ಇವು ಸಾಮಾನ್ಯ ಸಂಗತಿಗಳಾದರೆ ಇದರ ಜೊತೆಯಲ್ಲಿ ಇನ್ನು ಹಲವು ಕಾರಣಗಳಿವೆ ಅದರಲ್ಲಿ ವಿದ್ಯಾರ್ಥಿಗಳ ಬರವಣಿಗೆ ಕೂಡ ಒಂದು.
ಅನೇಕ ವಿದ್ಯಾರ್ಥಿಗಳು ತಮ್ಮ ಬರವಣಿಗೆಯಿಂದಲೇ ಅಂಕ ಪಡೆಯುವುದರಲ್ಲಿ ಯಶಸ್ವಿಯಾಗುತ್ತಾರೆ, ಆದರೆ ಮತ್ತೆ ಕೆಲವರು ಇದಕ್ಕೆ ವಿರುದ್ಧ. ಸಾಮಾನ್ಯವಾಗಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿನ ಮೊದಲ ಪುಟದ ಬರವಣಿಗೆಗೂ ಕೊನೆ ಪುಟದ ಬರವಣಿಗೆಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಮೊದಲ ಪುಟದಲ್ಲಿನ ಉತ್ಸಾಹ ಕೊನೆ ಪುಟಕ್ಕೆ ಬರುವಷ್ಟರಲ್ಲಿ ಮಾಯಾವಾಗಿರುತ್ತದೆ. ವಿದ್ಯಾರ್ಥಿಯು ಎಷ್ಟು ದಣಿದಿದ್ದಾನೆ ಎನ್ನುವುದನ್ನು ಅಕ್ಷರಗಳೇ ತಿಳಿಸುತ್ತದೆ. ಕೆಲವು ವಿದ್ಯಾರ್ಥಿಗಳ ಅಕ್ಷರಗಳು ಯಾವುದೋ ಶಾಸನದ ರೀತಿ ಗೋಚರಿಸುತ್ತಿರುತ್ತವೆ. ಇನ್ನು ಅವುಗಳನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮೌಲ್ಯಮಾಪಕರು ಕೂಡ ಸುಸ್ತಾಗಿ ಹೋಗುತ್ತಾರೆ.
ನೀವು ಸರಿಯಾದ ಉತ್ತರ ಬರೆದಿದ್ದರು ಅದು ಮೌಲ್ಯಮಾಪಕರನ್ನು ಸೆಳೆಯುವಲ್ಲಿ ವಿಫಲವಾಗಬಹುದು. ಇದರಿಂದ ಅವರಿಗೆ ನಿಮ್ಮ ಉತ್ತರ ಪತ್ರಿಕೆ ಬೇಸರ ಮೂಡಿಸಬಹುದು. ಇದರಿಂದ ಅಂಕಗಳಲ್ಲಿಯೂ ವ್ಯತ್ಯಾಸವಾಗಬಹುದು.
ಪರೀಕ್ಷೆಯಲ್ಲಿ ನಿಮ್ಮ ಬರವಣಿಗೆ ದಿಕ್ಕು ತಪ್ಪಬಾರದೆಂದರೆ ನೀವು ಚೆನ್ನಾಗಿ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗುತ್ತದೆ. ಅಯ್ಯೋ ಓದುವುದಕ್ಕೆ ಸಮಯವಿಲ್ಲ ಇನ್ನು ಬರೆಯುವುದು ಎಲ್ಲಿಂದ ಬಂತು ಎಂದು ಯೋಚಿಸಬೇಡಿ ಏಕೆಂದರೆ ಹತ್ತು ಬಾರಿ ಓದುವುದಕ್ಕಿಂತ ಒಂದು ಬಾರಿ ಬರೆಯುವುದು ಉತ್ತಮ. ಇನ್ನು ಬರಿ ಬರೆಯುವುದನ್ನೇ ಅಭ್ಯಾಸ ಮಾಡಿದರೆ ಸಾಲದು ಅದರ ಜೊತೆಯಲ್ಲಿ ಬರೆದಿದ್ದನ್ನು ಅರ್ಥ ಮಾಡಿಕೊಳ್ಳುತ್ತ ಹೋಗಬೇಕು ಆಗ ನಿಮ್ಮ ಓದು ದೀರ್ಘವಾಗಿ ನಿಮ್ಮಲ್ಲಿ ಉಳಿಯುವುದು.
ಈ ರೀತಿ ಬರೆಯುತ್ತ ಓದುವುದರಿಂದ ಪರೀಕ್ಷೆಯಲ್ಲಿ ಉತ್ತಮವಾಗಿ ಮತ್ತು ವೇಗವಾಗಿ ಬರೆಯುವುದು ಅಭ್ಯಾಸವಾಗುತ್ತದೆ. ಇದರಿಂದ ನಿಮ್ಮ ಪರೀಕ್ಷಾ ಸಮಯ ಕೂಡ ಉಳಿತಾಯವಾಗಿ ನೀವು ಮತ್ತಷ್ಟು ಆರಾಮಾಗಿ ಉತ್ತರಿಸಲು ಸಹಾಯವಾಗುತ್ತದೆ. ಇನ್ನು ನೀವು ಬರೆದಿರುವುದರಲ್ಲಿ ಪ್ರಮುಖ ಅಂಶಗಳನ್ನು ಗುರುತು ಮಾಡುವುದು ಕೂಡ ಒಳ್ಳೆಯ ಅಭ್ಯಾಸ, ನಿಮ್ಮ ಉತ್ತರದಲ್ಲಿ ಯಾವುದಾದರು ಮುಖ್ಯವಾದ ಅಂಶಗಳಿದ್ದರೆ ಅವುಗಳನ್ನು ಇನ್ವರ್ಟೆಡ್ ಕಾಮಾ ಮತ್ತು ಅದರ ಕೆಳಗೆ ಗೆರೆ ಎಳೆಯುವುದರ ಮೂಲಕ ಗುರುತು ಮಾಡಿದರೆ ಮೌಲ್ಯಮಾಪಕರ ಗಮನವನ್ನು ಮತ್ತಷ್ಟು ಸೆಳೆಯುತ್ತದೆ.
ಉತ್ತಮ ಬರವಣಿಗೆ ಎಂದರೆ ಮುದ್ದಾಗಿ ಬರೆಯುವುದಷ್ಟೇ ಅಲ್ಲ ತಪ್ಪಿಲ್ಲದಂತೆ ಬರೆಯುವುದು ಕೂಡ ಮುಖ್ಯ. ಅದಕ್ಕಾಗಿ ಒಂದಿಷ್ಟು ಕಷ್ಟ ಪಡಲೇಬೇಕು.
ಅಯ್ಯೋ ಇಷ್ಟು ದಿನ ಬರೆದಿಲ್ಲವಲ್ಲ ಈಗ ಹೇಗೆ ಶುರುಮಾಡುವುದು ಎಂದು ಯೋಚಿಸಬೇಡಿ, ಈಗಲೂ ಸಾಕಷ್ಟು ಸಮಯವಿದೆ, ಪ್ರಯತ್ನವೊಂದಿದ್ದರೆ ಎಲ್ಲವೂ ಸಾಧ್ಯ. ಇದು ಕೇವಲ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಷ್ಟೇ ಅಲ್ಲ ಎಲ್ಲಾ ವಿದ್ಯಾರ್ಥಿಗಳಿಗೂ ಅನ್ವಯಿಸುವಂತದ್ದು. ಅದಕ್ಕೆ ತಾನೇ ಸರ್ವಜ್ಞ ಕವಿ ತನ್ನ ವಚನದಲ್ಲಿ "ಬರೆಯದೆ ಓದುವವನ ಕರೆತಂದು ಕೆರದಲ್ಲಿ ಹೊಡೆ" ಎಂಬ ಸಾಲನ್ನು ಬಳಸಿರುವುದು!