ಎಸ್ಎಸ್ಎಲ್ಸಿ ಮತ್ತು ಪಿಯುಸಿ ಬೋರ್ಡ್ ಪರೀಕ್ಷೆಗಳು ಹತ್ತಿರವಾದಂತೆ ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲೆ ಒತ್ತಡವು ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರ ಜವಾಬ್ದಾರಿಯು ಹೆಚ್ಚಿದೆ.
ವಿದ್ಯಾರ್ಥಿಗಳಿಗೆ ಕಲಿಕೆ ಸುಲಭವಾಗಲು, ಪರೀಕ್ಷೆ ಸಮಯದಲ್ಲಿ ಒತ್ತಡ ನಿವಾರಣೆ ಮಾಡಿಕೊಳ್ಳಲು ಹಾಗೂ ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು ಶಿಕ್ಷಕರು ಅನುಸರಿಸಬೇಕಾದ ಕೆಲವು ಸಾಮಾನ್ಯ ಕ್ರಮಗಳು ಇಲ್ಲಿವೆ.
ಕರ್ನಾಟಕದಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ ಬಹಳಷ್ಟು ಪೈಪೋಟಿಯಿಂದ ಕೂಡಿದೆ. ಜಿಲ್ಲೆಗಳ ವಿಚಾರದಲ್ಲೂ ಪೈಪೋಟಿ ಶುರುವಾಗಿದೆ.
ಶಾಲೆಗಳಲ್ಲಿ ಉತ್ತಮ ಫಲಿತಾಂಶ ಮೂಡಿಸಲು ಶಿಕ್ಷಕರು ಇನ್ನಿಲದ ಶ್ರಮ ವಹಿಸುತ್ತಿದ್ದಾರೆ. ಹೆಚ್ಚು ಅಂಕಗಳಿಸುವಂತೆ ಮಾಡಲು ಓದಿನಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈಗಾಗಲೇ ನಡೆಸಿರುವ ಪೂರ್ವಭಾವಿ ಪರೀಕ್ಷೆಗಳ ಫಲಿತಾಂಶ ಆಧರಿಸಿ ಯಾವುದರ ಕಡೆಗೆ ಹೆಚ್ಚು ಒಟ್ಟು ನೀಡಬೇಕೆಂದು ಅರಿತು ಮಕ್ಕಳಿಗೆ ವಿಶೇಷವಾಗಿ ತರಬೇತಿ ನೀಡುತ್ತಿದ್ದಾರೆ.ಇದರ ಜೊತೆಯಲ್ಲೇ ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಮತ್ತಷ್ಟು ಉತ್ತಮಗೊಳಿಸುವ ಕಡೆಯೂ ಗಮನ ಹರಿಸಿದ್ದಾರೆ. ಶನಿವಾರ ಮತ್ತು ಭಾನುವಾರವೂ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸುವ ಮೂಲಕ ಮೊದಲ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ.
ಶಾಲೆಯಲ್ಲಿ ಮಕ್ಕಳ ಕಲಿಕೆ:
ಶಾಲಾ ಸಮಯವನ್ನು ಮತ್ತಷ್ಟು ಹೆಚ್ಚಿಸುವುದರ ಮೂಲಕ ಮಕ್ಕಳನ್ನು ಹೆಚ್ಚು ಸಮಯ ಓದಿನ ಕಡೆಗೆ ಇರುವಂತೆ ಮಾಡುತ್ತಿದ್ದಾರೆ ಶಿಕ್ಷಕರು. ಇದರಿಂದ ವಿದ್ಯಾರ್ಥಿಗಳು ಮನೆಯಲ್ಲಿ ಓದುವ ಒತ್ತಡದಿಂದ ಪಾರಾಗಬಹುದು ಅಲ್ಲದೆ ಶಿಕ್ಷರ ಮಾರ್ಗದರ್ಶನದಲ್ಲಿ ಇನ್ನು ಉತ್ತಮವಾಗಿ ಕಲಿಯಬಹುದಾಗಿದೆ.
ತರಗತಿಯಲ್ಲಿ ನಡೆಸಬಹುದಾದ ಚಟುವಟಿಕೆಗಳು
ಪ್ರಶ್ನಾವಳಿ:
ಶಾಲೆಯಲ್ಲಿ ಪ್ರಶ್ನಾವಳಿ ಚಟುವಟಿಕೆ ಮೂಲಕ ಮಕ್ಕಳನ್ನು ಓದಿನ ಕಡೆಗೆ ಹೆಚ್ಚು ಗಮನ ಹರಿಸುವಂತೆ ಮಾಡಬಹುದು. ಹೆಚ್ಚು ಪ್ರಶ್ನೆಗಳನ್ನು ಕೇಳುತ್ತ, ಮಕ್ಕಳಿಗೂ ಪ್ರಶ್ನೆಗಳನ್ನು ಕೇಳುವಂತೆ ಪ್ರೇರೇಪಿಸುತ್ತ ಅವರಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬಹುದು. ಮಕ್ಕಳಿಂದಲೇ ಉತ್ತರಗಳನ್ನು ಪಡೆಯುವುದರಿಂದ ಉಳಿದ ವಿದ್ಯಾರ್ಥಿಗಳು ಆಸಕ್ತರಾಗಿ ಕೇಳುತ್ತಾರೆ, ಅಲ್ಲದೆ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ. ಈ ಚಟುವಟಿಕೆಯು ಮಕ್ಕಳನ್ನು ಸದಾ ಲವಲವಿಕೆಯಿಂದ ಕಲಿಯುವಂತೆ ಮಾಡುತ್ತದೆ.
ಅಬ್ಜೆಕ್ಟಿವ್ ಟೆಸ್ಟ್:
ಪರೀಕ್ಷೆಯಲ್ಲಿ ಕೇಳಬಹುದಾದ ಬಹುಮುಖ್ಯ ಪ್ರಶ್ನೆಗಳನ್ನು ಆಬ್ಜೆಕ್ಟಿವ್ ಮಾದರಿಯಲ್ಲಿ ರೂಪಿಸಿ ಮಕ್ಕಳಿಗೆ ಮತ್ತಷ್ಟು ಸುಲಭವಾಗಿ ಕಲಿಯುವಂತೆ ಮಾಡಬಹುದು. ಇದರ ಜೊತೆಗೆ ಪ್ರಶ್ನೆಗಳನ್ನು ಯಾವ ಯಾವ ರೀತಿ ಕೇಳಲಾಗುತ್ತದೆ ಎನ್ನುವುದರ ಮಾಹಿತಿಯನ್ನು ಮಕ್ಕಳಿಗೆ ನೀಡಬಹುದು. ಏಕೆಂದರೆ ಒಮ್ಮೆ ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಉತ್ತರಿಸುವುದು ಸುಲಭ. ಅಲ್ಲದೆ ಕಡಿಮೆ ಅವಧಿಯಲ್ಲಿ ಉತ್ತರಿಸುವ ಸಾಮರ್ಥ್ಯ ಕೂಡ ಮಕ್ಕಳಲ್ಲಿ ಹೆಚ್ಚುತ್ತದೆ.
ಸುಲಭವಾಗಿ ಅಧ್ಯಯನ ಮಾಡುವುದನ್ನು ಹೇಳಿಕೊಡಿ:
ಕೆಲವು ವಿದ್ಯಾರ್ಥಿಗಳು ಸುಲಭವಾಗಿ ಬಗೆ ಹರಿಸಬಹುದಾದಂತ ಪ್ರಶ್ನೆಗಳಿಗೂ ಉತ್ತರಿಸಲು ಕಷ್ಟಪಡುತ್ತಿರುತ್ತಾರೆ , ಅಂತಹ ಗೊಂದಲ ಉಂಟು ಮಾಡುವ ವಿಷಯವನ್ನು ಸರಳವಾಗಿ ಹೇಳಿಕೊಡುವುದರಿಂದ ಈ ರೀತಿಯ ಸಮಸ್ಯೆ ಬಗೆಹರಿಸಬಹುದು. ಅಲ್ಲದೆ ಯಾವುದನ್ನು ಕೇಂದ್ರೀಕರಿಸಿ ಓದಬೇಕು ಎಂದು ಸ್ಪಷ್ಟ ಪಡಿಸಿ ಹೇಳುವದರಿಂದ ವಿದ್ಯಾರ್ಥಿಗಳಿಗೆ ಸುಲಭವಾಗಿ ಓದುವುದನ್ನು ಅಭ್ಯಾಸ ಮಾಡಿಸಬಹುದು.
ಸಕಾರಾತ್ಮಕ ಭಾವನೆ ತುಂಬಿ:
ಓದಿನ ನಡುವೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವಂತಹ ವಿಷಯಗಳನ್ನು ಚರ್ಚಿಸುವುದರ ಮೂಲಕ ಅವರಲ್ಲಿ ಸಕಾರಾತ್ಮಕವಾಗಿ ಯೋಚಿಸುವುದನ್ನು ಕಲಿಸಬಹುದು. ಇದರಿಂದ ಅವರಿಗೆ ಓದಿನ ವಿಚಾರವಾಗಿ ಇರುವ ಭಯ ದೂರವಾಗುತ್ತದೆ. ಮುಕ್ತವಾಗಿ ಚರ್ಚಿಸುವುದರಿಂದ ಅವರ ಕಲಿಕಾ ವಿಧಾನ ಮತ್ತಷ್ಟು ಉತ್ತಮಗೊಳ್ಳುತ್ತದೆ.