ಭಾರತದ ಇತಿಹಾಸದಲ್ಲಿ ಆಗಸ್ಟ್ ತಿಂಗಳು ಎಂದರೆ ವಿಶೇಷ. 1942ರ ಅಗಸ್ಟ್ 9 ರಂದು ಬ್ರಿಟೀಷರನ್ನು ಭಾರತದಿಂದ ತೊಲಗಿಸಲು ಮಹಾತ್ಮ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿದರು. ಇಂದಿಗೆ ಕ್ವಿಟ್ ಇಂಡಿಯಾ ಚಳುವಳಿ ನಡೆದು 79 ವರ್ಷಗಳು ಕಳೆದಿವೆ.
ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ನಡೆದ ಈ ಚಳವಳಿಯ ಗುರಿ ಬ್ರಿಟಿಷ್ ಸರ್ಕಾರದಿಂದ ಭಾರತದ ಸ್ವಾತಂತ್ರ್ಯ ಪಡೆಯುವುದಾಗಿತ್ತು. ಆಗಸ್ಟ್ ೮ರಂದು ಮುಂಬಯಿಯ ಗೊವಾಳಿಯ ಮೈದಾನ (ಇಂದಿನ ಹೆಸರು - ಆಗಸ್ಟ್ ಕ್ರಾಂತಿ ಮೈದಾನ)ದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಘೋಷಣೆಯೊಂದಿಗೆ ಪ್ರಾರಂಭವಾಯಿತು. ಗಾಂಧಿಯವರ ಅಮೋಘವಾದ ಸತ್ವಯುತ ದೇಶಭಕ್ತಿಯ ಭಾಷಣದ ನಂತರ 24 ಗಂಟೆಗಳೊಳಗೆ ಬಹುತೇಕ ಕಾಂಗ್ರೆಸ್ ನಾಯಕರು ಬಂಧಿತರಾಗಿ ಆ ವರ್ಷವನ್ನು ಕಾರಾಗೃಹದಲ್ಲಿ ಕಳೆಯಬೇಕಾಯಿತು. ಇದರಿಂದ ಕ್ವಿಟ್ ಇಂಡಿಯ ಚಳವಳಿಯನ್ನು ಮತ್ತಷ್ಟು ಬಲಗೊಳಿಸಿತು.
ಅಲ್ಪಾವಧಿಯಲ್ಲಿ ಈ ಚಳುವಳಿಯು ಸಾಕಷ್ಟು ನಿಗ್ರಹವನ್ನು ಕಂಡಿತು ಆದರೆ ದೀರ್ಘಾವಧಿಯಲ್ಲಿ ಈ ಚಳುವಳಿಯು ಬ್ರಿಟಿಷರು ಭಾರತವನ್ನು ದೀರ್ಘಕಾಲ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡ ಅಂಶವಾಗಿದೆ. ಇಂದಿನ ವಿದ್ಯಾರ್ಥಿಗಳು ಸಹ ತಿಳಿಯಬೇಕಾದ ಅಂಶವೆಂದರೆ ದೊಡ್ಡವರು ಚಿಕ್ಕವರು ಎನ್ನದೇ ಭಾರತದ ಪ್ರತಿ ಪ್ರಜೆಯು ಚಳವಳಿಯಲ್ಲಿ ಭಾಗವಹಿಸಿದರು. ಅದರಲ್ಲೂ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಈ ಚಳವಳಿಗೆ ಮತ್ತಷ್ಟು ಬಲವನ್ನು ತುಂಬಿತ್ತು.
ನಾವು ಇಂದು ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ ಜೀವಿಸುತ್ತಿದ್ದೇವೆ ಎಂದರೆ ಅದಕ್ಕೆ ವೀರ ಮರಣ ಹೊಂದಿದ ಆತ್ಮಗಳೇ ಕಾರಣ ಹಾಗಾಗಿ ನಾವೂ ಬದುಕಿರುವವರೆಗೂ ದೇಶಕ್ಕಾಗಿ ಬದುಕೋಣ ಎನ್ನುತ್ತಾ ಈ ಚಳುವಳಿಯಿಂದ ವಿದ್ಯಾರ್ಥಿಗಳು ಏನೆಲ್ಲಾ ಪಾಠಗಳನ್ನು ತಿಳಿಯಬಹುದು ಎಂದು ತಿಳಿಸುತ್ತಿದ್ದೇವೆ.
ನಿಮ್ಮ ಉದ್ದೇಶಗಳನ್ನು ನಂಬಿ :
ಚಳುವಳಿ ನಡೆಸಿದ ಹಿಂದಿನ ಉದ್ದೇಶ ಸ್ವಾತಂತ್ರ್ಯ ಪಡೆಯುವುದು. ದೇಶದಾದ್ಯಂತ ಅನೇಕ ಗುಂಪುಗಳು ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದರು. ಅವರ ಚಳುವಳಿಯ ಉದ್ದೇಶ ಸ್ಪಷ್ಟವಾಗಿತ್ತು. ಅದರಂತೆಯೇ ವಿದ್ಯಾರ್ಥಿಗಳು ತಾವು ಯಾವ ಉದ್ದೇಶವನ್ನು ಇಟ್ಟುಕೊಂಡು ಹೆಜ್ಜೆ ಇಡುತ್ತೀರೋ ಅದನ್ನು ಬಲವಾಗಿ ನಂಬಿ ಹೋರಾಡಿ ಆಗ ಅದಕ್ಕೆ ಖಂಡಿತವಾಗಿಯೂ ಜಯ ಸಿಗಲಿದೆ. ಕಠಿಣ ಪರಿಶ್ರಮದಿಂದ ಎಲ್ಲವೂ ಸಾಧ್ಯವಾದೀತು.
ಐಕ್ಯತೆಯೇ ಶಕ್ತಿ :
ಭಾರತ ಬಿಟ್ಟು ತೊಲಗಿ ಚಳುವಳಿಯು ಸಾವಿರಾರು ಜನರನ್ನು ಒಟ್ಟುಗೂಡಿಸಿತು. ನಾಯಕರು ಮತ್ತು ಸಾಮೂಹಿಕ ಅನುಯಾಯಿಗಳನ್ನು ಹತ್ತಿಕ್ಕಿದರು, ಹೊಡೆದರು ಮತ್ತು ಜೈಲಿನಲ್ಲಿರಿಸಿದರು. ಆದರೂ ಅವರೆಲ್ಲರೂ ಒಟ್ಟಿಗೆ ಇದ್ದರು.
ವಿದ್ಯಾರ್ಥಿಗಳು ಎಂತಹ ಸಂದರ್ಭದಲ್ಲಿಯೂ ಒಟ್ಟಿಗೆ ನಿಲ್ಲುವ ಮೌಲ್ಯವನ್ನು ಬೆಳಸಿಕೊಳ್ಳಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಹಾಗೆಯೇ ಐಕ್ಯತೆಯೇ ನಿಮ್ಮ ಶಕ್ತಿ.
ನಿಮ್ಮ ನಾಯಕರನ್ನು ಅನುಸರಿಸಿ :
ಗಾಂಧಿಯ ಭಾಷಣದಿಂದ ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಯಿತು. ರಾಷ್ಟ್ರವನ್ನು ಅತ್ಯಂತ ಕಠಿಣ ಸಮಯದಲ್ಲೂ ಅವರು ಮುನ್ನಡೆಸಿದರು ಹೀಗಾಗಿಯೇ ನಾವಿಂದು ಸ್ವತಂತ್ರವಾಗಿದ್ದೇವೆ.
ವಿದ್ಯಾರ್ಥಿ ಸಮುದಾಯಗಳಲ್ಲಿ ಕೆಲವು ನಾಯಕರು ಇರುತ್ತಾರೆ. ಸಾಮಾನ್ಯವಾಗಿ ನಾವು ಅವರನ್ನು ಪಕ್ಕಕ್ಕೆ ತಳ್ಳಲು ಪ್ರಯತ್ನಿಸುತ್ತೇವೆ ಮತ್ತು ಅವರ ಮಾತನ್ನು ಕೇಳುವುದಿಲ್ಲ. ಅವರ ಮಾತುಗಳನ್ನು ಅನಗತ್ಯವೆಂದು ಪರಿಗಣಿಸುತ್ತೇವೆ. ಆದರೆ ವಿದ್ಯಾರ್ಥಿಗಳು ಒಬ್ಬ ನಾಯಕನ ಮಾತನ್ನು ಆಲಿಸಬೇಕು ಆಗ ಕಲಿಕೆಗೆ ದಾರಿ ಮಾಡಿಕೊಡುತ್ತದೆ ಮತ್ತು ಇದಿರಿಂದ ಉತ್ತಮ ನಾಯಕನು ಮುಂದೆ ಬರಲು ಸಹಾಯವಾಗುತ್ತದೆ.
ನಿಮ್ಮ ಸಾಮರ್ಥ್ಯ ನೀವೇ ತಿಳಿಯಿರಿ :
ನಿಮ್ಮ ಸಾಮರ್ಥ್ಯ ನಿಮಗೆ ತಿಳಿದಿರಲಿ. ಅಂದು ಅಷ್ಟೊಂದು ಜನರಿಗೆ ನಂಬಿಕೆ ಇಲ್ಲದಿದ್ದರೆ ಚಳುವಳಿ ಎಂದಿಗೂ ರೂಪುಗೊಳ್ಳುತ್ತಿರಲಿಲ್ಲ. ದೇಶ ಎಷ್ಟು ಬಲಿಷ್ಠವಾಗಿದೆ ಎಂದು ಗಾಂಧೀಜಿಗೆ ತಿಳಿದಿತ್ತು. ಆಂದೋಲನವು ದೇಶವನ್ನು ಒಟ್ಟುಗೂಡಿಸಿತು ಮತ್ತು ದೇಶದ ಶಕ್ತಿಯನ್ನು ಎಲ್ಲೆಡೆ ಪಸರಿಸಿತು.
ವಿದ್ಯಾರ್ಥಿಯಾಗಿ ನೀವು ಎಷ್ಟು ಶಕ್ತಿಶಾಲಿ ಎಂದು ನೀವು ಯಾವಾಗಲೂ ತಿಳಿದಿರಬೇಕು. ನಿಮ್ಮ ಸಹಪಾಠಿಗಳು ಮತ್ತು ಶಿಕ್ಷಕರು ನಿಮ್ಮನ್ನು ಹೇಗೆ ಸ್ವಿಕರಿಸುತ್ತಾರೆ ಎನ್ನುವುದಕ್ಕೀಂದ ಅವರ ನಿರೀಕ್ಷೆಗಳಿಗೂ ಮೀರಿ ಎತ್ತರಕ್ಕೆ ಬೆಳೆಯಬೇಕು. ನೀವು ನಿಮ್ಮ ಸಾಮರ್ಥ್ಯವನ್ನು ಅರಿತು ಬಾಳಿ.
ಮರಳಿ ಯತ್ನವ ಮಾಡಿ :
ಚಳುವಳಿ ಅತ್ಯಂತ ತೀವ್ರವಾಗಿ ಸಾಗಿತ್ತು. ನೆರೆದಿದ್ದ ಜನರನ್ನು ನಿಗ್ರಹಿಸಲಾಯಿತು ಆದರೆ ಅವರು ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. ದೇಶದ ಮೇಲಿನ ಪ್ರೀತಿ ಮತ್ತು ಮುಕ್ತರಾಗುವ ಬಯಕೆ ಅವರ ಹೃದಯಕ್ಕೆ ಹತ್ತಿರವಾಗಿತ್ತು ಮತ್ತು ಹೀಗಾಗಿ ಅವರ ಪ್ರಯತ್ನಗಳಿಗೆ ಅಂತಿಮವಾಗಿ ಪ್ರತಿಫಲ ಸಿಕ್ಕಿತು. ಇದರಿಂದ ವಿದ್ಯಾರ್ಥಿಯು ಕಲಿಯುವುದು ತುಂಬಾ ಇದೆ. ಪ್ರತಿ ಹಂತದಲ್ಲೂ ನಾವು ತುಂಬಾ ಸಮಸ್ಯೆಗಳನ್ನು ಎದುರಿಸುತ್ತೇವೆ ಅದರಿಂದ ಪ್ರಪಂಚದ ಅಂತ್ಯದಂತೆ ನಾವು ಭಾವಿಸುತ್ತೇವೆ. ಆದರೆ ಹಾಗೆ ಭಾವಿಸುವುದು ಬೇಡ ನಮ್ಮ ಗುರಿಯೆಡೆಗಿನ ಪ್ರಯತ್ನಗಳು ಹೆಚ್ಚಲಿ. ನಮಗಾಗಿ ಅನೇಕ ಕೊಡುಗೆ ನೀಡಿರುವ ಮಹಾತ್ಮರನ್ನು ಒಮ್ಮೆ ನೆನೆಯಿರಿ ಆಗ ನಿಮಗೆ ಎಲ್ಲವೂ ಸಾಧಿಸಬೇಕೆಂಬ ಛಲ ಹುಟ್ಟಲಿದೆ.