ಭಾರತವು ಪ್ರತಿ ವರ್ಷ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನವನ್ನು ಆಚರಿಸುತ್ತದೆ. ಈ ದಿನ ಪ್ರಸಿದ್ಧ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ಸೂಚಿಸುತ್ತದೆ.
2012 ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಹಾನ್ ವ್ಯಕ್ತಿ ಶ್ರೀನಿವಾಸ ರಾಮಾನುಜನ್ ಅವರನ್ನು ಗೌರವಿಸಲು ಡಿಸೆಂಬರ್ 22 ಅನ್ನು ರಾಷ್ಟ್ರೀಯ ಗಣಿತ ದಿನವೆಂದು ಘೋಷಿಸಿದರು.
ರಾಷ್ಟ್ರೀಯ ಗಣಿತ ದಿನದಂದು ವಿದ್ಯಾರ್ಥಿಗಳ ಭಾಷಣ ಮತ್ತು ಪ್ರಬಂಧ ಸ್ಪರ್ಧೆಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಶ್ರೀನಿವಾಸ ರಾಮಾನುಜನ್ ಅವರ ಕುರಿತಾದ ಆಸಕ್ತಿದಾಯಕ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.
ಶ್ರೀನಿವಾಸ ರಾಮಾನುಜನ್ ಅವರ ಕುರಿತಾದ ಆಸಕ್ತಿದಾಯಕ ಸಂಗತಿಗಳು :
* ಶ್ರೀನಿವಾಸ ರಾಮಾನುಜನ್ ಅವರು ಡಿಸೆಂಬರ್ 22, 1887 ರಂದು ತಮಿಳುನಾಡಿನ ಈರೋಡ್ನಲ್ಲಿ ತಮಿಳು ಬ್ರಾಹ್ಮಣ ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದರು.
* ರಾಮಾನುಜನ್ ಅವರು 1903 ರಲ್ಲಿ ಕುಂಭಕೋಣಂನ ಸರ್ಕಾರಿ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಕಾಲೇಜಿನಲ್ಲಿ ಅವರು ಗಣಿತ ಹೊರತುಪಡಿಸಿ ಉಳಿದ ವಿಷಯಗಳ ಬಗ್ಗೆ ನಿರ್ಲಕ್ಷ್ಯವಿದ್ದರಿಂದ ಪರೀಕ್ಷೆಗಳಲ್ಲಿ ಫೇಲ್ ಆದರು.
* 1912 ರಲ್ಲಿ ರಾಮಾನುಜನ್ ಅವರು ಮದ್ರಾಸ್ ಪೋರ್ಟ್ ಟ್ರಸ್ಟ್ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲಿ ಅವರ ಪ್ರತಿಭೆಯನ್ನು ಗಣಿತಜ್ಞರೂ ಆಗಿದ್ದ ಸಹೋದ್ಯೋಗಿಯೊಬ್ಬರು ಗುರುತಿಸಿದರು. ಸಹೋದ್ಯೋಗಿ ರಾಮಾನುಜನ್ ಅವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಟ್ರಿನಿಟಿ ಕಾಲೇಜಿನ ಪ್ರೊಫೆಸರ್ ಜಿಹೆಚ್ ಹಾರ್ಡಿ ಅವರಿಗೆ ಪರಿಚಯಿಸಿದರು.
* ಮೊದಲನೆಯ ಮಹಾಯುದ್ಧ ಪ್ರಾರಂಭವಾಗುವ ಕೆಲವು ತಿಂಗಳುಗಳ ಮೊದಲು ರಾಮಾನುಜನ್ ಟ್ರಿನಿಟಿ ಕಾಲೇಜಿಗೆ ಸೇರಿದರು. 1916 ರಲ್ಲಿ ಅವರು ಬ್ಯಾಚುಲರ್ ಆಫ್ ಸೈನ್ಸ್ (BSc) ಪದವಿಯನ್ನು ಪಡೆದರು. ಅವರು 1917 ರಲ್ಲಿ ಲಂಡನ್ ಮ್ಯಾಥಮೆಟಿಕಲ್ ಸೊಸೈಟಿಗೆ ಆಯ್ಕೆಯಾದರು.
* ಮುಂದಿನ ವರ್ಷ ಅವರು ದೀರ್ಘವೃತ್ತದ ಕಾರ್ಯಗಳು ಮತ್ತು ಸಂಖ್ಯೆಗಳ ಸಿದ್ಧಾಂತದ ಮೇಲಿನ ಸಂಶೋಧನೆಗಾಗಿ ಪ್ರತಿಷ್ಠಿತ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು.
* ಅದೇ ವರ್ಷದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಅವರು ಟ್ರಿನಿಟಿ ಕಾಲೇಜಿನ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯರಾದರು.
* ರಾಮಾನುಜನ್ 1919 ರಲ್ಲಿ ಭಾರತಕ್ಕೆ ಮರಳಿದರು. ನಂತರ ಒಂದು ವರ್ಷದ ಬಳಿಕ ಅವರು ತಮ್ಮ 32ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
* ಶ್ರೀನಿವಾಸ ರಾಮಾನುಜನ್ ಅವರ ಜೀವನ ಚರಿತ್ರೆಯನ್ನು ಆಧರಿಸಿ 2015 ರಲ್ಲಿ 'ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ' ಚಲನಚಿತ್ರ ಬಿಡುಗಡೆಯಾಯಿತು. ಈ ಚಿತ್ರವು ಗಣಿತಜ್ಞನ ಜೀವನ ಮತ್ತು ಪ್ರಸಿದ್ಧ ಗಣಿತದ ಸಿದ್ಧಾಂತಗಳನ್ನು ಸ್ಥಾಪಿಸುವ ಕಡೆಗೆ ಆತನ ಪ್ರಯಾಣವನ್ನು ವಿವರಿಸುತ್ತದೆ.
* ರಾಮಾನುಜನ್ ತಮ್ಮ ಗಣಿತದ ಪ್ರತಿಭೆಯಿಂದ ತಮ್ಮದೇ ಆದ ಪ್ರಮೇಯಗಳನ್ನು ಕಂಡುಹಿಡಿದರು ಮತ್ತು ಸ್ವತಂತ್ರವಾಗಿ 3900 ಫಲಿತಾಂಶಗಳನ್ನು ಸಂಗ್ರಹಿಸಿದರು.
* ರಾಬರ್ಟ್ ಕ್ನೈಗೆಲ್ ಬರೆದ ರಾಮಾನುಜನ್ ಅವರ ಜೀವನಚರಿತ್ರೆ 'ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ' ನಲ್ಲಿ ಉಲ್ಲೇಖಿಸಿರುವಂತೆ , ಜಿ.ಎಚ್. ಹಾರ್ಡಿ ಒಮ್ಮೆ ರಾಮಾನುಜನ್ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗಿದ್ದರು. ಶ್ರೀ ಹಾರ್ಡಿ ಅವರು '1729' ಸಂಖ್ಯೆಯ ಟ್ಯಾಕ್ಸಿಯಲ್ಲಿ ಬಂದಿರುವುದಾಗಿ ಮತ್ತು ಅದು ಸಾಮಾನ್ಯ ಸಂಖ್ಯೆ ಎಂದು ತೋರುತ್ತದೆ ಎಂದು ಹೇಳಿದರು. ಅಗ ರಾಮಾನುಜನ್ ಅವರು 1729 ಇದು ಎರಡು ವಿಭಿನ್ನ ಘನಗಳ ಮೊತ್ತವನ್ನು ಎರಡು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಬಹುದಾದ ಚಿಕ್ಕ ಸಂಖ್ಯೆಯಾಗಿದೆ ಎಂದು ಅವರು ಹೇಳಿದ್ದರು.