ನಮ್ಮ ದೇಶಕ್ಕೆ ಕೊರೋನಾ ಹೆಜ್ಜೆ ಇಟ್ಟಾಗಿನಿಂದಲೂ ಎಲ್ಲಾ ರೀತಿಯಲ್ಲೂ ವ್ಯತ್ಯಾಸಗಳು ಉಂಟಾಗಿವೆ. ಜನಜೀವನ ಸಂಕಷ್ಟದಲ್ಲಿ ನಲುಗಿ ಹೋಗುತ್ತಿದೆ. ವಿದ್ಯಾರ್ಥಿಗಳು ಮತ್ತು ಮಕ್ಕಳ ಪಾಲಿಗೆ ಇದು ಕರಾಳ ದಿನಗಳೇ ಆಗಿ ಹೋಗಿವೆ.
ಕಳೆದ ಒಂದು ವರ್ಷದಿಂದ ಕೊರೋನಾ ಸೋಂಕು ಎಲ್ಲರನ್ನೂ ಸಂಕಷ್ಟಕ್ಕೀಡು ಮಾಡಿದೆ. ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಶೈಕ್ಷಣಿಕ ವೇಳಾಪಟ್ಟಿಗಳು ಬದಲಾಗಿವೆ. ಯಾವುದೇ ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಲ್ಲಿ ನಡೆದಿಲ್ಲ. ಇನ್ನು ಮುಂದೆ ಯಾವ ದಿನಗಳಲ್ಲಿ ನಡೆಯಲಿವೆ ಎಂಬ ನಿಖರ ಮಾಹಿತಿಗಳು ಕೂಡ ಇಲ್ಲ. ಹೀಗಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಸರ್ಕಾರ ರದ್ದು ಮಾಡಿದೆ. ಇನ್ನು ಕೆಲವು ತರಗತಿಗಳ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ನೀಡುವ ಮೂಲಕ ಮುಂದಿನ ತರಗತಿಗೆ ಬಡ್ತಿ ನೀಡಿದೆ.
ಕರ್ನಾಟಕ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಗಳು ನಡೆಯಲಿವೆಯೇ ಎಂಬ ಅನುಮಾನ ಮನೆ ಮಾಡಿದೆ. ಆದರೆ ಸದ್ಯಕ್ಕೆ ಶಿಕ್ಷಣ ಇಲಾಖೆಯು ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿದೆ. ಪರೀಕ್ಷೆಯ ಕುರಿತು ಇಲಾಖೆಯ ಮುಂದಿನ ಪ್ರಕಟಣೆಗಾಗಿ ಕಾದು ನೋಡಬೇಕಿದೆ. ಹಾಗಾಗಿ ಲಾಕ್ಡೌನ್ ಸಮಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ಸಿದ್ಧತೆ ನಡೆಸಬೇಕು ಎಂದು ನಾವು ತಿಳಿಸಲಿದ್ದೇವೆ.
ಪಠ್ಯಕ್ರಮ ತಿಳಿಯಿರಿ:
ಕೊರೋನಾ ಕಾರಣದಿಂದಾಗಿ ಶಾಲೆಗಳಲ್ಲಿ ಪಾಠ ಕೇಳುವ ಅವಕಾಶ ಈ ಭಾರಿ ವಿದ್ಯಾರ್ಥಿಗಳಿಗಿಲ್ಲ. ಕೇವಲ ಆನ್ಲೈನ್ ತರಗತಿಗಳ ಮೊರೆ ಹೋಗಿ, ಮನೆಯಲ್ಲೇ ಹೆಚ್ಚು ಅಧ್ಯಯನ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಹಾಗಾಗಿ ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ ಇದು ನಿಮ್ಮ ಮೊದಲ ಬೋರ್ಡ್ ಪರೀಕ್ಷೆ ಆದಕಾರಣ ಪರೀಕ್ಷೆಯ ಪಠ್ಯಕ್ರಮವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ.
ಅಧ್ಯಯನಕ್ಕೆ ಪ್ಲಾನ್ ಮಾಡಿ:
ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಈ ಸಮಯದಲ್ಲಿ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರೀಕ್ಷಾ ದಿನಾಂಕಗಳು ಇನ್ನೂ ನಿಗಧಿಯಾಗಿಲ್ಲ ಆದರೆ ಉಳಿದ ಸಮಯದಲ್ಲಿ ಅಧ್ಯಯನ ಮಾಡಲು ಯೋಜನೆ ಹಾಕಿಕೊಳ್ಳಿ. ನೀವು ಈಗಾಗಲೇ ಓದಿಕೊಂಡು ಮಾಡಿಕೊಂಡಿರುವ ಟಿಪ್ಪಣಿಗಳ ಸಹಾಯದಿಂದ ಸಮಯಕ್ಕೆ ತಕ್ಕಂತೆ ವಿಷಯವನ್ನು ಕವರ್ ಮಾಡಲು ಪ್ಲಾನ್ ಮಾಡಿಕೊಳ್ಳಿ. ಇದು ಒಂದು ರೀತಿಯಲ್ಲಿ ಪುನರ್ ಅಧ್ಯಯನದಂತಾಗುತ್ತದೆ. ಹೆಚ್ಚು ಹೆಚ್ಚು ಓದಿದರೆ ವಿಷಯಗಳು ಕೂಡ ತಲೆಯಲ್ಲಿ ಅಚ್ಚುಳಿಯುತ್ತವೆ ಎನ್ನುವ ಮಾತಿದೆ. ಹಾಗಾಗಿ ನೀವು ಪಠ್ಯದ ವಿಷಯಗಳನ್ನು ಬಲ್ಲವರಾಗುತ್ತೀರಿ. ಹಾಗಾಗಿ ಸರಿಯಾದ ಪ್ಲಾನ್ ನೊಂದಿಗೆ ಅಭ್ಯಸಿಸಿ ಸಿದ್ಧತೆ ಮಾಡಿಕೊಳ್ಳಿ.
ಚರ್ಚೆ ಮಾಡಿ:
ನೀವು ಈಗ ಪಠ್ಯಕ್ರಮವನ್ನು ತಿಳಿದಿದ್ದೀರಿ, ನಂತರ ಸಮಯಕ್ಕನುಸಾರ ಅಭ್ಯಸಿಸಲು ಆಯೋಜನೆಯನ್ನು ಹಾಕಿಕೊಂಡಿದ್ದೀರಿ, ನಂತರ ಮುಂದೇನು ಮಾಡಬೇಕು ?. ನೀವು ನಿಮ್ಮ ಪುನರ್ ಅಧ್ಯಯನದಲ್ಲಿ ಒಂದಷ್ಟು ಕ್ಲಿಷ್ಟ ಸಂಗತಿಗಳು ಅಥವಾ ಸಂದೇಹಗಳನ್ನು ಕಂಡಿರುತ್ತೀರಿ ಅದನ್ನು ಪರಿಹರಿಸಿಕೊಳ್ಳುವುದು ಅವಶ್ಯಕವಲ್ಲವೇ ? ಹಾಗಾಗಿ ವಿದ್ಯಾರ್ಥಿಗಳು ನೀವು ನಿಮ್ಮ ನೆಚ್ಚಿನ ಶಿಕ್ಷಕರೊಂದಿಗೆ ಅಥವಾ ಆಪ್ತ ಸ್ನೇಹಿತರಿಗೆ ಕರೆ ಮಾಡುವ ಮೂಲಕ ಚರ್ಚೆ ಮಾಡಿ. ವಿದ್ಯಾರ್ಥಿಗಳು ಕರೆ ಮೂಲಕ ನಿಮ್ಮ ಸಂದೇಹಗಳನ್ನು ಬಗೆಹರಿಸಿಕೊಳ್ಳಿ. ಇದರಿಂದ ನಿಮ್ಮ ಅಧ್ಯಯನ ಪಕ್ವವಾಗುತ್ತದೆ. ಹಾಗೆಯೇ ನಿಮ್ಮ ಓದಿಗೆ ಸ್ಪಷ್ಟತೆ ಸಿಗುತ್ತದೆ.
ಆರೋಗ್ಯದ ಕಡೆ ಗಮನಹರಿಸಿ:
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥಿತಿಗಳು ಸಹಜವಾಗಿರುವುದು ಅತ್ಯಗತ್ಯ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಸಾಮಾಜಿಕ ಜಾಲತಾಣಗಳ ಮೊರೆಹೋಗದೆ ನಿಮ್ಮ ಅಧ್ಯಯನದ ಕಡೆಗೆ ಹೆಚ್ಚು ಗಮನವಹಿಸಿ. ನಿದ್ದೆ ಗೆಡುವುದು ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಚಟುವಟಿಕೆಗಳನ್ನು ಮಾಡದಿರಿ. ಊಟ ಇತ್ಯಾದಿಗಳ ಬಗ್ಗೆ ಕಾಳಜಿಯಿಂದಿರಿ. ನಿಮಗೆ ಸಿಕ್ಕಿರುವ ಸಮಯವನ್ನು ಅಧ್ಯಯನದ ಜೊತೆಗೆ ಆರೋಗ್ಯದಿಂದ ಕಳೆಯುವಂತೆ ಕಾಳಜಿವಹಿಸಿ.
ಪರಿಕರಗಳ ಜೊತೆಗೆ ಪರೀಕ್ಷೆಗೆ ಸಿದ್ಧರಾಗಿರಿ:
ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ನೋಡಿಕೊಂಡು ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಲಿದೆ. ಹಾಗಂತ ಆಲಸ್ಯ ಬೇಡ, ನೀವು ಪರೀಕ್ಷೆಗೆ ಅಗತ್ಯವಿರುವ ಎಲ್ಲಾ ಪರಿಕರಗಳೊಂದಿಗೆ ಪರೀಕ್ಷೆಗೆ ಸಿದ್ಧರಾಗಿರಿ. ಪರೀಕ್ಷಾ ದಿನಾಂಕಗಳನ್ನು ಘೋಷಿಸಿದ ಬಳಿಕ ಒಂದೆಡೆ ಕೊರೋನಾ ಸೋಂಕಿನ ಭಯ ಮತ್ತು ಇನ್ನೊಂದೆಡೆ ಪರೀಕ್ಷಾ ಭಯ, ಎರಡೂ ನಿಮ್ಮನ್ನು ಆತಂಕಕ್ಕೀಡು ಮಾಡುವ ಸಂಭವವಿರುತ್ತದೆ. ಹಾಗಾಗಿ ಯಾವಾಗಲೇ ಪರೀಕ್ಷಾ ದಿನಾಂಕಗಳನ್ನು ನಿಗದಿ ಮಾಡಿದರೂ ಸಹ ನೀವು ಪರೀಕ್ಷೆಗೆ ಯಾವುದೇ ಲೋಪಗಳಿಲ್ಲದೆ ಹಾಜರಾಗುವಂತಿರಬೇಕು.