ಎಸ್ಎಸ್ಎಲ್ಸಿ ಪರೀಕ್ಷೆ ಮುಗೀತು ಮುಂದೇನು? ಅನ್ನುವ ಪ್ರಶ್ನೆಗೆ ಹಲವರಲ್ಲಿ ಉತ್ತರ ಪರೀಕ್ಷಾ ಫಲಿತಾಂಶ ಬಂದ ಮೇಲೆ ನಿರ್ಧಾರ ಮಾಡ್ತೇನೆ ಅನ್ನೋದು. ಆದರೆ ಇನ್ನೂ ಕೆಲವರು ನಾನು ಡಾಕ್ಟರ್ ಆಗ್ತೇನೆ, ನಾನು ಇಂಜಿನಿಯರ್ ಆಗ್ತೇನೆ ಹಾಗಾಗಿ ವಿಜ್ಞಾನವನ್ನೇ ಓದ್ತೇನೆ ಎನ್ನುತ್ತಾರೆ ಮತ್ತೆ ಕೆಲವರು ನಾನು ಅಧಿಕಾರಿ ಆಗ್ಬೇಕು ಹಾಗಾಗಿ ಕಲಾ ವಿಭಾಗವನ್ನು ಓದ್ತೇನೆ ಮತ್ತು ಅದು ಸುಲಭ ಇರುತ್ತಂತೆ ಹಾಗಾಗಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಮತ್ತೆ ಇನ್ನಷ್ಟು ವಿದ್ಯಾರ್ಥಿಗಳು ಬ್ಯಾಂಕ್ಗಳಲ್ಲಿ ಕೆಲಸ ಮಾಡೋದು ಬೆಸ್ಟ್ ಹಾಗಾಗಿ ನಾನು ಕಾಮರ್ಸ್ ಮಾಡ್ತೇನೆ ಎನ್ನುವ ಮಾತನ್ನು ಹೇಳ್ತಾರೆ. ಹಾಗಾದ್ರೆ ಪರೀಕ್ಷಾ ಫಲಿತಾಂಶ ಬರೋಕೆ ಕೆಲವು ದಿನಗಳಿವೆ ಈಗೇನ್ ಮಾಡಬಹುದು ಅಂತೀರಾ ಹಾಗಿದ್ದರೆ ಇಲ್ಲಿ ಕೇಳಿ ಪರೀಕ್ಷಾ ಫಲಿತಾಂಶ ಪ್ರಕಟವಾದ ಬಳಿಕ ಸಮಯದ ಅಭಾವವಿರುವ ಕಾರಣ ಈಗಿನಿಂದಲೇ ಮುಂದೆ ಏನು ಮಾಡಬೇಕು ಎಂದು ಚಿಂತಿಸಿ.
ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾಗುವ ಮುನ್ನ ಮುಂದೆ ಏನು ಓದಬೇಕು ಮತ್ತು ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಯಾವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು ಮತ್ತು ಕಾಲೇಜು ಪ್ರವೇಶ ಶುಲ್ಕದ ಬಗೆಗೆ ತಿಳಿದುಕೊಳ್ಳಿ.
ನಿಮ್ಮಿಷ್ಟದ ವಿಷಯ ಯಾವುದೆಂದು ಮೊದಲು ಯೋಚಿಸಿ:
ಶೈಕ್ಷಣಿಕ ಶಿಕ್ಷಣದ ಪ್ರಾಥಮಿಕ ಹಂತದಿಂದಲೂ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಗಿಸಿ ಬೋರ್ಡ್ ಎಕ್ಸಾಂ ಹಂತಕ್ಕೆ ತಲುಪುತ್ತಾರೆ. ಇಲ್ಲಿ ಪಡೆಯುವ ಅಂಕಗಳು ಮತ್ತು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಪೋಷಕರು ಮತ್ತು ಇನ್ನೊಬ್ಬರ ಮಾತುಗಳನ್ನು ಕೇಳುವುದು ಸಾಮಾನ್ಯ ಕಾರಣ ಇನ್ನೂ ಸ್ವಂತ ನಿರ್ಧಾರಗಳನ್ನುತೆಗೆದುಕೊಳ್ಳುವಷ್ಟು ಬುದ್ದಿಮಟ್ಟವನ್ನು ಹೊಂದಿರುವುದಿಲ್ಲ ಹಾಗಾಗಿ ಬೋರ್ಡ್ ಎಕ್ಸಾಂ ಮುಗಿಸಿರುವ ವಿದ್ಯಾರ್ಥಿಗಳು ಇನ್ನೊಬ್ಬರ ಹೇಳಿಕೆಗಳನ್ನು ಕೇಳದೆ ಮತ್ತು ಪೋಷಕರ ಒತ್ತಡಕ್ಕೆ ಮಣಿಯದೆ ತಮಗೆ ಯಾವ ವಿಷಯವು ಹೆಚ್ಚು ಆಸಕ್ತಿದಾಯಕವೋ ಆ ವಿಷಯವನ್ನು ಆಯ್ಕೆ ಮಾಡಲು ಮೊದಲು ಆಲೋಚಿಸಿ.
ವಿಷಯ ಆಯ್ಕೆಯ ಬಗೆಗೆ ಶಿಕ್ಷಕರು ಮತ್ತು ಪೋಷಕರೊಡನೆ ಚರ್ಚಿಸಿ:
ಪರೀಕ್ಷೆ ಹೇಗೆ ಬರೆದಿದ್ದೀರಿ ಮತ್ತು ನಿಮ್ಮ ಸಾಮರ್ಥ್ಯದ ಬಗೆಗೆ ನಿಮಗೆ , ನಿಮ್ಮ ಪೋಷಕ ಮತ್ತು ಶಿಕ್ಷಕರಿಗೆ ತಿಳಿದಿರುತ್ತದೆ ಹಾಗಾಗಿ ನೀವು ಎಸ್ಎಸ್ಎಲ್ಸಿ ನಂತರ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಅವರೊಡನೆ ಚರ್ಚಿಸಿ. ಮತ್ತು ಕಾಲೇಜು ಆಯ್ಕೆ ಬಗ್ಗೆ ಹೆಚ್ಚಿನ ಚರ್ಚೆ ನಡೆಸಿ ಕಾರಣ ಅನೇಕ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಇದ್ದು ಓದಲು ಇಷ್ಟ ಪಡುವುದಿಲ್ಲ ಮತ್ತೆ ಕೆಲವರು ಪ್ರತಿನಿತ್ಯ ಪ್ರಯಾಣ ಮಾಡಿ ಕಾಲೇಜಿಗೆ ಹೋಗಬೇಕಿರುತ್ತದೆ ಇಂತಹ ಹಲವಾರು ಕಾರಣಗಳಿಂದ ಕಾಲೇಜು ಆಯ್ಕೆ ಬಗೆಗೆ ಆಲೋಚಿಸಿ ಮತ್ತು ಕಾಲೇಜು ಶುಲ್ಕದ ವಿವರವನ್ನು ಪಡೆಯುವುದು ಅಗತ್ಯ ಹಾಗಾಗಿ ಇದರ ಬಗೆಗೆ ಪೋಷಕ ಮತ್ತು ಶಿಕ್ಷಕರೊಂದಿಗೆ ಈ ಬಗೆಗೆ ಚರ್ಚಿಸಿ.
ಹಿರಿಯ ವಿದ್ಯಾರ್ಥಿಗಳಿಂದ ಸಲಹೆ ಪಡೆಯಿರಿ:
ನಿಮಗೆ ನಿಮ್ಮ ಮುಂದಿನ ಶಿಕ್ಷಣದಲ್ಲಿನ ಆಯ್ಕೆಯ ಬಗೆಗೆ ಗೊಂದಲಗಳಿದ್ದಲ್ಲಿ ಹಿರಿಯ ವಿದ್ಯಾರ್ಥಿಗಳೊಡನೆ ಸಲಹೆ ಪಡೆಯಿರಿ. ಅವರು ಯಾವ ವಿಷಯವನ್ನು ಆಯ್ಕೆ ಮಾಡಿದ್ದಾರೆ ಮತ್ತು ಅವರ ವಿದ್ಯಾಭ್ಯಾಸ ಹೇಗಿದೆ ಮತ್ತು ಕಾಲೇಜು ಶಿಕ್ಷಣ ಹಾಗೂ ಶಿಕ್ಷಣ ಸೌಲಭ್ಯ ಹೇಗಿದೆ? ಮತ್ತು ಆ ಕೋರ್ಸ್ ಮಾಡುವುದರಿಂದ ಭವಿಷ್ಯ ಹೇಗಿದೆ ಎಂಬುದರ ಬಗೆಗೆ ಒಂದಷ್ಟು ಸಲಹೆ ಪಡೆಯಿರಿ. ಸಲಹೆ ತೆಗೆದುಕೊಂಡ ನಂತರ ಅವರ ನಿರ್ಧಾರಗಳಿಗೆ ನೀವು ಮಣಿಯದೆ ನಿಮ್ಮದೇ ಆದ ಆಲೋಚನೆಯನ್ನು ನಡೆಸಿ ಆಗ ಮುಂದೆ ಏನು ಮಾಡಿದರೆ ಉತ್ತಮ ಎಂದು ತಿಳಿಯಬಹುದು ಕಾರಣ ನಿಮ್ಮ ಭವಿಷ್ಯಕ್ಕೆ ಜವಾಬ್ದಾರರಾಗಿರುತ್ತೀರಿ.
ಸ್ನೇಹಿತ/ಸ್ನೇಹಿತರೊಂದಿಗೆ ಮುಂದಿನ ಶಿಕ್ಷಣದ ಬಗೆಗೆ ಚರ್ಚಿಸಿ:
ಶಾಲೆ ಎಂದರೆ ಒಗ್ಗಟ್ಟು ಇಲ್ಲಿ ನೀವು ಎಲ್ಲರೊಡನೆ ಮನಸ್ಸು ಬಿಚ್ಚಿ ಮಾತನಾಡುತ್ತೀರಿ ಹಾಗಾಗಿ ನಿಮ್ಮೊಟ್ಟಿಗೆ ಓದುವ ಸ್ನೇಹಿತ / ಸ್ನೇಹಿತೆ ಮುಂದೆ ಏನು ಮಾಡಲಿದ್ದಾರೆ ಮತ್ತು ಎಲ್ಲಿ ಓದಲಿದ್ದಾರೆ ಅವರ ಆಯ್ಕೆಗಳೇನು ಮತ್ತು ಯಾತಕ್ಕಾಗಿ ಆ ವಿಷಯವನ್ನು ಆಯ್ಕೆ ಮಾಡಲಿದ್ದಾರೆ? ಮುಂದಿನ ಗುರಿಗಳೇನು ಎಂಬುದನ್ನು ಚರ್ಚಿಸಿ ಆಗ ನಿಮ್ಮ ಗುರಿಗಳೇನು ಮತ್ತು ನಿಮ್ಮಿಷ್ಟದ ಹಾದಿ ಯಾವುದು ಮತ್ತು ಏನು ಓದಿದರೆ ಗುರಿಯನ್ನು ತಲುಬಹುದು ಎನ್ನುವುದಕ್ಕೆ ಒಂದಷ್ಟು ಮಾಹಿತಿಯು ದೊರೆಯುತ್ತದೆ.
ದಿನನಿತ್ಯ ಪತ್ರಿಕೆಗಳನ್ನು ಓದಿ ಕಾಲೇಜುಗಳ ಮಾಹಿತಿ ಪಡೆಯಿರಿ:
ಇಂದಿನ ದಿನಗಳಲ್ಲಿ ಕಾಲೇಜುಗಳ ಆಯ್ಕೆಯೂ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವಂತದ್ದೇ ಆಗಿದೆ. ಹಾಗಾಗಿ ದಿನನಿತ್ಯ ಪತ್ರಿಕೆಗಳನ್ನು ಓದಿ ಸುತ್ತಮುತ್ತ ಯಾವೆಲ್ಲಾ ಕಾಲೇಜುಗಳಿವೆ? ಯಾವೆಲ್ಲಾ ವಿಷಯಗಳಲ್ಲಿ ಶಿಕ್ಷಣವನ್ನು ನೀಡುತ್ತಿವೆ ಮತ್ತು ಶುಲ್ಕದ ಮಾಹಿತಿ ಹಾಗೆ ಪ್ರವೇಶಾತಿ ಯಾವಾಗಿನಿಂದ ಪ್ರಾರಂಭ ಎನ್ನುವುದರ ಬಗೆಗೆ ಸಾಕಷ್ಟು ಮಾಹಿತಿಯನ್ನು ಪಡೆಯಬಹುದು. ಹಾಗಾಗಿ ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದಿ ಮಾಹಿತಿಗಳನ್ನು ಪಡೆಯಿರಿ.
ಇದಿಷ್ಟೂ ಸಲಹೆಗಳನ್ನು ಪಾಲಿಸಿ ವಿದ್ಯಾರ್ಥಿಗಳು ಮುಂದಿನ ಶಿಕ್ಷಣದ ಬಗೆಗೆ ನಿರ್ಧಾರವನ್ನು ಕೈಗೊಳ್ಳಿ ಮತ್ತು ನಿಮ್ಮ ಗುರಿಯನ್ನು ತಲುಪುವ ಪ್ರಯತ್ನ ಮಾಡಿ. ಈ ಹಂತದಲ್ಲಿ ವಿದ್ಯಾರ್ಥಿಗಳು ಯಾರದೇ ಒತ್ತಡಕ್ಕೆ ಒಳಗಾಗದೆ ವಿಷಯವನ್ನು ಆಯ್ಕೆ ಮಾಡಿ ಕಾರಣ ನಾಳೆ ಏನೇ ಆದರೂ ಅದಕ್ಕೆ ನೀವೆ ಹೊಣೆಯಾಗಿರುತ್ತೀರಿ. ನಾನು ಈ ವಿಷಯ ಆಯ್ಕೆ ಮಾಡಬಾರದಿತ್ತು, ನಂಗೆ ಈ ವಿಷಯ ಕಷ್ಟ ಆಗುತ್ತಿದೆ ಅಥವಾ ನನ್ನಿಷ್ಟದ ವಿಷಯ ಬೇರೆಯೇ ಇತ್ತು ಆದರೆ ಅಪ್ಪ ಅಮ್ಮನ ಒತ್ತಡಕ್ಕೆ ಈ ವಿಷಯವನ್ನು ಆಯ್ಕೆ ಮಾಡಿದೆ ಎಂದು ದೂಷಿಸುವ ಬದಲು ಈಗಲೇ ಸಮಾಧಾನ ಚಿತ್ತದಿಂದ ಕುಳಿತು ಈ ಬಗೆಗೆ ಆಲೋಚಿ ಎಂಬುದು ಸಲಹೆ.