ಭಾರತದ ಶ್ರೇಷ್ಠ ನಾಯಕ ಮತ್ತು ಯುವಜನ ಶಕ್ತಿಯಲ್ಲಿ ಅಪಾರ ನಂಬಿಕೆಯುಳ್ಳ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಗೌರವಿಸಲು ಪ್ರತಿ ವರ್ಷ ಜನವರಿ 12 ರಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ.
ವಿವೇಕಾನಂದರು ಶ್ರೀ ರಾಮಕೃಷ್ಣ ಪರಮಹಂಸರ ಕಟ್ಟಾ ಶಿಷ್ಯರಾಗಿದ್ದರು ಮತ್ತು ಭಾರತದಲ್ಲಿ ಹಿಂದೂ ಧರ್ಮದ ಪುನರುಜ್ಜೀವನದಲ್ಲಿ ಪ್ರಮುಖ ಶಕ್ತಿಯಾಗಿದ್ದರು. ದೇಶದ ಶ್ರೇಷ್ಠ ಸಾಮಾಜಿಕ ನಾಯಕರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟ ಸ್ವಾಮಿ ವಿವೇಕಾನಂದರು ಜನವರಿ 12, 1863 ರಂದು ಕೋಲ್ಕತ್ತಾದಲ್ಲಿ ಜನಿಸಿದರು.
ವಸಾಹತುಶಾಹಿ ಭಾರತದಲ್ಲಿ ರಾಷ್ಟ್ರೀಯ ಏಕೀಕರಣಕ್ಕಾಗಿ ಒತ್ತಾಯಿಸಿದರು ಮತ್ತು ಅವರು ಚಿಕಾಗೋದಲ್ಲಿ 1893 ರಲ್ಲಿ ನೀಡಿದ ಭಾಷಣವು ಪ್ರಸಿದ್ಧ ಭಾಷಣವಾಗಿ ಉಳಿದಿದೆ. ಯುವ ದಿವಸ್ ಅನ್ನು ದೇಶದ ಯುವಕರು ಉತ್ತಮ ವ್ಯಕ್ತಿಯಾಗಲು, ದೇಶದ ಅಭಿವೃದ್ಧಿಗಾಗಿ ಶ್ರಮಿಸಲು ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ. ಯುವ ಜನತೆ ಈ ದಿನದ ಇತಿಹಾಸ, ಮಹತ್ವ, ಥೀಮ್ ಮತ್ತು ಆಚರಣೆಗಳ ಕುರಿತು ಒಂದಷ್ಟು ಮಾಹಿತಿಯನ್ನು ತಿಳಿಯಲು ನಾವಿಲ್ಲಿ ಮಾಹಿತಿ ನೀಡಿದ್ದೇವೆ ತಪ್ಪದೇ ಓದಿ.
ರಾಷ್ಟ್ರೀಯ ಯುವ ದಿನದ ಇತಿಹಾಸ :
ಸ್ವಾಮಿ ವಿವೇಕಾನಂದರು ಜನವರಿ 12,1863 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಅವರು ಇತರ ಸನ್ಯಾಸಿಗಳಂತೆ ಇರಲಿಲ್ಲ, ಬದಲಾಗಿ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯುವಕ ದನಿಯಾದರು. ಜಾಗತಿಕ ಮಟ್ಟದಲ್ಲಿ ಅವರ ಸಾಧನೆಗಳು ಭಾರತದ ಹೆಸರನ್ನು ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದವು. ಇದು ಆಧ್ಯಾತ್ಮಿಕತೆಯ ಭೂಮಿಯಾಗಿ ಭಾರತದ ಚಿತ್ರಣವನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿತು. ಯುವಕರ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಅವರು ಅಪಾರ ಗಮನಹರಿಸಿದರು. ಬ್ರಿಟಿಷರ ವಿರುದ್ಧ ಯುವ ಪೀಳಿಗೆ ಸ್ವಾತಂತ್ರ್ಯ ಪಡೆಯಲು ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸ್ವಾಮಿ ವಿವೇಕಾನಂದರು ತತ್ವಶಾಸ್ತ್ರ, ಧರ್ಮ, ಸಾಹಿತ್ಯ, ವೇದಗಳು, ಪುರಾಣಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು. ವಿವೇಕಾನಂದರ ಮರಣದ ನಂತರ 1984 ರಲ್ಲಿ ಭಾರತ ಸರ್ಕಾರವು ಅವರನ್ನು ಗೌರವಿಸಲು ಮತ್ತು ಅವನ ಬೋಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಅವರ ಜನ್ಮದಿನವಾದ ಜನವರಿ 12 ಅನ್ನು ರಾಷ್ಟ್ರೀಯ ಯುವ ದಿನವೆಂದು ಘೋಷಿಸಿತು. 1985 ರಿಂದ ಭಾರತದಲ್ಲಿ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ.
ರಾಷ್ಟ್ರೀಯ ಯುವ ದಿನದ ಮಹತ್ವ :
ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಯುವಜನರಲ್ಲಿ ಬಿತ್ತುವ ಮಹತ್ತರವಾದ ಮಹತ್ವವನ್ನು ರಾಷ್ಟ್ರೀಯ ಯುವ ದಿನವು ಹೊಂದಿದೆ. ವಿವೇಕಾನಂದರ ಜೀವನ ಮತ್ತು ಬೋಧನೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡುವ ಉತ್ತಮ ಮೂಲವಾಗಿವೆ. ಜಗತ್ತನ್ನು ಗೆಲ್ಲುವ ಅತ್ಯುತ್ತಮ ಅಸ್ತ್ರ ಶಾಂತಿ ಮತ್ತು ಶಿಕ್ಷಣ ಎಂದು ಅವರು ನಂಬಿದ್ದರು. ಹಾಗಾಗಿ ಅವರು ವಿದ್ಯಾರ್ಥಿಗಳಿಗೆ ಆರಾಮಾಗಿರುವುದರಿಂದ ಹೊರಬಂದು ಬಯಸಿದ್ದನ್ನು ಸಾಧಿಸಬೇಕೆಂದು ಅವರು ಬಯಸಿದ್ದರು.
ಈ ದಿನವು ಯುವಜನರಿಗೆ ವಿವೇಕಾನಂದರ ಬೋಧನೆಗಳ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ. ಅವರ ವಿಚಾರಗಳು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಅವರ ದೃಷ್ಟಿಕೋನವನ್ನು ಗೌರವಿಸುವ ಸಲುವಾಗಿ ಮತ್ತು ಅದರಂತೆ ಕಾರ್ಯನಿರ್ವಹಿಸಲು ಯುವಕರನ್ನು ಪ್ರೇರೇಪಿಸುವ ಸಲುವಾಗಿ ರಾಷ್ಟ್ರೀಯ ಯುವ ದಿನವು ಬಹಳ ಮಹತ್ವದ್ದಾಗಿದೆ. ರಾಷ್ಟ್ರೀಯ ಯುವ ದಿನ ಅಥವಾ ಸ್ವಾಮಿ ವಿವೇಕಾನಂದ ಜಯಂತಿಯನ್ನು ವಿದ್ಯಾರ್ಥಿಗಳಿಗೆ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಆಚರಿಸಲಾಗುತ್ತದೆ.
ರಾಷ್ಟ್ರೀಯ ಯುವ ದಿನ 2022 ಥೀಮ್ ಏನು ? :
'ಇಟ್ಸ್ ಆಲ್ ಇನ್ ದಿ ಮೈಂಡ್' ಎಂಬುದು ರಾಷ್ಟ್ರೀಯ ಯುವ ದಿನ 2022 ರ ವಿಷಯವಾಗಿದೆ. ರಾಷ್ಟ್ರೀಯ ಯುವ ದಿನದಂದು ಭಾರತ ಸರ್ಕಾರವು ಪ್ರತಿ ವರ್ಷ ಹೊಚ್ಚ ಹೊಸ ಥೀಮ್ ಅನ್ನು ಆಯ್ಕೆ ಮಾಡುತ್ತದೆ. ರಾಷ್ಟ್ರದ ಪ್ರಸ್ತುತ ಮತ್ತು ಸಂಬಂಧಿತ ಸನ್ನಿವೇಶವನ್ನು ಆಧರಿಸಿ ಥೀಮ್ ಅನ್ನು ಆಯ್ಕೆ ಮಾಡಲಾಗಿದೆ. ಯುವ ದಿವಸ್ ಅನ್ನು ಒಂದು ವಿಭಿನ್ನ ಥೀಮ್ ನೊಂದಿಗೆ ಆಚರಣೆ ಮಾಡುವುದು ಹೆಚ್ಚು ಮಹತ್ವದ್ದಾಗಿದೆ. ಇದು ರಾಷ್ಟ್ರದ ಯುವಜನತೆಯ ಏಕೀಕರಣಕ್ಕೆ ಕೊಡುಗೆ ನೀಡುತ್ತದೆ.
2022ರ ರಾಷ್ಟ್ರೀಯ ಯುವ ದಿನವನ್ನು ಆಚರಿಸುವುದು ಹೇಗೆ ?
ಪ್ರತಿ ವರ್ಷ ಶಾಲೆ ಮತ್ತು ಕಾಲೇಜುಗಳಲ್ಲಿ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಅವರ ಅಧ್ಯಯನಗಳನ್ನು ಮತ್ತು ವಿಚಾರಗಳನ್ನು ಯುವಕರಲ್ಲಿ ಬಿತ್ತಲು ಸಮಾವೇಶ ಅಥವಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಶಿಬಿರಗಳು,ಯುವ ಸಮಾವೇಶಗಳು ಹಾಗೂ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಯುವಕರೂ ಕೂಡ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಆದರೆ ಈ ವರ್ಷ ಕೋವಿಡ್ ಸಾಂಕ್ರಾಮಿಕದಿಂದಾಗಿ ಆಚರಣೆಯನ್ನು ಸರಳ ಮತ್ತು ಸುಂದರವಾಗಿ ಹಮ್ಮಿಕೊಳ್ಳಬಹುದು.