ಕೊರೋನಾ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಏಪ್ರಿಲ್ ೧೪ರ ಬಳಿಕ ಪ್ರಕಟ ಮಾಡಲಾಗವುದು. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಈ ಸಮಯದಲ್ಲಿ ಹೆಚ್ಚು ಅಧ್ಯಯನ ನಡೆಸುತ್ತಿದ್ದು ಅವರ ಬಗ್ಗೆ ಪೋಷಕರು ಅಷ್ಟೇ ಕಾಳಜಿ ವಹಿಸುವುದು ಮುಖ್ಯವಾದದ್ದು.
ಮಕ್ಕಳ ಭವಿಷ್ಯ ರೂಪಿಸುವ ಪರೀಕ್ಷೆಗಳಲ್ಲಿ ಮಕ್ಕಳ ಪಾತ್ರದಷ್ಟೇ ಅವರ ಶಿಕ್ಷಕ ಮತ್ತು ಪೋಷಕರ ಪಾತ್ರವಿರುತ್ತದೆ. ಹಾಗಾಗಿ ಮಕ್ಕಳು ಓದಿನಲ್ಲಿ ತೊಡಗಿಸುಕೊಳ್ಳುವಂತೆ, ಅವರ ಗಮನ ಬೇರೆಡೆ ಹೋಗದಂತೆ ಪೂರಕವಾದ ವಾತಾವರಣ ನಿರ್ಮಿಸಬೇಕಾದ್ದು ಪೋಷಕರ ಕರ್ತವ್ಯ.
ಕೆಲವೊಮ್ಮೆ ಪೋಷಕರು ತಮ್ಮ ಮಕ್ಕಳು ಹೆಚ್ಚು ಅಂಕಗಳಿಸಲಿ ಎನ್ನುವ ಉದ್ದೇಶದಿಂದ ಹೆಚ್ಚು ಒತ್ತಡ ಹೇರುತ್ತಾರೆ. ಇದು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಯಾವ ರೀತಿ ಓದಬೇಕು, ಒತ್ತಡ ನಿವಾರಣೆ ಹೇಗೆ ಮಾಡಿಕೊಳ್ಳಬೇಕು ಎನ್ನುವುದನ್ನು ಪೋಷಕರು ತಿಳಿಸಿ ಹೇಳಬೇಕು.
ಪೋಷಕರಿಗೆ ಕೆಲವು ಸಲಹೆಗಳು:
ಮೊದಲಿಗೆ ಮಕ್ಕಳು ಓದಲು ಪೂರಕವಾದ ವಾತಾವರಣವನ್ನು ಕಲ್ಪಿಸಬೇಕು. ಅವರೊಂದಿಗೆ ಸ್ನೇಹದಿಂದ ವರ್ತಿಸಿ ಅವರಲ್ಲಿ ಓದಲು ಆಸಕ್ತಿ ಬರುವಂತೆ ನೋಡಿಕೊಳ್ಳಬೇಕು.
ಮಕ್ಕಳಿಗಾಗಿ ಓದಲು ಒಂದು ವೇಳಾಪಟ್ಟಿಯನ್ನು ಪೋಷಕರೇ ಸಿದ್ಧಪಡಿಸಿದರೆ ಉತ್ತಮ. ಎಷ್ಟು ಗಂಟೆ ಅಭ್ಯಾಸ ಮಾಡಬೇಕು, ಅನ್ನುವುದನ್ನು ಅವರಿಗೆ ಮನದಟ್ಟು ಮಾಡಿಸಿ, ಇದರಿಂದ ಒತ್ತಡ ರಹಿತ ಅಧ್ಯಯನ ಮಾಡಲು ಸುಲಭವಾಗುತ್ತದೆ.
ಓದಿನ ಸಮಯದಲ್ಲಿ ಅವರ ಮನಸ್ಸಿಗೆ ನೋವಾಗುವ ಯಾವ ವಿಚಾರವನ್ನು ಮಾತನಾಡಬೇಡಿ, ಓದಿನಲ್ಲಿ ಆಸಕ್ತಿ ತೋರಿಸದಿದ್ದಲ್ಲಿ ಬಯ್ಯಬೇಡಿ ಮತ್ತು ದೈಹಿಕವಾಗಿ ದಂಡಿಸಬೇಡಿ.
ಉತ್ತಮ ಅಂಕ ಗಳಿಸದೆ ಆಗುವ ಅನುಕೂಲ, ಕಡಿಮೆ ಅಂಕ ಗಳಿಸಿದರೆ ಆಗುವ ಅನಾನುಕೂಲದ ಬಗ್ಗೆ ಮಕ್ಕಳಿಗೆ ವಿವರಿಸಿ. ಅವರನ್ನು ಯಾರೊಂದಿಗೂ ಹೋಲಿಸಬೇಡಿ. ಮಕ್ಕಳನ್ನು ಅವರ ಕನಸಿನ ದಾರಿಯಲ್ಲಿ ಸಾಗಲು ಪ್ರೋತ್ಸಾಹಿಸಿ.
ಇನ್ನು ಮಗುವು ಮನೆಯಲ್ಲಿ ಯಾವ ರೀತಿ ಇರುತ್ತದೆ ಎನ್ನುವುದನ್ನು ತಿಳಿದ ಮೇಲೆ ಅವರ ಶಾಲೆಯ ಬಗ್ಗೆಯೂ ಗಮನ ನೀಡಿ. ಶಾಲೆಯಲ್ಲಿ ಶಿಕ್ಷಕರ ಸಂಪರ್ಕವನ್ನಿಟ್ಟುಕೊಂಡು, ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರಯತ್ನಿಸಿ.