ಸದ್ಯದ ಮಾರುಕಟ್ಟೆಯ ಸ್ಥಿತಿಗತಿಯಲ್ಲಿ ಯಾರನ್ನು, ಯಾವಾಗ, ಯಾಕಾಗಿ ಕೆಲಸದಿಂದ ವಜಾಗೊಳಿಸಿಬಿಡ್ತಾರೆ ಹೇಳಲು ಸಾಧ್ಯವಿಲ್ಲ. ಎಸ್ ಇದು ನಿಜಕ್ಕೂ ಭಯ ಹುಟ್ಟಿಸುತ್ತೆ. ಪ್ರತಿಯೊಂದು ಕಂಪೆನಿಯ ತನಗಿಷ್ಟ ಬಂದಂತೆ ಕೆಲಸಗಾರರನ್ನು ಬಳಸಿಕೊಂಡು ಬೇಡವೆನಿಸಿದಾಗ ಕಸದಬುಟ್ಟಿಗೆ ಕಸ ಎಸೆಯುವಂತೆ ಕೆಲಸದಿಂದ ವಜಾಗೊಳಿಸಿಬಿಡುತ್ತಾರೆ. ಕೆಲಸ ಕಳೆದುಕೊಳ್ಳುವುದು, ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬದವರನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಇದೊಂದು ರೀತಿಯ ಮಾನಸಿಕ ಹೊಡೆತ.
ಹಾಗಾಗಿ ಇಂತಹ ಸಂದರ್ಬವನ್ನು ತಟ್ ಅಂತ ಎದುರಿಸುವುದು ಒತ್ತಡದಾಯಕವಾಗಿರುತ್ತೆ ಮತ್ತು ಕಷ್ಟಕರವಾಗಿರುತ್ತೆ. ಹಾಗಾಗಿ ಒಂದಷ್ಟು ಸಲಹೆ ಸೂಚನೆಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಇದು ಒಂದು ರೀತಿ ನೀವು ಮತ್ತೆ ಕೆಲಸಕ್ಕೆ ಸೇರಲು ಅಥ್ವಾ ನಿಮ್ಮನ್ನ ನೀವು ಶಾಕ್ ನಿಂದ ಸುಧಾರಿಸಿಕೊಳ್ಳಲು ಇರುವ ಸರಳ ಮತ್ತು ಸುಲಭ ಉಪಾಯಗಳೆಂದೇ ಹೇಳಬಹುದು.
ನಿಮಗೆ ನೀವು ಸ್ವಲ್ಪ ಸಮಯ ನೀಡಿ.
ಕೂಡಲೇ ಮತ್ತೊಂದು ಕೆಲಸಕ್ಕೆ ಹಾರುವ ಬದಲು ನಿಮಗೆ ನೀವು ಸ್ವಲ್ಪ ಸಮಯ ನೀಡಿ.ಮೊದಲು ಹೇಗಾಯ್ತು ಮತ್ತು ಯಾಕಾಯ್ತು ಅನ್ನುವುದರ ಬಗ್ಗೆ ಯೋಚಿಸಿ. ಮತ್ತು ಆಗಿರುವುದರ ಬಗ್ಗೆ ನಿಮ್ಮ ಭಾವನೆಗಳೇನಿದೆ ಅನ್ನುವುದನ್ನು ನಿಧಾನವಾಗಿ ಆಲೋಚಿಸಿ ನೋಡಿ. ನಿಮ್ಮ ಮನಸ್ಸಿಗೆ ಆಗಿರುವ ಆಘಾತವನ್ನು ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ನೀಡಿ.ಮೊದಲು ನಿಮ್ಮ ಮನಸ್ಸಿನಿಂದ ಕೆಲಸ ಕಳೆದುಕೊಂಡು ಆಗಿರುವ ನೋವನ್ನು ಮರೆತುಬಿಡಲು ಪ್ರಯತ್ನಿಸಿ.
ಯಾವುದು ತಪ್ಪಾಗಿದೆ ಅನ್ನುವುದನ್ನು ವಿಮರ್ಶಿಸಿ
ನಿಮ್ಮನ್ನ ನೀವು ಪ್ರಶ್ನಿಸಿಕೊಳ್ಳಿ. ಯಾವ ವಿಚಾರ ತಪ್ಪಾಗಿದೆ ಅನ್ನುವುದನ್ನು ವಿಮರ್ಶೆ ಮಾಡಿ ನೋಡಿ. ವಜಾಗೊಳಿಸಿರುವುದು ಕಂಪೆನಿಯ ಸಮಸ್ಯೆಗಳಿಂದಾಗಿಯಾ, ಕಂಪೆನಿಯ ನಿರ್ವಹಣೆಯಲ್ಲಿ ಆಗಿರುವ ಬದಲಾವಣೆಗಳಿಂದಾಗಿಯಾ ಇಲ್ಲವೇ ಬೇರೆ ಇನ್ನಿತರ ಸಮಸ್ಯೆಗಳಿಂದಾಗಿಯಾ ಅನ್ನುವುದು ಗಮನಿಸಿ. ಇದ್ಯಾವುದೂ ಆಗಿರದೇ ನಿಮ್ಮದೇ ಆದ ಸಮಸ್ಯೆಗಳಿಂದಾಗಿ ಕಂಪೆನಿ ನಿಮ್ಮನ್ನ ದೂರಗೊಳಿಸಿದ್ಯಾ.. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಲ್ಲಿ ನೀವು ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಶಕ್ತರಾಗುತ್ತೀರಿ.
ಧನಾತ್ಮಕ ಚಿಂತನೆಯಡೆ ನಿಮ್ಮ ಮುಖವಿರಲಿ
ಇದು ನಿಮ್ಮ ಜೀವನದ ಅಂತ್ಯವಲ್ಲ ಆರಂಭವೆಂದು ತಿಳಿಯಿರಿ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಭಾವಿಸಿ ಧನಾತ್ಮಕ ಚಿಂತನೆಗಳನ್ನು ಮಾಡಿ. ಶ್ರಮವಿಲ್ಲದೆ ನಿರ್ವಹಿಸುತ್ತಿದ್ದ ನಿಮ್ಮ ಇಷ್ಟದ ಕೆಲಸ ಕಳೆದುಕೊಂಡಾಗ ಬೇಸರವಾಗುವುದು ಸಹಜ. ಆದ್ರೆ ನೀವೀಗ ನಿಮ್ಮ ಕಂಫರ್ಟ್ ಝೋನ್ ನಿಂದ ಸ್ವಲ್ಪ ಆಚೆ ಬಂದು ಯೋಚಿಸಬೇಕಿದೆ. ವಜಾಗೊಂಡಿರುವುದು ನಿಮ್ಮ ಜೀವನದ ಹೊಸ ಅಧ್ಯಾಯದ ಆರಂಭಕ್ಕಾಗಿ ಅಂತ ಚಿಂತಿಸಿ ಮುನ್ನಡೆಯಬೇಕಿದೆ. ಇದು ನಿಮ್ಮ ಇತರೆ ಹವ್ಯಾಸ ಮತ್ತು ಬದುಕಿಗೆ ಹೊಸ ಅರ್ಥ ನೀಡಲು ಸಿಕ್ಕಿರುವ ಸದವಕಾಶ ಎಂದು ಭಾವಿಸಿ
ನಿಮ್ಮ ಹಣಕಾಸು ಪರಿಸ್ಥಿತಿಯನ್ನು ನಿಭಾಯಿಸಿಕೊಳ್ಳಿ
ಕೆಲಸ ಕಳೆದುಕೊಂಡ ಸಂದರ್ಬದಲ್ಲಿ ಮುಖ್ಯವಾಗಿ ಎದುರಿಸುವ ದೊಡ್ಡ ಸಮಸ್ಯೆ ಇದು. ದುಂದುವೆಚ್ಚ ಮಾಡುತ್ತಿದ್ದು ಆರಾಮಾಗಿ ಬದುಕುತ್ತಿದ್ದವರು ನೀವಾಗಿದ್ದರೆ ನಿಮ್ಮ ಖರ್ಚಿನ ಲೆಕ್ಕಾಚಾರದಲ್ಲಿ ಯಾವುದನ್ನು ಖರ್ಚು ಮಾಡದೇ ಉಳಿಸಬಹುದು ಅನ್ನುವುದನ್ನು ನೀವು ಆಲೋಚಿಸಬೇಕಿದೆ. ಹಣಕಾಸು ವ್ಯವಹಾರ ವ್ಯತ್ಯಯವಾಗಿ ಖರ್ಚಿಗೆ ಕಾಸಿಲ್ಲದೆ ಹೋದಲ್ಲಿ ಮತ್ತಷ್ಟು ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳು ಜಾಸ್ತಿ. ಹಾಗಾಗಿ ನಿಮ್ಮ ಹಣಕಾಸು ಪರಿಸ್ಥಿತಿಯನ್ನು ನೀವು ಮಾತ್ರವಲ್ಲದೆ ನಿಮ್ಮ ಮನೆಯವರು ಕೂಡ ಬೆಂಬಲಿಸಿ ನಡೆಯುವಂತೆ ನೋಡಿಕೊಳ್ಳಿ.
ನಿಮಗೆ ಸಹಕಾರ ನೀಡುವವರೊಂದಿಗೆ ಚರ್ಚಿಸಿ
ಇಲ್ಲಿ ಮುಜುಗರಕ್ಕೆ ಒಳಗಾಗುವ ಪ್ರಶ್ನೆಯೇ ಇಲ್ಲ. ಕಾರ್ಯವಾಸಿ ಕತ್ತೆಕಾಲಾದ್ರೂ ಹಿಡಿ ಅಂತ ಹಿಂದಿನವರು ಗಾದೆಯನ್ನೇ ಮಾಡಿದ್ದಾರೆ. ನಿಮಗೆ ಸಹಾಯ ಹಸ್ತ ಚಾಚುವವರು ಯಾರಿದ್ದಾರೆ ಅಂತ ಯೋಚಿಸಿ ಅವರೊಡನೆ ನಿಮಗೆ ಸಹಕಾರ ಸಿಗಬಹುದೇ ಎಂದು ಚರ್ಚಿಸಿ. ಒತ್ತಡ ನಿರ್ವಹಣೆಗೆ ನಿಮ್ಮ ಕುಟುಂಬ, ಸ್ನೇಹಿತರು ಇಲ್ಲವೇ ನಿಮ್ಮ ಸಹದ್ಯೋಗಿಗಳು ಯಾರಾದರೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರಾದರೆ ಅವರ ಸಹಾಯ ಪಡೆದುಕೊಳ್ಳಿ. ಆದರೆ ಆ ಸಹಾಯದ ಋಣ ತೀರಿಸುವ
ಹೊಣೆ ನಿಮ್ಮದು
ನಿಮ್ಮ ಉತ್ತರಗಳನ್ನು ಸಿದ್ಧಪಡಿಸಿಕೊಳ್ಳಿ
ಕಠಿಣ ಸವಾಲಿಗೆ ಉತ್ತರ ಸಿದ್ಧಪಡಿಸಿಕೊಳ್ಳಿ. ನೀವು ಕೆಲಸ ಕಳೆದುಕೊಂಡಿರುವದಕ್ಕೆ ಕಾರಣ ಏನು .. ಅದು ನಿಮ್ಮ ಕಂಪೆನಿಯ ಸಮಸ್ಯೆಯಾ ಇಲ್ಲ ನಿಮ್ಮ ಸಮಸ್ಯೆಯಾ .. ನಿಮ್ಮ ಸಮಸ್ಯೆಯಾಗಿದ್ದರೆ ಯಾಕಾಗಿ ನೀವು ಕೆಲಸ ಕಳೆದುಕೊಂಡಿದ್ದೀರಿ ಅನ್ನುವ ಪ್ರಶ್ನೆಗೆ ಸಮರ್ಪಕ ಉತ್ತರ ನಿಮ್ಮಲ್ಲಿರಲಿ
ಸಾಮಾಜಿಕ ತಾಣಗಳಲ್ಲಿ ಮತ್ತು ಜಾಬ್ ಪೋರ್ಟಲ್ ಗಳಲ್ಲಿ ನಿಮ್ಮನ್ನ ನೀವು ಹೆಚ್ಚಾಗಿ ತೊಡಗಿಸಿಕೊಳ್ಳಿ
ಇದು ನೀವು ಹೆಚ್ಚು ಆಕ್ಟೀವ್ ಆಗಿ ಇರಬೇಕಾಗಿರುವ ಕ್ಷಣಗಳು. ಮತ್ತೆ ಹೊಸ ಕೆಲಸದ ಹುಡುಕಾಟದಲ್ಲಿ ತೊಡಗಿಕೊಳ್ಳಬೇಕು. ಇಲ್ಲವೇ ಕಳೆದುಕೊಂಡಿರುವ ಕೆಲಸವನ್ನ ಮತ್ತೆ ಪಡೆಯುವ ಸಾಧ್ಯತೆಗಳಿದಲ್ಲಿ ಅದನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕು. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ. ಜಾಬ್ ಪೋರ್ಟಲ್ ಗಳನ್ನು ಸ್ವಲ್ಪ ತಡಕಾಡಿ
ನಿಮ್ಮ ಬಗ್ಗೆ ನೀವು ಕಾಳಜಿ ತೆಗೆದುಕೊಳ್ಳಿ
ಬಹುಮುಖ್ಯವಾಗಿ ನಿಮ್ಮ ಬಗ್ಗೆ ನೀವು ಕಾಳಜಿ ತೆಗೆದುಕೊಳ್ಳಿ. ಬೇಸರದಲ್ಲಿ ಉಪವಾಸವಿರಬೇಡಿ, ಉತ್ತಮ ಆಹಾರ, ವ್ಯಾಯಾಮ ಮಾಡುವುದನ್ನು ಮರೆಯಬೇಡಿ. 6 ರಿಂದ 8 ಗಂಟೆಯ ನಿದ್ದೆ ಬೇಕೇಬೇಕು.
ನಿಮ್ಮ ತಾಕತ್ತನ್ನು ನೀವು ಮೊದಲು ಗುರುತಿಸಿಕೊಳ್ಳಿ
ಸಮಸ್ಯೆ ಅದಕ್ಕೊಂದು ದಿಟ್ಟ ಪರಿಹಾರ, ನಾಜೂಕಾದ ಕೆಲಸ ನಿರ್ವಹಣೆ, ನಿಮ್ಮ ಯೋಚನಾಲಹರಿ ಇವೆಲ್ಲವೂಗಳಿಂದ ನಿಮ್ಮ ತಾಕತ್ತನ್ನ ಇನ್ನೂ ಹೆಚ್ಚಿಸಿಕೊಳ್ಳಿ. ಹೊಸ ಕೆಲಸಕ್ಕೆ ಅಥ್ವಾ ನಿಮ್ಮ ದೈನಂದಿನ ಚಟುವಟಿಕೆಗಳಲ್ಲಾಗುವ ಬದಲಾವಣೆಗಳಿಗೆ ನಿಮ್ಮನ್ನ ನೀವು ಹೊಂದಿಸಿಕೊಂಡು ಒತ್ತಡಮುಕ್ತರಾಗಿರಿ ಮತ್ತು ನಿಮ್ಮನ್ನ ನೀವು ಹೆಚ್ಚು ಬಲಾಢ್ಯರೆಂದು ಭಾವಿಸಿ
ಬೇರೆ ಕೆಲಸ ಹುಡುಕಲು ಪ್ರಯತ್ನಿಸಿ
ಇದಲ್ಲದೇ ಇದ್ದರೆ ಮತ್ತೊಂದು, ಮತ್ತೊಂದಲ್ಲದೇ ಇದ್ದರೆ ಇನ್ನೊಂದು ಅನ್ನುವ ಮನಸ್ಥಿತಿ ಖಂಡಿತವಾಗಿಯೂ ಈಗ ಇರಲೇಬೇಕು. ಕೆಲಸ ಮಾಡುವವರಿಗೆ ಈ ಪ್ರಪಂಚದಲ್ಲಿ ಕೆಲಸಕ್ಕೆ ಕೊರತೆಯಿಲ್ಲ. ಒಂದು ದಿನ ಹೆಚ್ಚು ಕಡಿಮೆ ಖಂಡಿತವಾಗಿಯೂ ಮತ್ತೊಂದು ಕೆಲಸ ನಿಮಗೆ ಸಿಕ್ಕೇ ಸಿಗುತ್ತೆ. ಹಾಗಾಗಿ ಈಗ ವಜಾಗೊಂಡಿದ್ದರೇನಂತೆ ಇನ್ನೊಂದು ಕೆಲಸ ಹುಡುಕಲು ರೆಡಿಯಾಗಿ
ಆದಷ್ಟು ಚುರುಕಾಗಿರಿ
ನಿಮ್ಮ ಚುರುಕುತನವೇ ನಿಮ್ಮ ಶಕ್ತಿಯಾಗಿರಬೇಕು.ಇದು ಕಾಂಪಿಟೇಟಿವ್ ಜಗತ್ತು. ನಿಮ್ಮ ಬಗ್ಗೆ ಯಾರದ್ದಾದ್ರೂ ಕಣ್ಣು ಬೀಳಬೇಕು ಅಂದ್ರೆ ನೀವು ಹೆಚ್ಚು ಕ್ರಿಯಾಶೀಲರಾಗಿರಬೇಕು. ಕೆಲಸ ಕಳೆದುಕೊಂಡಿರುವುದಕ್ಕೆ ಸಪ್ಪೆಮೋರೆ ಹಾಕಿಕೊಂಡ್ರೆ ಏನನ್ನೂ ಸಾಧಿಸಲಾರಿರಿ. ಹಾಗಾಗಿ ಆದಷ್ಟು ಆಕ್ಟೀವ್ ಆಗಿರಿ.
9 ಟು 5 ಕೆಲಸದ ಆಚೆಗೂ ಒಮ್ಮೆ ಯೋಚಿಸಿ
ಸಮಯ ನಿಮ್ಮನ್ನ ಆಟ ಆಡಿಸುತ್ತಿದೆ. ಆದ್ರೆ ಸಮಯಕ್ಕೆ ನೀವು ಅಂಟಿಕೊಂಡಿರಬಾರದು. ಸಮಯ ನಿಲ್ಲುವುದಿಲ್ಲ. ಅದು ಮುಂದೆ ಸಾಗುತ್ತಲೇ ಇರುತ್ತದೆ. ಆದ್ರೆ ಇಂತಿಷ್ಟೇ ಸಮಯದ ಕೆಲಸಕ್ಕೆ ನಾನು ಹೋಗುವುದು ಎಂದು ನಿಮಗೆ ನೀವೇ ಒಂದು ಬೌಂಡರಿ ಹಾಕಿಕೊಳ್ಳಬೇಡಿ. ಪಾರ್ಟ್ ಟೈಮ್ ಜಾಬ್ ಗಳ ಬಗ್ಗೆಯೂ ಸ್ವಲ್ಪ ಯೋಚಿಸಿ, ಹಣ ಸಂಪಾದನೆಗೆ ನ್ಯಾಯಯುತವಾಗಿರುವ ಯಾವ ಮಾರ್ಗವಾದರೇನಂತೆ ಅನ್ನುವ ಯೋಚನೆ ಇರಲಿ. ಕೇವಲ 9 ರಿಂದ 5 ಗಂಟೆಯ ಕೆಲಸವೇ ಬೇಕು ಅಂತ ಪಟ್ಟು ಹಿಡಿದು ಕೂತರೆ ಈಗಿನ ದುನಿಯಾದಲ್ಲಿ ಕೆಲಸ ಸಿಗೋದು ಕಷ್ಟವಾಗಬಹುದು. ಎಲ್ಲಾ ಕೆಲಸಕ್ಕೂ ನಾನು ಜೈ ಅನ್ನುವ ಮನಸ್ಥಿತಿ ಇರಬೇಕು.