ವಿದ್ಯಾರ್ಥಿಗಳು ಕಾಲೇಜು, ಕೋರ್ಸ್ ಹಾಗೂ ಪ್ರವರ್ಗವಾರು ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದಾಖಲಾತಿ ಪರಿಶೀಲನೆ ನಂತರ ಅರ್ಹ ವಿದ್ಯಾರ್ಥಿಗಳು ಮಾತ್ರ ಆಯ್ಕೆ/ ಇಚ್ಛೆ ದಾಖಲಿಸಲು ಅವಕಾಶವಿರುತ್ತದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವೃತ್ತಿಶಿಕ್ಷಣ ಕೋರ್ಸುಗಳ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇಂದಿನಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು, ಜೂನ್ 21 ರವರೆಗೂ ರಾಜ್ಯದ 16 ಸಹಾಯಕ ಕೇಂದ್ರಗಳಲ್ಲಿ ನಡೆಯಲಿದೆ.
ಅಭ್ಯರ್ಥಿಗಳು ಕಡ್ಡಾಯವಾಗಿ ಮೂಲ ದಾಖಲೆ ಹಾಗೂ ಗೆಜೆಟೆಡ್ ಅಧಿಕಾರಿ ದೃಢೀಕರಿಸಿರುವ ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ವೇಳಾಪಟ್ಟಿ ಪ್ರಕಾರ ಹಾಜರಾಗುವಂತೆ ಕೋರಲಾಗಿದೆ. [ಇಂದಿನಿಂದ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ]
ಬೇಕಾಗಿರುವ ದಾಖಲೆಗಳು
ಸಾಮಾನ್ಯ ಪ್ರವೇಶ ಪರೀಕ್ಷೆ-2017ಕ್ಕೆ ಭರ್ತಿ ಮಾಡಿ ಸಲ್ಲಿಸಿರುವ ಅರ್ಜಿಯ ಪ್ರತಿ. ಶುಲ್ಕ ಪಾವತಿಸಿರುವ ಚಲನ್ನ ಮೂಲ ಪ್ರತಿ. ಸಿಇಟಿ ಪ್ರವೇಶ ಪತ್ರ. ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿ. ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಂದ ಸಹಿ ಮಾಡಿದ ವ್ಯಾಸಂಗ ಪ್ರಮಾಣ ಪತ್ರ. ಪಾಸ್ಪೋರ್ಟ್ ಅಳತೆಯ ಎರಡು ಭಾವಚಿತ್ರ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಕಾಲೇಜು, ಧಾರವಾಡ
ಗಿರಿಜಾಬಾಯಿ ಎಸ್ಎಐಎಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾರವಾರ
ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು, ಮಂಗಳೂರು
ಜವಾಹರಲಾಲ್ ನೆಹರೂ ನ್ಯಾಷನಲ್ ಎಂಜಿನಿಯರಿಂಗ್ ಕಾಲೇಜು, ಶಿವಮೊಗ್ಗ
ಸರಕಾರಿ ಎಂಜಿನಿಯರಿಂಗ್ ಕಾಲೇಜು- ಹಾಸನ.
ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು, ಮೈಸೂರು.
ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತುಮಕೂರು.
ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜು-ಬೀದರ್.
ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ವೈದ್ಯ ಕಾಲೇಜು- ಕೊಪ್ಪಳ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ- ಬೆಂಗಳೂರು.
ಆಪ್ಷನ್ ಎಂಟ್ರಿಗೆ ಅವಕಾಶ
ರಾಜ್ಯ ಸರಕಾರದಿಂದ ಸೀಟ್ ಮ್ಯಾಟ್ರಿಕ್ಸ್ ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕೋರ್ಸ್ಗಳಿಗೆ ಆನ್ಲೈನ್ ಮೂಲಕ ಆಯ್ಕೆ/ ಇಚ್ಛೆ (ಆಪ್ಷನ್ ಎಂಟ್ರಿ) ದಾಖಲಿಸಲು ಅವಕಾಶ ಇದೆ.
ವಿದ್ಯಾರ್ಥಿಗಳು ಕಾಲೇಜು, ಕೋರ್ಸ್ ಹಾಗೂ ಪ್ರವರ್ಗವಾರು ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದಾಖಲಾತಿ ಪರಿಶೀಲನೆ ನಂತರ ಅರ್ಹ ವಿದ್ಯಾರ್ಥಿಗಳು ಮಾತ್ರ ಆಯ್ಕೆ/ ಇಚ್ಛೆ ದಾಖಲಿಸಲು ಅವಕಾಶವಿರುತ್ತದೆ.
ಕೌನ್ಸೆಲಿಂಗ್ ಪ್ರಕ್ರಿಯೆ ವೇಳಾಪಟ್ಟಿ
ಜೂನ್ 14: ಸೀಟ್ ಮ್ಯಾಟ್ರಿಕ್ಸ್ ಹಾಗೂ ಶುಲ್ಕ ಪ್ರಕಟ ಜೂನ್ 15ರ ಬೆಳಗ್ಗೆ 11ರಿಂದ 23 ಬೆಳಗ್ಗೆ 11: ಆಯ್ಕೆ ದಾಖಲಿಸಲು ಅವಕಾಶ ಜೂನ್ 24ರ ಸಂಜೆ: ಅಣಕು ಸೀಟು ಹಂಚಿಕೆ ಜೂನ್ 24ರ ರಾತ್ರಿ 8ರಿಂದ 26ರ ಬೆಳಗ್ಗೆ 11: ಸೀಟು ಆಯ್ಕೆ ತಿದ್ದುಪಡಿಗೆ ಅವಕಾಶ. ಜೂನ್ 27ರ ಸಂಜೆ 4: ಅಧಿಕೃತ ಸೀಟು ಹಂಚಿಕೆ ಜೂನ್ 28ರಿಂದ 30: ಆಯ್ಕೆ ದೃಢೀಕರಿಸುವುದು, ಶುಲ್ಕ ಪಾವತಿಸುವುದು, ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವುದು, ಕಾಲೇಜಿನಲ್ಲಿ ಪ್ರವೇಶ ಪಡೆಯುವುದು.
ಅಣಕು ಸೀಟು ಹಂಚಿಕೆ
ಆಯ್ಕೆ ದಾಖಲಿಸುವ ಅವಕಾಶ ಮುಗಿದ ನಂತರ ಅಣಕು ಸೀಟು ಹಂಚಿಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಯಾವ ಸೀಟು ದೊರೆಯುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ಈ ಸಂದರ್ಭದಲ್ಲಿ ಕಾಲೇಜು ಮತ್ತು ಕೋರ್ಸ್ ಬದಲಾಯಿಸಿಕೊಳ್ಳಲೂ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ.
ಮೊದಲ ಸುತ್ತಿನ ಸೀಟು ಹಂಚಿಕೆ
ಸರ್ಕಾರ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದ ಬಳಿಕ ಅಭ್ಯರ್ಥಿಗಳ ಮೆರಿಟ್ ಮತ್ತು ಆಪ್ಷನ್ ಎಂಟ್ರಿ ಆಧರಿಸಿ ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಾಗುತ್ತದೆ. ಸೀಟು ಹಂಚಿಕೆ ಮಾಡಿದ ನಂತರ, ತನಗೆ ಲಭ್ಯವಾದ ಸೀಟು ಬಗ್ಗೆ ವಿದ್ಯಾರ್ಥಿಗೆ 'ಚಾಯ್ಸ್' ನೀಡುವ ಅವಕಾಶ ಇರುತ್ತದೆ. ಚಾಯ್ಸ್-1: ವಿದ್ಯಾರ್ಥಿಯು ತನಗೆ ದೊರಕಿದ ಸೀಟು ತೃಪ್ತಿಕರವಾಗಿದೆ ಎಂದಾದರೆ ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಗದಿತ ಬ್ಯಾಂಕ್ನಲ್ಲಿ ಶುಲ್ಕ ಪಾವತಿಸಿ, ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು. ಚಾಯ್ಸ್-2: ಸಿಕ್ಕಿದ ಸೀಟು ತೃಪ್ತಿಕರವಾಗಿದ್ದರೂ ಇನ್ನೂ ಉತ್ತಮ ಸೀಟಿನ ನಿರೀಕ್ಷೆ ಇದ್ದರೆ ಮುಂದಿನ ಸುತ್ತಿನಲ್ಲಿ ಭಾಗವಹಿಸುತ್ತೇನೆ ಎಂದು ಈ ಆಯ್ಕೆ ಮಾಡಿಕೊಳ್ಳಬಹುದು. ಚಾಯ್ಸ್-3: ದೊರಕಿದ ಸೀಟು ತೃಪ್ತಿಕರವಾಗಿಲ ಎಂದಾದರೆ ಮುಂದಿನ ಸುತ್ತಿನಲ್ಲಿ ಭಾಗವಹಿಸಲು ಈ ಆಯ್ಕೆ ಮಾಡಬಹುದು. ಚಾಯ್ಸ್-4: ದೊರಕಿದ ಸೀಟು ತೃಪ್ತಿಕರವಾಗಿಲ್ಲ. ಈ ಸೀಟು ಬೇಡ ಮತ್ತು ಮುಂದಿನ ಸುತ್ತಿನಲ್ಲೂ ಯಾವುದೇ ಸೀಟು ಪಡೆಯಲು ಇಷ್ಟವಿಲ್ಲ. ಬೇರೆ ಸಂಸ್ಥೆಯಿಂದ ಸೀಟು ಪಡೆಯುವುದಾದರೆ ಈ ಆಯ್ಕೆ ಮಾಡಿಕೊಳ್ಳಬಹುದು.
ಸೀಟು ವಾಪಸ್ಸಿಗೆ ದಂಡ
ಮೊದಲ ಸುತ್ತು ಅಥವಾ ಎರಡನೇ ಸುತ್ತಿನಲ್ಲಿ ಚಾಯ್ಸ್-1ನ್ನು ಆಯ್ಕೆ ಮಾಡಿಕೊಂಡು ಸೀಟು ಪಡೆದ ನಂತರ ಸೀಟು ರದ್ದುಗೊಳಿಸಲು ನಿರ್ಣಯಿಸಿದಲ್ಲಿ ಎರಡನೇ ಮುಂದುವರಿದ ಸುತ್ತಿನ ಸೀಟು ಆಯ್ಕೆ ದಾಖಲಿಸುವ ದಿನಾಂಕದೊಳಗೆ ರದ್ದು ಮಾಡಬೇಕು. ಅಂತಹ ಅಭ್ಯರ್ಥಿಗಳಿಗೆ ಪಾವತಿಸಿದ ಮೊತ್ತದಲ್ಲಿ ₹ 5,000 ಕಡಿತ ಮಾಡಿ ಉಳಿದ ಮೊತ್ತ ಹಿಂದಿರುಗಿಸಲಾಗುತ್ತದೆ. ಒಂದು ವೇಳೆ ಎರಡನೇ ಮುಂದುವರಿದ ಸುತ್ತಿನ ನಂತರ ಸೀಟು ರದ್ದುಪಡಿಸಿದಲ್ಲಿ ಪಾವತಿಸಿದ ಪೂರ್ಣ ಶುಲ್ಕ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಖಾಸಗಿ, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕ ಕೌನ್ಸೆಲಿಂಗ್
ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಎಂಜಿನಿಯರಿಂಗ್ ಪ್ರವೇಶಕ್ಕಾಗಿ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿದ್ದು, ಪ್ರತ್ಯೇಕವಾಗಿಯೇ ಕೌನ್ಸೆಲಿಂಗ್ ನಡೆಸಲಿವೆ.