ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅಕ್ಷರ ಜಾತ್ರೆ ಶುರುವಾಗಿದೆ. 83ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆತಿದ್ದು, ರಾಜ್ಯದ ವಿವಿಧ ಮೂಲೆಗಳಿಂದ ಸಾಹಿತ್ಯಾಸಕ್ತರು ಮೈಸೂರಿನತ್ತ ಮುಖ ಮಾಡಿದ್ದಾರೆ.
ಸಾಹಿತ್ಯ ಸಮ್ಮೇಳನವೆಂದರೆ ಅದು ಬರಹಗಾರರ, ಓದುಗರ ಹಾಗು ಪುಸ್ತಕಗಳ ದೊಡ್ಡ ಹಬ್ಬ. ಸಮ್ಮೇಳನದ ಪ್ರಮುಖ ಆಕರ್ಷಣೆಯೇ ಸಾಹಿತಿಗಳು ಮತ್ತು ಪುಸ್ತಕ ಮಳಿಗೆಗಳು. ವಿದ್ಯಾರ್ಥಿಗಳಿಗೊಂತು ಸಮ್ಮೇಳನ ರಸದೌತಣ ನೀಡುತ್ತದೆ. ಅಕ್ಷರ ವ್ಯಾಮೋಹ ಇರುವಂತಹ ವಿದ್ಯಾರ್ಥಿಗಳು ಇಲ್ಲಿ ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದೆ.
ಕತೆ, ಕವನ, ವಿಚಾರಧಾರೆ, ಕಾದಂಬರಿಗಳು, ಲೇಖನಗಳು, ಐತಿಹಾಸಿಕ, ಧಾರ್ಮಿಕ, ಆದ್ಯಾತ್ಮಿಕ ಹೀಗೆ ಎಲ್ಲಾ ವಿಷಯಗಳ ಪುಸ್ತಕಗಳು ಇಲ್ಲಿ ಲಭ್ಯವಿರುತ್ತದೆ.
ಇನ್ನು ಮೂರು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಹಲವು ಸಾಹಿತಿಗಳ ಭಾಷಣಗಳನ್ನು ಕೇಳಬಹುದು. ಕವಿಗೋಷ್ಠಿಗಳು, ಕವನ ವಾಚನ, ಹೀಗೆ ಸಾಹಿತ್ಯ ಲೋಕದ ಹಲವು ಮುಖಗಳ ಪರಿಚಯವಾಗುತ್ತದೆ.
ಕಲಾ ವಿದ್ಯಾರ್ಥಿಗಳಿಗೊಂತು ಸಾಹಿತ್ಯ ಸಮ್ಮೇಳನ ಒಂದು ದೊಡ್ಡ ಹಬ್ಬವಿದ್ದಂತೆ. ಇಲ್ಲಿನ ಪ್ರತಿಯೊಂದು ವಿಷಯವು ಕೂಡ ಅವರಿಗೆ ಸಂಬಂಧಪಟ್ಟಿದ್ದೇ ಅಗಿರುತ್ತದೆ. ಪುಸ್ತಕ ಬರೆಯುವುದರಿಂದ ಹಿಡಿದು ಪುಸ್ತಕಗಳ ಮಾರಾಟವಾಗುವವರೆಗಿನ ಪ್ರತಿ ಮಾಹಿತಿಯನ್ನು ಅವರು ಪಡೆಯಬಹುದು.
ಸಾಹಿತಿಗಳ ದರ್ಶನ
ಸಾಹಿತ್ಯ ಸಮ್ಮೇಳನಕ್ಕೆ ದಿಗ್ಗಜ ಲೇಖಕರುಗಳ ದೊಡ್ಡ ದಂಡೇ ಆಗಮಿಸಿರುತ್ತದೆ. ಅವರ ಭೇಟಿ ಮಾಡುವ ಅವಕಾಶವನ್ನು ವಿದ್ಯಾರ್ಥಿಗಳು ಪಡೆಯಬಹುದು. ಅವರ ಅನುಭವ, ಬರವಣಿಗೆ ಶೈಲಿ, ಅವರು ಆಯ್ದುಕೊಳ್ಳವ ಕಥಾ ವಸ್ತು ಹೀಗೆ ಬರವಣಿಗೆಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು.
ಆಕರ್ಷಕ ಪುಸ್ತಕ ಮೇಳ
ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆ ಪುಸ್ತಕ ಮೇಳ, ಲಕ್ಷಾಂತರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಗೊಳ್ಳುವ ಪುಸ್ತಕ ಮೇಳದಲ್ಲಿ ವಿದ್ಯಾರ್ಥಿಗಳು ಪುಸ್ತಕಗಳನ್ನು ಖರೀಧಿಸಬಹುದು.
ಹಲವಾರು ಪ್ರಕಾಶನಗಳ ಪುಸ್ತಕಗಳು, ವಿಶೇಷ ಸಂಗ್ರಹಗಳು, ವಿವಿಧ ದೇಶಗಳ ಪುಸ್ತಕ, ಭಾಷಾಂತರಗೊಂಡ ಪುಸ್ತಕ, ಹೀಗೆ ಹಲವು ಬಗೆಯ ಪುಸ್ತಕಗಳನ್ನು ನೋಡುವ ಹಾಗು ಪಡೆಯುಬಹುದಾಗಿದೆ.