ಜಲಸಂಪನ್ಮೂಲ ಇಲಾಖೆಯ 889 ಎಂಜಿನಿಯರ್ ಕೆಪಿಎಸ್ಸಿ ಹುದ್ದೆಗಳಿಗೆ ಅಂತಿಮ ಸೆಮಿಸ್ಟರ್ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಕೆಪಿಎಸ್ಸಿ ಮುಖಾಂತರ ನೇಮಕಗೊಳ್ಳುವ ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ.
ಇದನ್ನು ಗಮನಿಸಿ:ಕೆ ಪಿ ಎಸ್ ಸಿ: ಜಲಸಂಪನ್ಮೂಲ ಇಲಾಖೆಯಲ್ಲಿ 889 ಇಂಜಿನಿಯರ್ ಗಳ ನೇಮಕಾತಿ
ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) 889 ಎಂಜಿನಿಯರ್ ಹುದ್ದೆಗಳ ನೇಮಕಕ್ಕೆ 2017ರ ಜೂನ್ 22ರಂದು ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆಯಲ್ಲಿ 'ಅಂತಿಮ ವರ್ಷದ ಬಿ.ಇ.ಪದವಿ ಪರೀಕ್ಷೆ ಬರೆದು ಫಲಿತಾಂಶ ನಿರೀಕ್ಷೆ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ' ಎಂದು ತಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ರಚಿತಾ ಕೆ.ಗೌಡ ಹಾಗೂ ಮೈಸೂರಿನ ಎಸ್. ಮೇಘ ಅರ್ಜಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯುಪಿಎಸ್ಸಿಯಲ್ಲಿ ಅವಕಾಶವಿದೆ ಆದರೆ ಕೆಪಿಎಸ್ಸಿಯಲ್ಲಿ ಏಕಿಲ್ಲ ಎಂದು ಕೇಳಲಾಗಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪುರಸ್ಕರಿಸಿದ್ದು, 'ಈ ಆದೇಶವು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ಒಂದು ವೇಳೆ ಅರ್ಜಿದಾರರು ಫೇಲಾದರೆ ಕೋರ್ಟ್ಗೆ ಕೆಪಿಎಸ್ಸಿ ಮೆಮೊ ಸಲ್ಲಿಸಲು ಮುಕ್ತವಾಗಿದೆ' ಎಂದು ತಿಳಿಸಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಮತ್ತು ಕಿರಿಯ ಎಂಜಿನಿಯರ್ ದರ್ಜೆಯ ಒಟ್ಟು 889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 22 ಕಡೆ ದಿನವಾಗಿದ್ದು ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.