ದೇಶದ ಆರ್ಥಿಕ ವ್ಯವಸ್ಥೆಯನ್ನೆ ಅಲ್ಲೋಲ ಕಲ್ಲೋಲ ಮಾಡಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪದ್ಧತಿ, ಶಿಕ್ಷಣ ಮತ್ತು ಉದ್ಯೋಗದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ.
ಜಿಎಸ್ಟಿ ಜಾರಿಯಾಗಿ ಬರೋಬ್ಬರಿ ಒಂದು ತಿಂಗಳು ಕಳೆಯಿತು. ಇಲ್ಲಿಯವರೆಗೂ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಏನೆನೆಲ್ಲಾ ಬದಲಾವಣೆ ಆಗಿದೆ ಅನ್ನೋ ಲೆಕ್ಕಾಚಾರ ಇನ್ನು ನಡೆಯುತ್ತಲೇ ಇದೆ. ಆದರೆ ಕಾಮರ್ಸ್ ಪದವಿ ಮತ್ತು ಪದವೀಧರರಿಗೆ ಮಾತ್ರ ಜಿಎಸ್ಟಿ ವರದಾನವಾಗಿದೆ.
ಜಿಎಸ್ಟಿ ಜಾರಿಯಾದ ದಿನದಿಂದಲೇ ದೇಶದ ಉದ್ಯಮದಲ್ಲಿ ಲಾಭ ನಷ್ಟಗಳ ಲೆಕ್ಕಾಚಾರ ಪ್ರಾರಂಭವಾಯಿತು. ಚಿಕ್ಕ ಪುಟ್ಟ ಉದ್ಯಮದಿಂದ ದೊಡ್ಡ ದೊಡ್ಡ ವ್ಯವಹಾರಗಳ ಕಂಪನಿಗಳು ತೆರಿಗೆ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡು ಸಮಸ್ಯೆಗಳನ್ನು ಬಗೆ ಹರಿಸಲು ಆರ್ಥಿಕ ತಜ್ಞರ ಮೊರೆ ಹೋಗಿದ್ದು ಸಾಮಾನ್ಯವಾಗಿತ್ತು.
ಇದನ್ನು ಗಮನಿಸಿ: ಕರ್ನಾಟಕದ ಎರಡು ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ ಪದವೀಧರರೇ ಇಲ್ಲ!
ಜಿಎಸ್ಟಿ ಜಾರಿಯಾದಾಗಿನಿಂದ ವ್ಯಾಪಾರಿಗಳು ತಿಂಗಳಿಗೊಮ್ಮೆ ರಿಟರ್ನ್ಸ್ ಫೈಲ್ ಮಾಡಬೇಕಾಗಿದೆ, ಅದಕ್ಕಾಗಿ ಪ್ರತಿ ದಿನದ ಲೆಕ್ಕಾಚಾರಗಳನ್ನು ನಮೂದು ಮಾಡಬೇಕಾದ ಅನಿವಾರ್ಯತೆ ಇದೆ. ಇದೆಲ್ಲವನ್ನೂ ಜಿಎಸ್ ಟಿ ನೆಟ್ ವರ್ಕ್ ಸಾಫ್ಟ್ ವೇರ್ ನಲ್ಲೇ ಮಾಡಬೇಕಾಗಿರುವುದರಿಂದ ಅಕೌಂಟ್ಸ್ ಮತ್ತು ಹಣಕಾಸು ಕಾನೂನುಗಳು ತಿಳಿದಿರುವ ಬಿಕಾಂ ಪದವೀಧರರೇ ಹೆಚ್ಚು ಸೂಕ್ತ ಎಂಬ ವಿಶ್ವಾಸಕ್ಕೆ ಉದ್ಯಮಿಗಳು ಬರುತ್ತಿದ್ದಾರೆ.
ಕಂಪನಿಗಳ ಲೆಕ್ಕಾಚಾರಗಳನ್ನು ಬ್ಯಾಲೆನ್ಸ್ ಮಾಡಲು ಆಡಿಟರ್ ಗಳ ಅವಶ್ಯಕತೆ ಇದೆ. ದೊಡ್ಡ ಕಂಪನಿಗಳು ಸಿಎ ಗಳನ್ನು ನೇಮಿಸಿಕೊಂಡಿರುತ್ತವೆ. ಆದರೆ ಸಣ್ಣ ಕಂಪನಿಗಳಿಗೆ ಬಿ.ಕಾಂ ಪದವೀಧರರೇ ಈಗ ಸಿಎ ಗಳಾಗಿದ್ದಾರೆ.
ಹಳೆ ತೆರಿಗೆ ಪದ್ಧತಿಯಲ್ಲಿ ಮೂರು ತಿಂಗಳಿಗೆ ಒಂದು ರಿಟರ್ನ್ ಫೈಲ್ ಮಾಡಿದರೆ ಸಾಕಿತ್ತು. ಈಗ ಒಂಬತ್ತು ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ. ಇಲ್ಲಿ ತಂತ್ರಜ್ಞಾನ ಬಳಕೆಯೂ ಕಡ್ಡಾಯ. ಇಡೀ ವ್ಯವಸ್ಥೆ ಆನ್ ಲೈನ್ ನಲ್ಲೇ ನಡೆಯಬೇಕು. ಆರಂಭಿಕ ಹಂತದಲ್ಲಿ ಬಹಳಷ್ಟು ಸವಾಲುಗಳಿರುತ್ತವೆ. ಮತ್ತು ಕ್ಲರಿಕಲ್ ಕೆಲಸಗಳು ಹೆಚ್ಚಲಿವೆ. ಈ ಕೆಲಸಗಳನ್ನು ಮಾಡುವುದಕ್ಕಾಗಿ ಸಂಸ್ಥೆಗಳು ಕಾಮರ್ಸ್ ಪದವೀಧರರನ್ನು ನೇಮಿಸಿಕೊಳ್ಳಬೇಕಾಗುತ್ತದೆ.
ಇನ್ನು ಕಾಮರ್ಸ್ ಕಾಲೇಜುಗಳಲ್ಲಿ ಜಿಎಸ್ಟಿ ಬಗ್ಗೆ ವಿಶೇಷ ತರಗತಿಗಳು ಕೂಡ ಪ್ರಾರಂಭವಾಗಿವೆ. ಕಾಮರ್ಸ್ ಮುಗಿಸಿ ಮನೆಯಲ್ಲಿ ಕೂತಿದ್ದವರ ಮನೆ ಬಾಗಿಲಿಗೆ ಉದ್ಯೋಗಗಳು ಹುಡುಕಿ ಬರುತ್ತಿವೆ. ಕಾಮರ್ಸ್ ಪದವೀಧರರಿಗೆ ಬೇಡಿಕೆ ಜಾಸ್ತಿಯಾದಂತೆ ಅವರ ವೇತನವು ಜಾಸ್ತಿಯಾಗಿದೆ. ಹತ್ತು ಹದಿನೈದು ಸಾವಿರ ಸಂಬಳ ನೀಡುತ್ತಿದ್ದ ಕಡೆ ಏಕಾ ಏಕಿ ಇಪ್ಪತ್ತೈದು, ಮೂವತ್ತು ಸಾವಿರ ಸಂಬಳ ನೀಡಲು ಕಂಪನಿಗಳು ಮುಂದಾಗಿವೆ.
ಒಟ್ಟಿನಲ್ಲಿ ಜಿಎಸ್ಟಿ ಕಾಮರ್ಸ್ ಕ್ಷೇತ್ರಕ್ಕೆ ಲಾಭದಾಯಕವಾಗಿ ಪರಿಣಮಿಸಿದೆ.