ಕನ್ನಡ ಭಾಷೆಗೆ ತನ್ನದೇ ಆದ ಭವ್ಯ ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಜೀವಂತಿಕೆ ಕಾಪಾಡಿಕೊಂಡು ಬಂದಿರುವ ಹೆಮ್ಮೆಯ ಕನ್ನಡ ಭಾಷೆ ಕೇವಲ ಭಾಷೆಯಾಗಿ ಉಳಿಯದೆ ಒಂದು ಸಂಸ್ಕೃತಿಯಾಗಿದೆ.
ರಂಗಭೂಮಿ, ಸಾಹಿತ್ಯ, ಜಾನಪದ ಹಾಗೂ ನಾನಾ ಕಲೆಗಳ ಅಭಿವೃದ್ಧಿಗೆ ಕನ್ನಡ ಭಾಷೆಯ ಪಾತ್ರ ಮಹತ್ವವಾದದ್ದು. ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದ ಭಾಷೆ ಎಂಬ ಕೀರ್ತಿಗೆ ಕನ್ನಡ ಭಾಷೆ ಪಾತ್ರವಾಗಿದೆ. ಎಲ್ಲಾ ಜ್ಞಾನ ಪೀಠ ಪ್ರಶಸ್ತಿಗಳು ನಮ್ಮ ಕನ್ನಡ ಭಾಷೆಯ ಕಲೆ , ಸಂಸ್ಕೃತಿ , ಆಚಾರ ವಿಚಾರಗಳಿಗೆ ದೊರೆತ ಗೌರವ ಎಂಬುದು ಮುಖ್ಯ ಅಂಶ.
64ನೇ ಕನ್ನಡ ರಾಜ್ಯೋತ್ಸವ ನವೆಂಬರ್ 1ರ ಇತಿಹಾಸದಿಂದ
ಭಾಷಾವಾರು ಪ್ರಾಂತ್ಯಗಳ ರಚನೆಯ ಹಲವು ಉದ್ದೇಶಗಳಲ್ಲಿ ಆಯಾ ಪ್ರದೇಶದಲ್ಲಿ ಪ್ರಧಾನವಾಗಿ ಬಳಕೆಯಲ್ಲಿರುವ ಭಾಷೆಯಲ್ಲಿ ಆಡಳಿತವನ್ನು ನಡೆಸುವುದು ಒಂದಾಗಿರುತ್ತದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಈ ವಿಚಾರದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಹಿಂದೆ ಇದ್ದ ಸ್ಥಿತಿಯೇ ಆನಂತರದ ವರ್ಷಗಳಲ್ಲೂ ಮುಂದುವರಿಯಿತು. ಆಡಳಿತ ಎಂದರೆ ಇಂಗ್ಲೀಷ್ ಭಾಷೆಯಲ್ಲಿನ ಆಡಳಿತವೇ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ತಪ್ಪಿಸುವ ಪ್ರಯತ್ನವಾಗಿ ಸರ್ಕಾರವು ಕರ್ನಾಟಕ ರಾಜಭಾಷಾ ಅಧಿನಿಯಮ 1963 ಎಂಬ ಒಂದು ಕಾಯಿದೆಯನ್ನು ಜಾರಿಗೊಳಿಸಿ ಕರ್ನಾಟಕ ರಾಜ್ಯದಲ್ಲಿ ಕನ್ನಡವು ರಾಜ್ಯದ ಅಧಿಕೃತ ಆಡಳಿತ ಭಾಷೆಯೆಂದು ಘೋಷಿಸಿತು.
ಕನ್ನಡ ರಾಜ್ಯೋತ್ಸವ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿಯೇ ಕನ್ನಡ ಪ್ರಾಚೀನ-ನವೀನ. ಅದಕ್ಕೇ 1868ರಿಂದ ಇಂಗ್ಲಿಷ್ ಸರಕಾರದ ದಾಖಲೆಗಳು 'ಕ್ಲಾಸಿಕಲ್ ಲಾಂಗ್ವೇಜ್' ಎಂದು ಕರೆದು, ದಾಖಲಿಸಿ 'ಅಭಿಜಾತ' ಎಂದಿದ್ದಾರೆ.
3ನೇ ಶತಮಾನಕ್ಕೆ ಮುಂಚೆಯೇ ಅಂದಿನ ದಾಖಲೆಗಳೆನಿಸಿದ ತಮಿಳು ಶಾನಸಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವ ಲಭ್ಯ. ಇದಲ್ಲದೆ ಕನ್ನಡದ ಮೊತ್ತಮೊದಲ ಶಾಸನ ಎಂದು ಹಲ್ಮಿಡಿ ಶಾಸನವನ್ನು ಗುರುತಿಸಲಾಗಿದೆ. ಅದರ ಕಾಲ ಕ್ರಿ.ಶ. 450.
ತಾಳಗುಂದ ಶಾಸನಗಳು ಕನ್ನಡದ ಹಳೆಯ ಕಲ್ಲಿನ ಶಾಸನಗಳು. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಮದಲ್ಲಿವೆ. ಇಲ್ಲಿನ ಒಂದು ಶಾಸನವು ಈವರೆಗೆ ಸಿಕ್ಕಿರುವ ಕನ್ನಡದ ಅತಿಹಳೆಯ ಶಾಸನವೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ
ಅದುವರೆಗೂ ಹಲ್ಮಿಡಿ ಶಾಸನವು ಕನ್ನಡದ ಅತಿಹಳೆಯ ಶಾಸನವೆಂದು ಪರಿಗಣಿತವಾಗಿತ್ತು. ಆದರೆ ಅದಕ್ಕಿಂತಲೂ ಇದು ಹಳೆಯದೆಂದು ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಮೂಲಕ ಕನ್ನಡ ಬರವಣಿಗೆಯ ಇತಿಹಾಸವು ಸುಮಾರು ಒಂದು ನೂರು ವರ್ಷಗಳಷ್ಟು ಹಿಂದೆ ಹೋದಂತಾಗಿದೆ.
ಈ ಶಾಸನ ರಚನೆಯಾದ ಅವಧಿ ಕ್ರಿ.ಶ. 370-450 ಇರಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಶಾಸನ ಕದಂಬ ದೊರೆ ಶಾಂತಿವರ್ಮನ ಕಾಲಕ್ಕಿಂತಲೂ ಹಳೆಯದೆಂಬ ಅಂಶ ಬೆಳಕಿಗೆ ಬಂದಿದೆ.
ಕನ್ನಡ ಭಾಷೆಯ ಪುರಾತನಕ್ಕೆ ಇತರ ಪುರಾವೆ:
ಪಾಣಿನಿಯ ಅಷ್ಟಾಧ್ಯಾಯಿ, ಅಶೋಕನ ಶಾಸನ, ಪ್ರಾಕೃತ ಶಾಸನ, ಗ್ರೀಕ್ ಇತಿಹಾಸಕಾರ ಟಾಲೆಮಿಯ ಪಾಪಿರಸ್, ಗ್ರೀಕ್ ಕಾಮಿಡಿ ಅಕ್ಸಿರಿಂಕಸ್ ಪಾಪೈರಿ, ಪ್ರಾಕೃತದಲ್ಲಿನ ಮಳವಳ್ಳಿಯ ಶಾಸನ, ಹಾಲರಾಜನ ಗಾಥಾ ಸಪ್ತಶತಿ, ಪಲ್ಲವರ ಹಡಗಲಿಯ ಶಾಸನ, ತಮಿಳಿನ ಶಿಲಪ್ಪದಿಕಾರಮ್ನ 'ಕರುನಾಡಗರ್' ಇವೆಲ್ಲ ಕನ್ನಡ ಭಾಷೆಯ 'ಅಭಿಜಾತ ಸ್ಥಾನ' ವನ್ನು ಸಾಬೀತು ಮಾಡಲು ಪೂರಕ ಮಹತ್ವದ ದಾಖಲೆಗಳು.
ಕನ್ನಡ ಕ್ರಿ.ಪೂ.6 ರಿಂದಲೇ ತನ್ನ ಅಸ್ತಿತ್ವವನ್ನು ಗುರುತಿಸಿದೆ. ಶ್ರೀ ಸಾಮಾನ್ಯರೇ ಕ್ರಿ.ಪೂ. 3-4 ರಲ್ಲಿಯೇ ಆಡು ಭಾಷೆಯಾಗಿ ಕನ್ನಡವನ್ನು ಬಳಸುತ್ತಿದ್ದರು. ಸಂಸ್ಕೃತ ಮತ್ತು ಪ್ರಾಕೃತದಿಂದಲೇ ಮೊತ್ತ ಮೊದಲಿಗೆ ಕನ್ನಡ ಭಾಷೆ ಪ್ರಭಾವ ಹೊಂದಿದೆ. ಅದೇ ರೀತಿ ತಮಿಳಿಗೂ ಕನ್ನಡದ್ದೇ ಪ್ರಭಾವ. ರಾಜಕೀಯವಾಗಿ ಆಡಳಿತಾತ್ಮಕವಾಗಿ ಕನ್ನಡ 500 ವರ್ಷಗಳಿಂದ ಸ್ಥಾನ ಗಳಿಸಿಕೊಟ್ಟಿದೆ.