2016ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಅಂತಿಮ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು ಕರ್ನಾಟಕದ ಕೆ ಆರ್ ನಂದಿನಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಕಳೆದ ಬಾರಿ ನಡೆದ ಯುಪಿಎಸ್ ಪರೀಕ್ಷೆ ಫಲಿತಾಂಶದಲ್ಲಿ 625ನೇ ರ್ಯಾಂಕ್ ಪಡೆಯುವ ಮೂಲಕ ಭಾರತೀಯ ಆದಾಯ ಸೇವೆ ಹುದ್ದೆ ಆಯ್ಕೆ ಮಾಡಿಕೊಂಡು ಸಧ್ಯ ಫರಿದಾಬಾದ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಕೋಲಾರ ಜಿಲ್ಲೆಯ ಕೆಂಬೋಡಿ ಗ್ರಾಮದ ನಂದಿನಿ ಕೆ ಆರ್ ಅವರು ಈಗ ಎರಡನೇ ಪ್ರಯತ್ನದಲ್ಲಿ ಪ್ರಥಮ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ
ಈ ಸಾಧನೆ ಮಾಡಿದ ಎರಡನೇ ಕನ್ನಡತಿ
ಈ ಹಿಂದೆ ವಿಜಯಲಕ್ಷ್ಮೀ ಬಿದರಿ ಹೊರತು ಪಡಿಸಿದರೆ ಇದುವರೆಗೂ ಕರ್ನಾಟಕದ ಅಭ್ಯರ್ಥಿಗಳು ಯಾರೂ ಪ್ರಥಮ ಸ್ಥಾನ ಪಡೆದಿರಲಿಲ್ಲ. ಇದೀಗ ನಂದಿನಿ ಮೇರು ಸಾಧನೆ ಮಾಡಿದ 2ನೇ ಕನ್ನಡಿಗರೆನಿಸಿದ್ದಾರೆ.
ಸಿಎಂ ಅಭಿನಂದನೆ
ಕೆ.ಆರ್. ನಂದಿನಿ ಅವರನ್ನು ಸಿಎಂ ಸಿದ್ದರಾಮಯ್ಯ ಅಭಿನಂದಿಸಿದ್ದಾರೆ. "ಸುಮಾರು 17 ವರ್ಷಗಳ ನಂತರ ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡತಿ ಪ್ರಥಮ ಸ್ಥಾನ ಪಡೆದಿರುವುದು ನನ್ನ ಸಂತಸ ಇಮ್ಮಡಿಗೊಳಿಸಿದೆ ಎಂದು ಸಿದ್ದರಾಮಯ್ಯ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ
ನಂದಿನಿ ಶೈಕ್ಷಣಿ ಹಾದಿ
ಕೋಲಾರದ ಚಿನ್ಮಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿರುವ ನಂದಿನಿ, ಮೂಡಬಿದರೆಯ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಇಂಜಿನಿಯರಿಂಗ್ ಪೂರ್ಣಗೊಳಿಸಿದ ಬಳಿಕ ನಂದಿನಿ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಸಿವಿಲ್ ಇಂಜಿನಿಯರಿಂಗ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಇವರ ತಂದೆ ರಮೇಶ್ ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯುಪಿಎಸ್ಸಿಯಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಬಂದಿರುವ ಕೋಲಾರದ ಕೆ.ಆರ್.ನಂದಿನಿ. ಐಎಫ್ಎಸ್ ಸೇವೆ ಸೇರುವುದಿಲ್ಲ. ಐಎಎಸ್ ಅಧಿಕಾರಿಯಾಗಿ ಭಾರತೀಯರ ಸೇವೆ ಮಾಡುತ್ತೇನೆ. ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಂಡು ಜನ ಸೇವೆ ಮಾಡಲಿದ್ದೇನೆ ಎಂದ ಹೇಳಿದ್ದಾರೆ.
ತಂದೆಯ ಮಾತುಗಳೇ ಪ್ರೇರಣೆ
ಶಾಲಾ ಶಿಕ್ಷಕರಾಗಿರುವ ತಂದೆ ಸಾಕ್ಷರತಾ ಅಭಿಯಾನದ ಸಂಯೋಜಕರಾಗಿದ್ದ ಸಂದರ್ಭದಲ್ಲಿ ಬೇರೆ ಊರಿಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಹೇಗೆ ಇರುತ್ತದೆ ಎಂಬುದನ್ನು ಆಗ ತಂದೆಯವರು ವಿವರಿಸುತ್ತಿದ್ದರು. ಅದೇ ನನಗೆ ಐಎಎಸ್ ಅಧಿಕಾರಿಯಾಗಲು ಪ್ರೇರಣೆಯಾಗಿದೆ.
ಕನ್ನಡವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು ಪ್ರಥಮ ರ್ಯಾಂಕ್ನಲ್ಲಿ ತೇರ್ಗಡೆಯಾಗುವ ಮೂಲಕ ಕನ್ನಡದ ಬಗ್ಗೆ ಉದಾಸೀನ ಮಾಡುವವರಿಗೆ ಉತ್ತರ ನೀಡಿದ್ದಾರೆ. [ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: 1099 ಅಭ್ಯರ್ಥಿಗಳು ಆಯ್ಕೆ]