ಇಂಜಿನಿಯರಿಂಗ್ ಕನಸು ಹೊತ್ತ ಮತ್ತು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಈ ವರ್ಷದಿಂದ ಕನ್ನಡ ಮಾಧ್ಯಮದಲ್ಲೇ ಎಂಜಿನಿಯರಿಂಗ್ ಕೋರ್ಸ್ ಅನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಆದರೆ ಪ್ರಸಕ್ತ ಸಾಲಿಗೆ ಯಾವುದೇ ಒಂದು ವಿದ್ಯಾರ್ಥಿಯೂ ದಾಖಲಾಗಿಲ್ಲದಿರುವುದು ಬೇಸರ ತಂದಿದೆ.
ಈ ಕುರಿತು ವರದಿ ಸಲ್ಲಿಸಲು ಕಾಲೇಜುಗಳಿಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿತ್ತು. ಈ ಬಾರಿ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 23,001 ಸೀಟುಗಳು ಖಾಲಿ ಇವೆ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ 2021-22ರ ಶೈಕ್ಷಣಿಕ ಸಾಲಿಗೆ ಪ್ರಾದೇಶಿಕ ಭಾಷೆಯಲ್ಲಿ ಎಂಜಿನಿಯರಿಂಗ್ ಅನ್ನು ಪರಿಚಯಿಸಲಾಯಿತು. ರಾಜ್ಯದ ಮೂರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಡಲಾಗಿತ್ತು. ಒಟ್ಟಾರೆ 72 ಸೀಟುಗಳನ್ನು ಈ ಬಾರಿ ಕನ್ನಡ ಮಾಧ್ಯಮದವರಿಗೆ ಮೀಸಲಿಡಲಾಗಿತ್ತು ಎಂದು ತಿಳಿದುಬಂದಿದೆ. ಕೌನ್ಸೆಲಿಂಗ್ ಪ್ರಕ್ರಿಯೆಯ ಆರಂಭದ ಸುತ್ತಿನಲ್ಲಿ ಕೆಲ ವಿದ್ಯಾರ್ಥಿಗಳು ಹಾಜರಾಗಿದ್ದರು, ಆದರೆ ಅವರಲ್ಲಿ ಯಾರೊಬ್ಬರೂ ಕಾಲೇಜುಗಳಿಗೆ ದಾಖಲಾಗಿಲ್ಲದಿರುವುದನ್ನು ಕಂಡು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಸಹ ಅಚ್ಚರಿ ವ್ಯಕ್ತಪಡಿಸಿದೆ. ಈ ಕೋರ್ಸ್ ಗಳನ್ನು ನೀಡುವ ಕಾಲೇಜುಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಕೆಲವು ವಿದ್ಯಾರ್ಥಿಗಳು ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ ಪೋಷಕರಿಗೆ ಈ ಕಾರ್ಯಕ್ರಮದ ಮೇಲೆ ವಿಶ್ವಾಸ ಇಲ್ಲದಿರಬಹುದು. ಹಾಗಾಗಿ ಇದನ್ನು ಇನ್ನಷ್ಟು ಬಲಪಡಿಸಿ ಮುಂದಿನ ವರ್ಷ ಹೆಚ್ಚಿನ ಕಾಲೇಜುಗಳಲ್ಲಿ ಪರಿಚಯಿಸುತ್ತೇವೆ'' ಎಂದು ವಿಟಿಯು ಉಪಕುಲಪತಿ ಕರಿಸಿದ್ದಪ್ಪ ಹೇಳಿದರು.
ಒಟ್ಟಾರೆ ಈ ವರ್ಷ 16,457 ಸೀಟುಗಳು ಖಾಲಿ ಇವೆ. ಸಿಇಟಿ ಮೂಲಕ 64,484 ಸೀಟುಗಳು ಲಭ್ಯವಿದ್ದರೆ, 48,027 ಸೀಟುಗಳನ್ನು ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. ಹೆಚ್ಚುವರಿಯಾಗಿ 6,544 ವಿದ್ಯಾರ್ಥಿಗಳು ಪ್ರವೇಶ ಆದೇಶವನ್ನು ಡೌನ್ಲೋಡ್ ಮಾಡಿಕೊಂಡಿಲ್ಲ. ಹೀಗಾಗಿ ಒಟ್ಟು ಖಾಲಿ ಇರುವ ಸೀಟುಗಳ ಸಂಖ್ಯೆ 23,001 ಎಂದು ತಿಳಿದುಬಂದಿದೆ.
"ಈ ವರ್ಷ ದ್ವಿತೀಯ ಪಿಯುಸಿಯಿಂದ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಮತ್ತು CET ನಲ್ಲಿ ಕಟ್ ಆಫ್ ಅಂಕಗಳ ಕೊರತೆಯಿಂದಾಗಿ ಕಳೆದ ವರ್ಷಕ್ಕಿಂತ ಈ ಭಾರಿ ದಾಖಲಾದವರ ಸಂಖ್ಯೆ ಉತ್ತಮವಾಗಿವೆ. ಗ್ರಾಮೀಣ ಕಾಲೇಜುಗಳಿಗೆ ಈ ಬಾರಿ ಉತ್ತಮ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ಸಿವಿಲ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ತೆಗೆದುಕೊಳ್ಳುವವರ ಸಂಖ್ಯೆ ಕುಂದಿದೆ.'' ಎಂದೂ ವಿಟಿಯುನ ವಿಸಿ ಹೇಳಿದರು.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳಿಗೆ ಸೀಟು ಹಂಚಿಕೆ ಮಾಡುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ ಕೌನ್ಸೆಲಿಂಗ್ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ವೈದ್ಯಕೀಯ ಸೀಟುಗಳನ್ನು ಪಡೆದ ನಂತರ ಕೆಲ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟುಗಳನ್ನು ತೊರೆಯುವ ಅವಕಾಶಗಳು ಹೆಚ್ಚಿವೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.