ರಾಜ್ಯದ ವಿದ್ಯಾರ್ಥಿನಿ ಪತ್ರಕ್ಕೆ ಪ್ರಧಾನಮಂತ್ರಿ ಮೋದಿ ಸ್ಪಂದಿಸಿದ್ದು, ಮೋದಿಯವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯ ಹೆಸರನ್ನು ಪ್ರಸ್ತಾಪಿಸುವುದರ ಜೊತೆಗೆ ಪತ್ರಕ್ಕೆ ಸ್ಪಂದಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಯಾಕಾಪುರ ಗ್ರಾಮದ ನಿವಾಸಿಯಾದ ಇರ್ಫಾನ್ ಬೇಗಂ ತಮ್ಮ ಊರಿನ ಸಮಸ್ಯೆಗಳನ್ನು ಕುರಿತು ಪ್ರಧಾನಿಗೆ ಪತ್ರ ಬರೆದಿದ್ದರು.

ಸಲೇಪೇಟ್ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಇರ್ಫಾನ್ ಬೇಗಂ, ನಮ್ಮ ಊರಿನಲ್ಲಿ ಬಸ್ ಇಲ್ಲದ ಕಾರಣ ಐದು ಕಿ.ಮೀ ದೂರದ ಶಾಲೆಗೆ ನಿತ್ಯವು ನಡೆದು ಹೋಗಬೇಕು, ಇದರಿಂದ ಬೇಗ ಮನೆಯಿಂದ ಹೊರಟರೆ ಮನೆಗೆ ವಾಪಸಾಗುವುದೆ ತಡವಾಗುತ್ತದೆ ಎಂದು ಪತ್ರದ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಪತ್ರದಲ್ಲಿ ಏನಿತ್ತು?
ನನ್ನ ಊರಿನಿಂದ ಶಾಲೆ ಐದು ಕಿಲೋ ಮೀಟರ್ ದೂರದಲ್ಲಿದೆ. ನಿತ್ಯ ಬೆಳಗ್ಗೆ 8ಕ್ಕೆ ಹೊರಟರೆ ಶಾಲೆಯಲ್ಲಿ ಅಭ್ಯಾಸ ಮುಗಿಸಿ ಸಂಜೆ ಮನೆಗೆ ತಲುಪುವಷ್ಟರಲ್ಲಿ 6 ಗಂಟೆಯಾಗುತ್ತದೆ. ಸ್ನೇಹಿತರೊಡನೆ ಆಟವಾಡಲು, ಹೋಂವರ್ಕ್ ಮಾಡಲು ನಮಯ ಸಿಗುತ್ತಿಲ್ಲ. ಪ್ರತಿ ಹೋಬಳಿ ಮಟ್ಟದಲ್ಲಿ ವಸತಿ ಸಹಿತ ಶಾಲೆ ನಿರ್ಮಿಸಿದಲ್ಲಿ ನನ್ನಂಥ ಸಾವಿರಾರು ವಿದ್ಯಾರ್ಥಿಗಳಿಗೆ ವರದಾನವಾಗುತ್ತದೆ ಎಂದು ಪತ್ರದ ಮೂಲಕ ಮನವಿ ಮಾಡಿದ್ದಳು.
ಭಾನುವಾರದ ತಮ್ಮ 38ನೇ ಮನ್ ಕಿ ಬಾತ್'ನಲ್ಲಿ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಯವರು ಕರ್ನಾಟಕದಿಂದ ಪತ್ರ ಬರೆದಿದ್ದ ಮಕ್ಕಳ ಬಗ್ಗೆಯು ಮಾತನಾಡಿದರು, ಅಲ್ಲದೇ ಕರ್ನಾಟಕದ ಹಿಂದುಳಿದ ಪ್ರದೇಶಗಳ ಪಟ್ಟಿಯಲ್ಲಿ ಸ್ಥಾನಪಡೆದಿರುವ ಕಲಬುರಗಿಯ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಪ್ರಧಾನಿ ಮೋದಿ ಮಕ್ಕಳ ಪತ್ರಗಳಿಗೆ ಸ್ಪಂದಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅನೇಕ ಬಾರಿ ಹಲವಾರು ಪತ್ರಗಳಿಗೆ ಸ್ಪಂದಿಸಿದ್ದಾರೆ.
ಮಂಡ್ಯ ವಿದ್ಯಾರ್ಥಿನಿ ಸಾರಾ ಬರೆದ ಪತ್ರಕ್ಕೆ ಸ್ಪಂದಿಸಿದ್ದ ಮೋದಿ ಆಕೆಗೆ ಶೈಕ್ಷಣಿಕ ಸಾಲ ಸಿಗುವಂತೆ ಮಾಡಿದ್ದರು. ಬೆಳಗಾವಿ ತಾಲೂಕಿನ ಆತವಾಡ ಗ್ರಾಮದ ವಿದ್ಯಾರ್ಥಿನಿ ಸೀಮಾ ಜ್ಯೋತಿಬಾ ಪಾಟೀಲ ಬರೆದ ಪತ್ರಕ್ಕೆ ಉತ್ತರವಾಗಿ ಬಸ್ ಸೌಕರ್ಯ ಕಲ್ಪಿಸುವಂತೆ ಆದೇಶ ನೀಡಿದ್ದರು. ಈಗ ಇರ್ಫಾನ್ ಬೇಗಂ ಪತ್ರಕ್ಕೆ ಸ್ಪಂದಿಸಿದ್ದು , ಎಲ್ಲರಲ್ಲೂ ಹರ್ಷವನ್ನುಂಟು ಮಾಡಿದೆ.


Click it and Unblock the Notifications











