ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) ಮೊದಲ ಸುತ್ತಿನ ಸೀಟು ಹಂಚಿಕೆ ಸೀಟುಗಳಿಗೆ ಹೊಸದಾಗಿ 5 ಸಾವಿರ ಅರ್ಜಿಗಳು ಬಂದಿವೆ. ಮೊದಲ ಸುತ್ತಿನ ನಂತರ ಉಳಿಕೆಯಾಗಿದ್ದ ಸುಮಾರು 34 ಸಾವಿರ ಸೀಟುಗಳಿಗೆ ಹೊಸದಾಗಿ 5,300 ಅರ್ಜಿಗಳು ಸಲ್ಲಿಕೆಯಾಗಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಎರಡನೇ ಸುತ್ತಿಗೆ ಸೀಟು ಅಯ್ಕೆ ಪ್ರಕ್ರಿಯೆಗೆ ಈ ಹಿಂದೆ ಅರ್ಜಿ ಸಲ್ಲಿಸದಿದ್ದವರಿಗೂ ಹೊಸದಾಗಿ ಅರ್ಜಿ ಸಲ್ಲಿಸಲು ಮೇ 4 ರಿಂದ 9 ರವರೆಗೆ ಅವಕಾಶ ಕಲ್ಪಿಸಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಸುತ್ತಿನಲ್ಲಿ ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ ಹೊಂದಿರದಿದ್ದ ಪಾಲಕರು ಇದೀಗ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.
ಈವರೆಗೂ 2.1 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಮೊದಲ ಸುತ್ತಿನ ಪ್ರವೇಶಾತಿಗೆ ಇಂದೇ ಕೊನೆಯ ದಿನವಾಗಿದೆ. ಈ ಪೈಕಿ 3,500 ಅಂಗವೈಕಲ್ಯ ಕೋಟಾದಡಿ ವಿಶೇಷ ಅಗತ್ಯವುಳ್ಳ ಮಕ್ಕಳ ವರ್ಗಕ್ಕೆ ಸೇರಿದವಾಗಿವೆ.

ಬೆಂಗಳೂರಿನಲ್ಲಿ ಹೆಚ್ಚು ಅರ್ಜಿ
ಬೆಂಗಳೂರು ಉತ್ತರ ವಲಯದಲ್ಲಿ 640 ಹಾಗೂ ಬೀದರ್ ನಲ್ಲಿ 240 ಅರ್ಜಿಗಳು ಸಲ್ಲಿಕೆಯಾಗಿದ್ದು. ಇವೆರೆಡು ಅತಿ ಹೆಚ್ಚು ಅರ್ಜಿಗಳು ಪಡೆದ ಜಿಲ್ಲೆಗಳಾಗಿವೆ. ಬಿಇಒ ಮೂಲಕ 247 ಅರ್ಜಿಗಳು ಸಲ್ಲಿಕೆಯಾಗಿದ್ದು, ಉಳಿದವು ನೇರವಾಗಿ ಪಾಲಕರೇ ಖುದ್ದಾಗಿ ಸಲ್ಲಿಸಿದ್ದಾರೆ. [ಅರ್ ಟಿ ಇ ಸೀಟು ನೀಡಲು ಖಾಸಗಿ ಶಾಲೆಗಳ ಕಳ್ಳಾಟ]
ಇಂದು ಕೊನೇ ದಿನ
ಈಗಾಗಲೇ ಮೊದಲ ಸುತ್ತಿನಲ್ಲಿ ಸೀಟು ಪಡೆದುಕೊಂಡಿರುವ ವಿದ್ಯಾರ್ಥಿಗಳು ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳಲು ಮೇ 10 ಕೊನೆಯ ದಿನವಾಗಿದೆ. ಕಳಪೆ ಗುಣಮಟ್ಟದ ಶಾಲೆಗಳಲ್ಲಿ ಸೀಟು ಸಿಕ್ಕವರು ಪ್ರವೇಶ ಪಡೆಯಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಮೇ 10 ರ ನಂತರ ನಿರಾಕರಿಸಿದ ಸೀಟುಗಳು ಹಾಗೂ ಹಾಲಿ ಉಳಿಕೆಯಾಗಿರುವ ಸೀಟುಗಳು ಎರಡಕ್ಕೂ ಸೇರಿ ಶೀಘ್ರದಲ್ಲೇ ಲಾಟರಿ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
2009 ರಿಂದ ಆರ್.ಟಿ.ಇ ಕಾಯ್ದೆ ಜಾರಿಗೆ ಬಂದಿದೆ. ಈ ಕಾಯ್ದೆ ಜಾತಿಗೆ ಬಂದಾಗಿನಿಂದ ಸಿ ಬಿ ಎಸ್ ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಬೋಧಿಸುವ ಎಲ್ಲಾ ಶಾಲೆಗಳೂ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ ಈ ಎಲ್ಲಾ ಶಾಲೆಗಳೂ ಎಲ್.ಕೆ.ಜಿ ಅಥವಾ 1ನೇ ತರಗತಿಯಿಂದ ಶೇ.25ರಷ್ಟು ಸೀಟನ್ನು ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಮೀಸಲಿರಿಸುವುದು ಕಡ್ಡಾಯ.
ಆದರೆ ಕೆಲ ಶಾಲೆಗಳು ಸರ್ಕಾರದ ನಿಯಮಕ್ಕೂ ತಮಗೂ ಸಂಬಂಧವಿಲ್ಲ ಎಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದು ಶಿಕ್ಷಣ ಇಲಾಖೆಯ ಕೋಪಕ್ಕೆ ಕಾರಣವಾಗಿದೆ. ಒಂದು ವೇಳೆ ಷರತ್ತು ಉಲ್ಲಂಘಿಸಿದರೆ ಅಂತಹ ಸಂಸ್ಥೆಗಳ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಇಲಾಖೆ ತಿಳಿಸಿದೆ.


Click it and Unblock the Notifications











