ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಮೌಲ್ಯಮಾಪನ ನಾಳೆಯಿಂದ ಶುರುವಾಗಲಿದೆ. ಈ ಬಾರಿ 48 ಕೇಂದ್ರಗಳಲ್ಲಿ ಸುಮಾರು 37 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದ್ದು 22 ಸಾವಿರ ಉಪನ್ಯಾಸಕರು ಮೌಲ್ಯಮಾಪನದಲ್ಲಿ ಭಾಗಿಯಾಗಲಿದ್ದಾರೆ.
ಮೌಲ್ಯಮಾಪನವು 10 ರಿಂದ 12 ದಿನದಲ್ಲಿ ಪೂರ್ಣಗೊಳ್ಳಲಿದ್ದು ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಉತ್ತರ ಪತ್ರಿಕೆಗಳ ಕೋಡಿಂಗ್ ಮತ್ತು ಡಿ ಕೋಡಿಂಗ್ ಪ್ರಕ್ರಿಯೆ ಶುರುವಾಗಿದ್ದು ಬುಧವಾರದಿಂದ ಮೌಲ್ಯಮಾಪನ ಶುರುವಾಗಲಿದೆ.
22 ಸಾವಿರ ಉಪನ್ಯಾಸಕರ ಬಳಕೆ
ಒಟ್ಟು 48 ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದ್ದು ಈ ಬಾರಿಯ ಮೌಲ್ಯಮಾಪನದಲ್ಲಿ 22 ಸಾವಿರ ಉಪನ್ಯಾಸಕರು ಭಾಗಿಯಾಗಲಿದ್ದಾರೆ. ವಿವಿಧ ವಿಷಯಗಳ 22 ಸಾವಿರ ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ನಿಯೋಜಿಸಲಾಗಿದ್ದು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ಉಪನ್ಯಾಸಕರೂ ಇದರಲ್ಲಿ ಸೇರಿದ್ದಾರೆ.
ಮೌಲ್ಯಮಾಪನಕ್ಕೆ 12 ದಿನ
ಆರುವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 37 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯಲಿದೆ. ಮೌಲ್ಯಮಾಪನ ಆರಂಭವಾದ 8 ದಿನದೊಳಗೆ ಶೇ 75ರಷ್ಟು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಳ್ಳಲಿದೆ. 12 ದಿನದೊಳಗೆ ಸಂಪೂರ್ಣ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಗಮನಿಸಿ: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಆನ್-ಲೈನ್ ನಲ್ಲಿ ಲಭ್ಯ
ಸಿಇಟಿ ನಂತರ ಫಲಿತಾಂಶ
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೇ 2 ಮತ್ತು 3ರಂದು ನಡೆಯಲಿದೆ. ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ) ಮೇ 7ರಂದು ನಡೆಯಲಿದೆ. ಇವೆರಡೂ ಪ್ರವೇಶ ಪರೀಕ್ಷೆಗಳು ಮುಗಿದ ನಂತರ ಮೇ 7ರಿಂದ 10ರೊಳಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.
ಇಡೇರಲಿದೆ ಉಪನ್ಯಾಸಕರ ಬೇಡಿಕೆ
ಪ್ರತಿ ವರ್ಷ ಮೌಲ್ಯಮಾಪನ ವೇಳೆ ಉಪನ್ಯಾಸಕರು ಪ್ರತಿಭಟನೆ ಮಾಡುತ್ತ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಿದ್ದರು, ಇದರಿಂದ ಮೌಲ್ಯಮಾಪನ ವಿಳಂಬವಾಗುವ ಸಾದ್ಯತೆಯಿಂದ ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಇಲಾಖೆ ಗೊಂದಲಕ್ಕೀಡಾಗುತ್ತಿತ್ತು ಆದರೆ ಈ ಬಾರಿ ಉಪನ್ಯಾಸಕರ ಬೇಡಿಕೆ ಇಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ.
ಉಪನ್ಯಾಸಕರೊಂದಿಗೆ ಸಭೆ ನಡೆಸಿದ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ಬೇಡಿಕೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದ ಮೌಲ್ಯಮಾಪನ ಬಹಿಷ್ಕಾರ ನಿರ್ಧಾರ ವಾಪಸ್ ಪಡೆದಿದ್ದಾರೆ. ಹೀಗಾಗಿ ಯಾವುದೇ ಬಹಿಷ್ಕಾರಗಳು ನಡೆಯದಂತೆ ಸುಗಮ ಮೌಲ್ಯಮಾಪನ ನಡೆಯಲಿದೆ ಎಂದು ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.