ಸರ್ವ ಶಿಕ್ಷಣ ಅಭಿಯಾನದಲ್ಲಿ ಕರ್ನಾಟಕ ಕಳಪೆ ಸಾಧನೆ ತೋರಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್ಆರ್ಡಿ) ಸಚಿವಾಲಯದ ವರದಿಯಲ್ಲಿ ಈ ವಿಚಾರ ತಿಳಿದು ಬಂದಿದೆ.
ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸುವಲ್ಲಿ ಮತ್ತು ಶಾಲೆ ತೊರೆದ ಮಕ್ಕಳನ್ನು ಮತ್ತೆ ಮುಖ್ಯವಾಹಿನಿಗೆ ತರುವುದರಲ್ಲಿ ಕರ್ನಾಟಕ ಕಳಪೆ ಸಾಧನೆ ತೋರಿದೆ. ಸರ್ವ ಶಿಕ್ಷಣ ಅಭಿಯಾನದ (ಎಸ್ಎಸ್ಎ) ಅಡಿಯಲ್ಲಿ ನಿಗದಿಪಡಿಸಲಾಗಿದ್ದ ಗುರಿ ತಲುಪಲು ಕರ್ನಾಟಕ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೇಂದ್ರದ ವರದಿ ಹೇಳಿದೆ.
ಶಿಕ್ಷಣ ಅಭಿಯಾನದ ಅಡಿಯಲ್ಲಿ ರಾಜ್ಯಗಳು ಒಂದು ವರ್ಷದ ಅವಧಿಯಲ್ಲಿ ಮಾಡಬೇಕಾದ ಕೆಲಸಗಳನ್ನು ಸಚಿವಾಲಯ ನಿಗದಿ ಪಡಿಸಿತ್ತು. ರಾಜ್ಯಗಳಿಗೆ ನೀಡಲಾಗಿದ್ದ ಗುರಿಗಳ ಅರ್ಧ ವಾರ್ಷಿಕ ಅವಧಿಯ ಪ್ರಗತಿಯನ್ನು ಸಚಿವಾಲಯ ಮೌಲ್ಯಮಾಪನ ನಡೆಸಿದ್ದು, 100 ಅಂಕಗಳಿಗೆ ಕರ್ನಾಟಕ 41-50 ಶ್ರೇಣಿಯ ಅಂಕ (ಗ್ರೇಡ್ ಸ್ಕೇಲ್) ಗಳಿಸಲು ಮಾತ್ರ ಸಾಧ್ಯವಾಗಿದೆ.
ಈ ಮೂಲಕ ಕಳಪೆ ಸಾಧನೆ ತೋರಿದ ಬಿಹಾರದಂತಹ ರಾಜ್ಯಗಳೊಂದಿಗೆ ಗುರುತಿಸಿಕೊಂಡಿದೆ. ಉತ್ತಮ ಅಂಕ ಗಳಿಸಿರುವ ನೆರೆಯ ಕೇರಳ, ಪುದುಚೇರಿ, ಮಹಾರಾಷ್ಟ್ರ, ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿವೆ.
ಶೂನ್ಯ ಅಂಕ
ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಕಲಿಕಾಮಟ್ಟ ಸುಧಾರಣೆ, ಶಿಕ್ಷಕರ ಆಂತರಿಕ ತರಬೇತಿ ಮತ್ತು ಶಾಲೆ ತೊರೆದ ಮಕ್ಕಳನ್ನು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವಲ್ಲಿ ಕರ್ನಾಟಕಕ್ಕೆ ಯಾವುದೇ ಅಂಕಗಳು ಸಿಕ್ಕಿಲ್ಲ. ಅಲ್ಲದೇ ಎಸ್ಎಸ್ಎ ಅಡಿಯಲ್ಲಿ ಶಾಲೆಗಳನ್ನು ಪರಸ್ಪರ ಬೆಸೆಯುವ ಪ್ರಯತ್ನದಲ್ಲೂ ಕರ್ನಾಟಕಕ್ಕೆ ಶೂನ್ಯ ಅಂಕವೇ ದಕ್ಕಿದೆ.
ಅತ್ಯುತ್ತಮ ಬೋಧನಾ ವ್ಯವಸ್ಥೆ ಅಳವಡಿಸಿಕೊಂಡಿರುವ ಅಥವಾ ಉತ್ತಮ ಶಿಕ್ಷಣ ವ್ಯವಸ್ಥೆ ಪರಿಪಾಲಿಸುತ್ತಿರುವ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿರುವ ಶಾಲೆಗಳನ್ನು ಗ್ರಾಮೀಣ ಭಾಗದ ಶಾಲೆಗಳೊಂದಿಗೆ ಜೋಡಿಸುವ ಕೆಲಸದಲ್ಲೂ ಕರ್ನಾಟಕ ವಿಫಲವಾಗಿದೆ.
ಇದನ್ನು ಗಮನಿಸಿ: ಕೆಎಸ್ಒಯು ಜಾಗಕ್ಕೆ ನೂತನ ಮುಕ್ತ ವಿಶ್ವವಿದ್ಯಾಲಯ?
ಉತ್ತಮ ಸಾಧನೆ
ಮಕ್ಕಳ ಆಧಾರ್ ಸಂಖ್ಯೆ ಜೋಡಣೆ, ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆಯಲ್ಲಿ ಉತ್ತಮ ಸಾಧನೆ
ಸಾಧಕ ರಾಜ್ಯಗಳು
91-100 ಶ್ರೇಣಿಯ ಅಂಕಗಳಿಸಿರುವ ಕೇರಳ, ಪುದುಚೇರಿ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರಾಖಂಡ ರಾಜ್ಯಗಳು ಅತ್ಯುತ್ತಮ ಸಾಧನೆ ತೋರಿವೆ.
ಪಶ್ವಿಮ ಬಂಗಾಳ ಶೂನ್ಯ ಸಾಧನೆ
ರಾಜ್ಯಗಳ ಪೈಕಿ ಅತ್ಯಂತ ಕಳಪೆ ಸಾಧನೆ ತೋರಿದ ರಾಜ್ಯ ಪಶ್ಚಿಮ ಬಂಗಾಳ. ಪ್ರತಿ ವಿಭಾಗದಲ್ಲೂ ಶೂನ್ಯ ಅಂಕಗಳಿಸಿದೆ.
ಇದನ್ನು ಗಮನಿಸಿ: ಮಕ್ಕಳ ದಿನಾಚರಣೆ ಪ್ರಯುಕ್ತ ಕೆರಿಯರ್ ಇಂಡಿಯಾ 'ಚಿತ್ರಕಲಾ-2017'