ಡ್ರೋನ್ ಎಂದಾಕ್ಷಣ ತಟ್ಟನೆ ನೆನಪಾಗುವುದು ಚಿಕ್ಕ ಆಟಿಕೆಯಂತಿರುವ ನಾಲ್ಕು ಬದಿಯಲ್ಲಿ ರೆಕ್ಕೆಯಿರುವ ರಿಮೋಟ್ ಚಾಲಿತ ಹಾರಾಡುವ ಉಪಕರಣ, ಫೋಟೋಗ್ರಫಿಯಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಡೋನ್ ಈಗ ತನ್ನ ವ್ಯಾಪ್ತಿಯನ್ನು ಎಲ್ಲಾ ಕ್ಷೇತ್ರದ ಕಡೆಗೂ ವಿಸ್ತರಿಸುತ್ತಿದೆ.
ಡ್ರೋನ್ ಉಪಕರಣವನ್ನು ಹೇಗೆಲ್ಲ ಬಳಕೆ ಮಾಡಬಹುದು ಎನ್ನುವುದಕ್ಕೆ ದಿನಕ್ಕೊಂದು ಉದಾಹರಣೆಗಳು ನಮಗೆ ಸಿಗುತ್ತಲೆ ಇರುತ್ತವೆ. ಸಿನಿಮಾ ಮತ್ತು ಮದುವೆ ಸಮಾರಂಭಗಳಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಡ್ರೋನ್ ಇನ್ನು ಮುಂದೆ ಗದ್ದೆಗಳಲ್ಲೂ ತನ್ನ ಹಾರಾಟ ನಡೆಸಲಿದೆ.
ಎಲ್ಲೆಂದರಲ್ಲಿ ಸರಾಗವಾಗಿ ಹಾರಾಡುವ ಡ್ರೋನ್ ಯಂತ್ರವನ್ನು ಹೊಲಗದ್ದೆಗೆ ಪರಿಚಯಿಸಲಾಗಿದ್ದು, ರಾಯಚೂರಿನ ಕೃಷಿವಿದ್ಯಾಲಯದ ಎಂ.ಟೆಕ್ ವಿದ್ಯಾರ್ಥಿ ಯಲ್ಲಪ್ಪ ರಾರಾವಿ ಇದರ ಪ್ರಾಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಡ್ರೋನ್ ಮೂಲಕ ಹೊಲಗಳಲ್ಲಿ ಕೀಟನಾಶಕ ಸಿಂಪಡಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಡ್ರೋನ್ ಕಾರ್ಯವೈಖರಿ
ರಿಮೋಟ್ ಮತ್ತು ಜಿಪಿಎಸ್ ಸಹಾಯದಿಂದ ಹಾರಾಡುವ ಈ ಡ್ರೋನ್ ಯಂತ್ರಕ್ಕೆ ಹೊಲದ ನಕ್ಷೆಯನ್ನು ಅಳವಡಿಸಿದರೆ ಸ್ವಯಂ ಚಾಲನ ಶಕ್ತಿಯಿಂದ ನಕ್ಷೆಯಲ್ಲಿ ನಿಗದಿಪಡಿಸಿದ ಜಾಗಗಳಲ್ಲಿ ಮಾತ್ರ ಔಷದಿ ಸಿಂಪಡಿಸುತ್ತದೆ.
ಡ್ರೋನ್ ಅನುಕೂಲ
ಡ್ರೋನ್ ಸಹಾಯದಿಂದ ಔಷಧಿ ಸಿಂಪಡಿಸುವುದರಿಂದ ಹಲವು ಅನುಕೂಳಿವೆ. ಕೂಲಿ ಆಳುಗಳ ಸಮಸ್ಯೆಯಿಂದ ಬೇಸತ್ತ ರೈತರಿಗೆ ಇದು ವರದಾನವಾಗಲಿದೆ. ರೈತನೊಬ್ಬನೆ ಇದನ್ನು ನಿಯಂತ್ರಿಸಬಹುದಾಗಿದ್ದು ತನಗೆ ಬೇಕಾದ ನಿರ್ದಿಷ್ಟ ಎತ್ತರದಿಂದ ಔಷಧಿ ಸಿಂಪಡಿಸಬಹುದಾಗಿದೆ. ಅಲ್ಲದೇ ಔಷಧಿ ಸಿಂಪಡಿಸುವ ವೇಳೆ ಮೈಮೇಲೆ ಕೀಟನಾಶಕ ಬಿದ್ದು ಕಾಯಿಲೆಗಳಿಗೆ ತುತ್ತಾಗುವುದು ತಪ್ಪುತ್ತದೆ.
ಯಲ್ಲಪ್ಪ ಪರಿಚಯ
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮದ ಯಲ್ಲಪ್ಪಮೂಲತಃ ಕೃಷಿಕುಟುಂಬದಿಂದ ಬಂದವರು. ಸದಾ ಹೊಸತನ್ನೇದಾರು ಮಾಡುಲು ಬಯಸುವ ಯಲ್ಲಪ್ಪ ಇಂಜಿನಿಯರಿಂಗ್ ಪದವಿಯನ್ನು ಕಲಿತಿದ್ದನ್ನು ಕೃಷಿಯಲ್ಲಿ ಬಳಸುವ ಯೋಚನೆಗೆ ತೊಡಗಿಸಿಕೊಂಡರು.
2011-12 ರಲ್ಲಿ ಸೋಲಾರ್ ಶಕ್ತಿಯಿಂದ ಕಾರ್ಯನಿರ್ವಹಿಸುವ ಯಂತ್ರವನ್ನು ಸಿದ್ದಗೊಳಿಸಿ ಬೆಳೆಗಳಿಗೆ ಔಷಧಿ ಸಿಂಪಡಿಸಬಹುದು ಎಂದು ತೋರಿಸಿಕೊಟ್ಟಿದ್ದರು. ಈಗ ಡ್ರೋನ್ ಮೂಲಕ ಮತ್ತಷ್ಟು ಸುಲಭವಾಗಿ ಕೀಟನಾಶಕ ಸಿಂಪಡಿಸುವ ವಿಧಾನ ಸಿದ್ದಪಡಿಸಿದ್ದಾರೆ.
ಸದ್ಯ 5 ಲೀ ಸಾಮರ್ಥ್ಯದ ಡ್ರೋನ್ ಸಿದ್ದಪಡಿಸಿರುವ ಯಲ್ಲಪ್ಪ ರಾರಾವಿ ಅವರಿಗೆ 25 ಲೀ ಸಾಮರ್ಥ್ಯ ಮತ್ತಷ್ಟು ಉನ್ನತ ಗುಣಮಟ್ಟದ ಡ್ರೋನ್ ನಿರ್ಮಾಣ ಮಾಡುವ ಗುರಿ ಇದೆ. ಒಟ್ಟಿನಲ್ಲಿ ತಮ್ಮ ಕಾಲೇಜಿನ ಉಪನ್ಯಾಸಕರ ಸಹಕಾರದೊಂದಿಗೆ ಹೊಸ ಪ್ರಯೋಗಗಳಿಗೆ ಮುಂದಾಗಿರುವ ಯಲ್ಲಪ್ಪ ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ನೀಡಬೇಕೆಂಬ ಉದ್ದೇಶವನ್ನು ಹೊಂದಿದ್ದಾರೆ.
ಕೃಷಿಯಲ್ಲಿ ಡ್ರೋನ್ ಬಳಕೆ
ಈ ಹಿಂದೆ 2016 ರಲ್ಲಿ ಮಂಗಳೂರಿನಲ್ಲಿ ಡ್ರೋನ್ ಮೂಲಕ ಕೀಟನಾಶಕ ಸಿಂಪಡಿಸುವ ವಿಧಾನವನ್ನು ಪ್ರಯೋಗ ಮಾಡಲಾಗಿತ್ತು. ಐಟಿಐಇ, ಮಾರುತ್ ಹಾಗೂ ಬೀಳಗಿಯ ಎ.ಬಿ.ಹೊಸಗೌಡರ ಬಯೋ ರಿಸರ್ಚ್ ಸೆಂಟರ್ ಡ್ರೋನ್ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದವು ಅಲ್ಲದೇ ಹಲವು ಕೃಷಿ ಮೇಳಗಳಲ್ಲಿ ಇದರ ಪ್ರಯೋಜನದ ಬಗ್ಗೆ ತಿಳಿಸಲಾಗಿತ್ತು.